ರಮೇಶ್ ಜಾರಕಿಹೊಳಿ ತಮ್ಮ ಬೇನಾಮಿ ಆಸ್ತಿ ಕುರಿತ ತನಿಖೆಗೆ ಸಿದ್ಧರಿದ್ದಾರೆಯೇ:? ಎಂ.ಲಕ್ಷ್ಮಣ್
''ತನ್ನ ಅಕ್ರಮ ಮುಚ್ಚಿಕೊಳ್ಳಲು ಡಿಕೆಶಿ ವಿರುದ್ಧ ಇಲ್ಲಸಲ್ಲದ ಆರೋಪ''
![ರಮೇಶ್ ಜಾರಕಿಹೊಳಿ ತಮ್ಮ ಬೇನಾಮಿ ಆಸ್ತಿ ಕುರಿತ ತನಿಖೆಗೆ ಸಿದ್ಧರಿದ್ದಾರೆಯೇ:? ಎಂ.ಲಕ್ಷ್ಮಣ್ ರಮೇಶ್ ಜಾರಕಿಹೊಳಿ ತಮ್ಮ ಬೇನಾಮಿ ಆಸ್ತಿ ಕುರಿತ ತನಿಖೆಗೆ ಸಿದ್ಧರಿದ್ದಾರೆಯೇ:? ಎಂ.ಲಕ್ಷ್ಮಣ್](https://www.varthabharati.in/sites/default/files/images/articles/2023/01/31/365681-1675176307.jpg)
ಮೈಸೂರು,ಜ.31: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಭ್ರಷ್ಟಾಚಾರದ ಹಿಟ್ ಅಂಡ್ ರನ್ ರೀತಿ ಆರೋಪ ಮಾಡಿರುವ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಬೇನಾಮಿ ಅಸ್ತಿ ಕುರಿತ ತನಿಖೆಗೆ ಸಿದ್ಧರಿದ್ದಾರೆಯೇ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ಯಾಂಕ್ನಲ್ಲಿ ಸಾಲ ಪಡೆದಿರುವುದು ಸೇರಿದಂತೆ ತನ್ನ ಅಕ್ರಮ ಮುಚ್ಚಿಕೊಳ್ಳಲು ಶಿವಕುಮಾರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಆರೋಪಿಸಿದರು.
ಶಾಲಾ ದಾಖಲಾತಿ ಪ್ರಕಾರ ಅವರ ಹೆಸರು ರಾಮಪ್ಪ ಎಂದಿದೆ. ಆದರೆ, ಹೆಸರು ಬದಲಾವಣೆ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಸೂಕ್ತ ದಾಖಲೆ ನೀಡಿಲ್ಲ. ಇದು ಬಹುದೊಡ್ಡ ಮೋಸವಾಗಿದೆ. ನಿಯಮದ ಪ್ರಕಾರ, ನ್ಯಾಯಾಲಯದಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳದೇ ತಾವೇ ಬದಲಿಸಿಕೊಂಡಿದ್ದಾರೆ.ಡಿ.ಕೆ ಶಿವಕುಮಾರ್ ಹರಿದ ಚಪ್ಪಲಿ ಹಾಕ್ತಿದ್ದ ಅಂತ ಹೇಳಿದ್ದಾರೆ. ಗೋಕಾಕ್ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ 300 ಕ್ಕೂ ಹೆಚ್ಚು ಕೇಸ್ ಗಳಿವೆ. ಕೋಮು ಗಲಭೆ, ಜನರನ್ನ ಎದರಿಸಿ ಬೆದರಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದ ವ್ಯಕ್ತಿ. ಡಿಕೆ ಶಿವಕುಮಾರ್ ಗೆ ಲಂಡನ್ ಮತ್ತು ದುಬೈ ನಲ್ಲಿ ಮನೆ ಇದೆ ಅಂತ ಆರೋಪ ಮಾಡಿದ್ದಾರೆ ಎಂದರು.
'ರಮೇಶ್ ಜಾರಕಿಹೊಳಿ ಬೇನಾಮಿ ಆಸ್ತಿ ಬೆಂಗಳೂರು ಮುಂಬೈ ಎಲ್ಲಾ ಕಡೆ ಇದೆ. ಸೌಭಾಗ್ಯ ಶುಗರ್ ನಿಂದ 860 ಕೋಟಿ ರೂ ವನ್ನ ಸುಮಾರು 9 ಬ್ಯಾಂಕ್ ಗಳಲ್ಲಿ ಸಾಲ ಪಡಿದಿದ್ದಾರೆ.ಅವರು ಎಸಗಿರುವ ಅಕ್ರಮ, ಅವ್ಯವಹಾರ ಮೊದಲಾದವುಗಳ ಬಗ್ಗೆ ದಾಖಲೆಗಳಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು' ಎಂದು ತಿಳಿಸಿದರು.
ವಿವಿಧ ಬ್ಯಾಂಕ್ಗಳಲ್ಲಿ ರೂ. 850 ಕೋಟಿ ಸಾಲ ಮಾಡಿ ತನ್ನ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮನೆ ಯಾರದ್ದು? ಜಲಸಂಪನ್ಮೂಲ ಸಚಿವರಾಗಿದ್ದಾಗ ಗುತ್ತಿಗೆದಾರನಿಗೆ ಟೆಂಡರ್ ನೀಡಲು ಮುಂಬೈನಲ್ಲಿ 100 ಕೋಟಿ ಬೆಲೆಯ ನಿವೇಶನ ಪಡೆದಿದ್ದಾರೆ. ಆ ಗುತ್ತಿಗೆದಾರ ಯಾರು? ಖಾನಾಪುರದಲ್ಲಿ 500 ಎಕರೆ ಬೇನಾಮಿ ಹೆಸರಲ್ಲಿದೆ. ಗೋಕಾಕದಲ್ಲಿ ರೂ. 30 ಕೋಟಿ ವೆಚ್ಚದಲ್ಲಿ ಮನೆ ಕಟ್ಟುತ್ತಿದ್ದಾರೆ. ಕೆಲ ದಿನಗಳ ಹಿಂದೆ 4 ಕೋಟಿ ಬೆಲೆ ಬಾಳುವ ಕಾರು ಖರೀದಿಸಿದ್ದಾರೆ. ದಿವಾಳಿಯಾದ ವ್ಯಕ್ತಿ ಬಳಿ ಇಷ್ಟೆಲ್ಲಾ ಆಸ್ತಿ ಇರಲು ಹೇಗೆ ಸಾಧ್ಯ? ಹೀಗಾಗಿ, ಬೇನಾಮಿ ಆಸ್ತಿ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ತನಿಖೆಗೆ ಡಿ.ಕೆ.ಶಿವಕುಮಾರ್ ಅವರನ್ನು ನಾನು ಒಪ್ಪಿಸುತ್ತೇನೆ. ರಮೇಶ ಸಿದ್ಧವಿದ್ದಾರೆಯೇ? ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ.ಮಹೇಶ್, ಸೇವಾ ದಳದ ಗಿರೀಶ್ ಉಪಸ್ಥಿತರಿದ್ದರು.