ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಆರ್. ಅಶೋಕ್ ಮುಕ್ತ: ಸಿಎಂ ಬೊಮ್ಮಾಯಿ

ಬೆಂಗಳೂರು,ಫೆ.10: 'ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಮುಕ್ತ ಮಾಡುವ ಆಜ್ಞೆ ಹೊರಡಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದ ಬಳಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಸಚಿವ ಅಶೋಕ್ ಅವರು ತನ್ನನ್ನು ಉಸ್ತುವಾರಿ ಸ್ಥಾನದಿಂದ ಮುಕ್ತ ಮಾಡಿ ಎಂದು ಪತ್ರ ಬರೆದಿದ್ದಾರೆ. ಹೀಗಾಗಿ ಅವರ ಆಶೆಯಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಮುಕ್ತ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಇನ್ನೂ ಯಾರನ್ನೂ ನೇಮಕ ಮಾಡಿಲ್ಲ ಎಂದು ಹೇಳಿದ್ದಾರೆ' ಎಂದು ತಿಳಿಸಿದರು.
ಆರ್.ಅಶೋಕ್ ಅವರ ನೇಮಕಕ್ಕೆ ಮಂಡ್ಯದಲ್ಲಿ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು.
► ಬಿಜೆಪಿಗರಿಂದಲೇ ಮಂಡ್ಯದಲ್ಲಿ ‘GO BACK ಆರ್.ಅಶೋಕ್’ ಅಭಿಯಾನ
ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಮದ್ದೂರು, ನಾಗಮಂಗಲ ಮುಂತಾದ ಕಡೆಗಳಲ್ಲಿ ‘ಗೋ ಬ್ಯಾಕ್ ಅಶೋಕ್’, ‘ಬಾಯ್ಕಾಟ್ ಆರ್.ಅಶೋಕ್’, ‘ಮಂಡ್ಯ ಬಿಟ್ಟು ಹೋಗಿ’ ಎನ್ನುವ ಬಿಜೆಪಿ ಚಿಹ್ನೆ ಹೊಂದಿರುವ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಅಶೋಕ್ ಗೋ ಬ್ಯಾಕ್ ಅಭಿಯಾನವನ್ನು ಬಿಜೆಪಿ ಕಾರ್ಯಕರ್ತರು ನಡೆಸಿದ್ದರು.
ಅಶೋಕ್ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಅಲ್ಲದೇ, ಜಿಲ್ಲೆಯವರೇ ಆದ ನಾರಾಯಣ ಗೌಡ ಅವರನ್ನ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಕೆಲವು ಬಿಜೆಪಿ ಮುಖಡರು ಒತ್ತಾಯಿಸಿದ್ದರು.







