ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಉಮರ್ ಅಬ್ದುಲ್ಲಾ
![ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಉಮರ್ ಅಬ್ದುಲ್ಲಾ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಉಮರ್ ಅಬ್ದುಲ್ಲಾ](https://www.varthabharati.in/sites/default/files/images/articles/2023/01/27/365227-1674834047.jpeg)
ಕಾಶ್ಮೀರ, ಜ. 27: ಭಾರತ್ ಜೋಡೊ ಯಾತ್ರೆ(Bharat Jodo Yatra)ಯಲ್ಲಿ ಶುಕ್ರವಾರ ರಾಹುಲ್ ಗಾಂಧಿ(Rahul Gandhi) ಅವರೊಂದಿಗೆ ಜಮ್ಮು ಹಾಗೂ ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಉಮರ್ ಅಬ್ದುಲ್ಲಾ(Omar Abdullah) ಹೆಜ್ಜೆ ಹಾಕಿದ್ದಾರೆ. ಕಾಶ್ಮೀರದ ರಾಂಬಾನ್ ಜಿಲ್ಲೆಯ ಬನಿಹಾಲ್ ನಲ್ಲಿ ಪಾದಯಾತ್ರೆ ಸಾಗುತ್ತಿದ್ದಾಗ ಉಮರ್ ಅಬ್ದುಲ್ಲಾ ಅವರು ರಾಹುಲ್ ಗಾಂಧಿ ಅವರೊಂದಿಗೆ ಸೇರಿದರು.
ಉಮರ್ ಅಬ್ದುಲ್ಲಾ ಅವರು ರೈಲ್ವೆ ನಿಲ್ದಾಣದ ಸಮೀಪ ಯಾತ್ರೆಯಲ್ಲಿ ಪಾಲೊಂಡರು ಹಾಗೂ ಟ್ರಕ್ ಯಾರ್ಡ್ ವರೆಗೆ ಸುಮಾರು 2 ಕಿ.ಮೀ. ಪಾದಯಾತ್ರೆ ನಡೆಸಿದರು. ನ್ಯಾಷನಲ್ ಕಾನ್ಫರೆನ್ಸ್ ನ ಪ್ರಾಂತೀಯ ಅಧ್ಯಕ್ಷ ನಾಸಿರ್ ಅಸ್ಲಾಂ ವಾಮಿ(Nasir Aslam Wani) ಹಾಗೂ ಮಾಜಿ ಸಚಿವೆ ಸಕೀನಾ(Sakina) ಸೇರಿದಂತೆ ಎನ್ಸಿಯ ಇತರ ಹಲವು ನಾಯಕು ಈ ಇಬ್ಬರೊಂದಿಗೆ ಪಾದ ಯಾತ್ರೆಯಲ್ಲಿ ಪಾಲ್ಗೊಂಡರು. ಟ್ರಕ್ ಯಾರ್ಡ್ ನಲ್ಲಿ ರಾಹುಲ್ ಗಾಂಧಿ ಹಾಗೂ ಉಮರ್ ಅಬ್ದುಲ್ಲಾ ಅವರು ಹಲವು ವಿಷಯಗಳ ಬಗ್ಗೆ ಚರ್ಚೆ ನೆಡಸಿದರು.
ಉಮರ್ ಅಬ್ದುಲ್ಲಾ ಅವರು, ‘‘ದಿಲ್ಲಿಯಲ್ಲಿ ನಮ್ಮ ಧ್ವನಿ ಕೇಳುವುದಿಲ್ಲ. ಕಾಶ್ಮೀರ ಪಂಡಿತರ ಕುಟುಂಬಕ್ಕೆ ಸೇರಿದ ರಾಹುಲ್ ಗಾಂಧಿ ಅವರು ಇಲ್ಲಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ’’ ಎಂದಿದ್ದಾರೆ. ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಉಮರ್ ಅಬ್ದುಲ್ಲಾ, ‘‘ಅವರು ಹೇಡಿಗಳು. ಇಂದು ಇಲ್ಲಿ ಚುನಾವಣೆ ನಡೆಸಿದರೆ, ಅವರು ಜಯ ಗಳಿಸಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ಭಾರತ್ ಜೋಡೊ ಯಾತ್ರೆ ರಾಹುಲ್ ಗಾಂಧಿ ಅವರ ವರ್ಚಸ್ಸನ್ನು ಸುಧಾರಿಸುವ ಗುರಿ ಹೊಂದಿಲ್ಲ. ಬದಲಾಗಿ ದೇಶದ ಪರಿಸ್ಥಿತಿಯನ್ನು ಸುಧಾರಿಸುವ ಗುರಿ ಹೊಂದಿದೆ’’ ಎಂದು ಉಮರ್ ಅಬ್ದುಲ್ಲಾ ಹೇಳಿದರು. ‘‘ನಾವು ವ್ಯಕ್ತಿಯೊಬ್ಬರ ವರ್ಚಸ್ಸಿಗಾಗಿ ಈ ಯಾತ್ರೆಗೆ ಕೈಜೋಡಿಸಿಲ್ಲ. ದೇಶದ ವರ್ಚಸ್ಸಿಗಾಗಿ ಈ ಯಾತ್ರೆಗೆ ಕೈ ಜೋಡಿಸಿದ್ದೇವೆ’’ ಎಂದು ಉಮರ್ ಅಬ್ದುಲ್ಲಾ ಅವರು ಹೇಳಿದರು.