ಇಸ್ಲಾಮಿಕ್, ಹಿಂದುತ್ವ ಗುಂಪುಗಳ ಬಗ್ಗೆ ಎಚ್ಚರಿಕೆ ನೀಡಿದ್ದ ದಾಖಲೆಗಳು ಪೊಲೀಸ್ ವೆಬ್ಸೈಟ್ನಿಂದ ಮಾಯ: ವರದಿ
![ಇಸ್ಲಾಮಿಕ್, ಹಿಂದುತ್ವ ಗುಂಪುಗಳ ಬಗ್ಗೆ ಎಚ್ಚರಿಕೆ ನೀಡಿದ್ದ ದಾಖಲೆಗಳು ಪೊಲೀಸ್ ವೆಬ್ಸೈಟ್ನಿಂದ ಮಾಯ: ವರದಿ ಇಸ್ಲಾಮಿಕ್, ಹಿಂದುತ್ವ ಗುಂಪುಗಳ ಬಗ್ಗೆ ಎಚ್ಚರಿಕೆ ನೀಡಿದ್ದ ದಾಖಲೆಗಳು ಪೊಲೀಸ್ ವೆಬ್ಸೈಟ್ನಿಂದ ಮಾಯ: ವರದಿ](https://www.varthabharati.in/sites/default/files/images/articles/2023/01/27/365214-1674833388.jpg)
ಹೊಸದಿಲ್ಲಿ,ಜ.27: ದೇಶದಲ್ಲಿ ಹೆಚ್ಚುತ್ತಿರುವ ಮೂಲಭೂತೀಕರಣಕ್ಕೆ ಸಂಬಂಧಿಸಿದಂತೆ ಇಸ್ಲಾಮಿಕ್ ಮತ್ತು ಹಿಂದುತ್ವ ಸಂಘಟನೆಗಳ ಪಾತ್ರದ ಕುರಿತು ಎಚ್ಚರಿಕೆಯನ್ನು ನೀಡಿದ್ದ ದಾಖಲೆಗಳು ಬುಧವಾರ ಬೆಳಿಗ್ಗೆ ಅಧಿಕೃತ ವೆಬ್ಸೈಟ್ನಿಂದ ತೆಗೆದುಹಾಕಲಾಗಿರುವ ಲೇಖನಗಳಲ್ಲಿ ಸೇರಿವೆ ಎಂದು Indianexpress.com ವರದಿ ಮಾಡಿವೆ.
ಗುಪ್ತಚರ ಸಂಸ್ಥೆ (ಐಬಿ)ಯು ಜ.20ರಿಂದ ಜ.22ರವರೆಗೆ ಆಯೋಜಿಸಿದ್ದ ಡಿಜಿಪಿಗಳು ಮತ್ತು ಐಜಿಪಿಗಳ ವಾರ್ಷಿಕ ಸಮ್ಮೇಳನದಲ್ಲಿ ಈ ಲೇಖನಗಳನ್ನು ಸಲ್ಲಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
2022ರ ಸಮ್ಮೇಳನಕ್ಕಾಗಿ ಸಲ್ಲಿಸಿದ್ದ ಲೇಖನಗಳನ್ನು ತೆಗೆಯಲಾಗಿದೆ,ಆದರೆ 2021ರ ಲೇಖನಗಳು ವೆಬ್ಸೈಟ್ನಲ್ಲಿ ಲಭ್ಯವಿವೆ ಎಂದು ವರದಿಗಳು ತಿಳಿಸಿವೆ.
ಪೊಲೀಸ್ ಅಧಿಕಾರಿಗಳು 2022ರಲ್ಲಿ ಸಲ್ಲಿಸಿದ್ದ ಕೆಲವು ಲೇಖನಗಳು ಭಾರತ-ಚೀನಾ ಗಡಿಯಲ್ಲಿನ ಸ್ಥಿತಿಯನ್ನು ಮತ್ತು ಮುಂಚೂಣಿ ಪ್ರದೇಶಗಳಲ್ಲಿ ಚೀನಾದ ಆಕ್ರಮಣಕಾರಿ ವರ್ತನೆಗಳನ್ನೂ ಉಲ್ಲೇಖಿಸಿವೆ. ಇವು ರಾಷ್ಟ್ರೀಯ ಭದ್ರತೆಗೆ ಪ್ರಮುಖ ಸವಾಲುಗಳಾಗಿವೆ ಎಂದೂ ಲೇಖನಗಳು ಬೆಟ್ಟು ಮಾಡಿವೆ.
ಪೂರ್ವ ಲಡಾಖ್ ಪ್ರದೇಶದಲ್ಲಿಯ 65 ಗಸ್ತು ಕೇಂದ್ರಗಳ ಪೈಕಿ 26ರಲ್ಲಿ ಭಾರತವು ಪ್ರವೇಶವನ್ನು ಕಳೆದುಕೊಂಡಿದೆ ಎಂದು ತನ್ನ ಲೇಖನದಲ್ಲಿ ತಿಳಿಸಿರುವ ಲೇಹ್ನ ಹಿರಿಯ ಎಸ್ಪಿ ಪಿ.ಡಿ.ನಿತ್ಯಾ ಅವರು,ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷಗಳ ಪ್ರಮುಖ ಸ್ಥಳವಾಗಿರುವ ಪೂರ್ವ ಲಡಾಖ್ನ ಕಾರಾಕೋರಂ ಕಣಿವೆ ಮತ್ತು ಚುಮುರ್ ನಡುವಿನ 26 ಗಸ್ತುಕೇಂದ್ರಗಳಲ್ಲಿ ಗಸ್ತು ಕರ್ತವ್ಯವನ್ನು ನಿರ್ವಹಿಸಲು ಭಾರತೀಯ ಭದ್ರತಾ ಪಡೆಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದು ಲೇಖನವು ಹಿಂದುತ್ವ ಗುಂಪುಗಳಾದ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗ ದಳಗಳನ್ನು ಮೂಲಭೂತವಾದಿ ಸಂಘಟನೆಗಳನ್ನಾಗಿ ಗುರುತಿಸಿದೆ ಎಂದೂ ವರದಿಯು ತಿಳಿಸಿದೆ.