ಕಲಬುರಗಿ: ಕೆಕೆಆರ್ಟಿಸಿ ನೇಮಕಾತಿ; ತೂಕ ಹೆಚ್ಚಳಕ್ಕೆ ಒಳ ಉಡುಪಿನಲ್ಲಿ ಕಬ್ಬಿಣದ ಕಲ್ಲು ಕಟ್ಟಿಕೊಂಡು ಬಂದ ಅಭ್ಯರ್ಥಿಗಳು

ಕಲಬುರಗಿ, ಫೆ.9: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ(ಕೆಕೆಆರ್ಟಿಸಿ) ಚಾಲಕ ಕಂ ನಿರ್ವಾಹಕ ನೇಮಕಾತಿಯ ದೇಹದಾಢ್ಯ(ಫಿಸಿಕಲ್ ಫಿಟ್ನೆಸ್ ಟೆಸ್ಟ್) ಪರೀಕ್ಷೆಯಲ್ಲಿ ನಿಗದಿತ ತೂಕ ತೋರಿಸಲು ಒಳ ಉಡುಪುಗಳಲ್ಲಿ ಕಬ್ಬಿಣದ ತುಂಡುಗಳನ್ನು ಇರಿಸಿಕೊಂಡ ಬಂದ ಅಭ್ಯರ್ಥಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ಕೆಕೆಆರ್ಟಿಸಿಯು 1,619 ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಸುಮಾರು 39 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಸಂಸ್ಥೆಯ ಕೇಂದ್ರ ಕಚೇರಿ ಸಮೀಪ ಡಿಸೆಂಬರ್ನಿಂದ ದೇಹದಾಢ್ರ್ಯ ಪರೀಕ್ಷೆ ನಡೆಯುತ್ತಿದೆ.
ಫಿಸಿಕಲ್ ಪರೀಕ್ಷೆಯಲ್ಲಿ ಅಕ್ರಮವಾಗಿ ಪಾಸಾಗಲು ಕಡಿಮೆ ತೂಕದ ಅಭ್ಯರ್ಥಿಯೊಬ್ಬ 5 ಕೆ.ಜಿ.ಯ ಕಬ್ಬಿಣದ ಕಲ್ಲನ್ನು ಒಳ ಉಡುಪಿನಲ್ಲಿ ಇರಿಸಿಕೊಂಡಿದ್ದ. ಮತ್ತೆ ಕೆಲವರು 10 ಕೆಜಿ ಕಬ್ಬಿಣ ತುಂಡುಗಳನ್ನು ತೊಡೆಗೆ, ಸೈಕಲ್ ಚೈನ್ಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬಂದಿದ್ದರು. ನಡಿಗೆಯಲ್ಲಿ ಅನುಮಾನ ಬಂದು ತಪಾಸಣೆ ಮಾಡಿದಾಗ ಸುಮಾರು 5 ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ.
‘ಈ ಹಿಂದೆ ನಡೆದಿದ್ದ ನೇಮಕಾತಿಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ಕಂಡುಬಂದಿದ್ದವು’ ಎಂದು ಹಿರಿಯ ಸಿಬ್ಬಂದಿ ಹೇಳಿದ್ದರು. ಹೀಗಾಗಿ, ಪಾರದರ್ಶಕ ನೇಮಕಾತಿಗೆ ನುರಿತ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ನೇಮಕಾತಿ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಅನುಮಾನ ಬಂದವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ತಿಳಿಸಿದ್ದಾರೆ.
ಕೆಕೆಆರ್ಟಿಸಿ ಅಧಿಕಾರಿಗಳು ಕಬ್ಬಿಣದ ತುಂಡುಗಳು, ಸರಪಳಿಗಳು, ಕಲ್ಲುಗಳಂತಹ ಸಾಧನಗಳನ್ನು ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಡಿಜಿಟಲ್ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳ ತೂಕ ಮತ್ತು ಎತ್ತರವನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.







