ಮಂಗಳೂರು: ಸರ ಸುಲಿಗೆಯ ಆರೋಪ; ಪೊಲೀಸ್ ಕಾನ್ಸ್ಟೇಬಲ್ ದೋಷಮುಕ್ತ

ಮಂಗಳೂರು: ನಗರದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಸುಲಿಗೆಯ ಪ್ರಕರಣದ ಆರೋಪ ಎದುರಿಸುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ನನ್ನು ದೋಷಮುಕ್ತಗೊಳಿಸಿ ಮಂಗಳೂರಿನ ನ್ಯಾಯಾಲಯವು ತೀರ್ಪು ನೀಡಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸಂದೇಶ 2016ರ ಎ.12ರಂದು ಮಂಗಳೂರಿಗೆ ಆಗಮಿಸಿದ್ದರು. ಆ ವೇಳೆ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಶ್ರೀ ದೇವಿ ಕಾಲೇಜು ಕಡೆಗೆ ಹೋಗುವ ರಸ್ತೆಯಲ್ಲಿ ಮಹಿಳೆಯೋರ್ವರಲ್ಲಿ ಕುಡಿಯಲು ನೀರು, ಪೋನ್ ನಂಬರ್ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.
ಆ ವೇಳೆ ಮಹಿಳೆಯು ದೂಡಿದ್ದು, ಆವಾಗ ಆರೋಪಿ ಸಂದೇಶ ಮಹಿಳೆಗೆ ಗಾಯಗೊಳಿಸಿ ಚಿನ್ನದ ಸರದ ತುಂಡುಗಳನ್ನು ಸುಲಿಗೆ ಮಾಡಿದ್ದನೆಂದು ಆರೋಪಿಸಿ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಸಂದೇಶ್ನನ್ನು ದೋಷ ಮುಕ್ತಗೊಳಿಸಿ ಸೋಮವಾರ ತೀರ್ಪು ನೀಡಿದ್ದಾರೆ.
ಅರೋಪಿಯ ಪರವಾಗಿ ಮಂಗಳೂರಿನ ವಕೀಲರಾದ ಜಗದೀಶ್ ಕೆ.ಆರ್. ಮತ್ತು ಪ್ರಸಾದ್ ಪಾಲನ್ ವಾದ ಮಂಡಿಸಿದ್ದರು.