ಬೈಂದೂರು: ಕೆಲಸದಿಂದ ಅಮಾನತುಗೊಂಡ ವ್ಯಕ್ತಿ ಆತ್ಮಹತ್ಯೆ

ಬೈಂದೂರು: ಪ್ರಕರಣವೊಂದರ ಹಿನ್ನೆಲೆಯಲ್ಲಿ ನ್ಯಾಯಾಲಯದ ಪ್ರೋಸೆಸ್ ಕೆಲಸದಿಂದ ಅಮಾನತ್ತಾಗಿದ್ದ ವ್ಯಕ್ತಿಯೊಬ್ಬರು ನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೈಂದೂರು ತಾಲೂಕಿನ ಶಿರೂರು ಎಂಬಲ್ಲಿ ಫೆ.9ರಂದು ನಡೆದಿದೆ.
ಸುರೇಶ ಪೂಜಾರಿ ಕಾಡಿನತಾರು (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶಿರೂರಿನ ಪತ್ನಿ ಮನೆಯಲ್ಲಿ ಫೆ.9ರಂದು ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದು ಸಂಜೆ ಮನೆಯಿಂದ ಹೊರಬಂದ ಅವರು, ಪತ್ನಿ ಮೊಬೈಲ್ಗೆ ‘ಸಾರಿ ಸಾರಿ ಸಾರಿ, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಮನೆಯವರು ನಿನಗೆ ರಗಳೆ ಮಾಡಬಹುದು. ಅವರಿಗೆಲ್ಲ ಮೇಸೆಜ್ ತೋರಿಸು. ನನಗೆ ಕೆಲಸ ಆಗಲಿಲ್ಲ. ಅದೇ ತಲೆಬಿಸಿಯಲ್ಲಿ ತಪ್ಪು ಮಾಡುತ್ತಿದ್ದೇನೆ. ನನ್ನಿಂದ ಈ ತರಹ ಹೇಡಿ ಹಾಗೆ ಬದುಕಲು ಅಗುದಿಲ್ಲ. ನಾನು ಸಾಯುತ್ತಿದ್ದೇನೆ. ಗೇರು ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇನೆ ಬೇರೆ ಎಲ್ಲೂ ಹುಡುಕುವುದು ಬೇಡ’ ಎಂದು ಮೇಸೆಜ್ನ್ನು ಕಳುಹಿಸಿದ್ದರು.
ತಕ್ಷಣ ಸಂಬಂಧಿಕರು ಹುಡುಕಾಟ ಆರಂಭಿಸಿದ್ದು ಟೋಲ್ಗೇಟ್ ಹಿಂಬದಿಯ ಸರಕಾರಿ ಹಾಡಿಯಲ್ಲಿ ಸುರೇಶ್ ಅವರ ಮೃತದೇಹವು ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುರೇಶ ಪೂಜಾರಿ ವಿರುದ್ದ ಕಳೆದ ವರ್ಷ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಸುರೇಶ್ ನಿರ್ವಹಿಸುತ್ತಿದ್ದ ಕೋರ್ಟ್ ಪ್ರೋಸೆಸ್ ಕೆಲಸದಿಂದ ಅಮಾನತಾಗಿದ್ದು ಈವರೆಗೆ ರಿವೋಕ್ ಆಗಿರಲಿಲ್ಲ. ಈ ಬಗ್ಗೆ ನಿತ್ಯ ಅಲೆದಾಟ ಮಾಡುತ್ತಿದ್ದರು. ಕೆಲಸವಿಲ್ಲದ ಚಿಂತೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಕಂಬಳದ ಪ್ರೋತ್ಸಾಹಕ, ಸಂಘಟಕನಾಗಿದ್ದು, ಕಂಬಳದ ಹಗ್ಗದ ವಿಭಾಗದ ಓಟಗಾರರಾಗಿದ್ದರು. ಅಲ್ಲದೆ ಇತ್ತೀಚೆಗೆ ಕಂಬಳದಲ್ಲಿ ಓಟದ ಮಾಪನ ಮಾಡುವ ಸುಧಾರಿತ ಸೆನ್ಸಾರ್ ಯಂತ್ರವನ್ನು ನಿರ್ವಹಿಸುತ್ತಿದ್ದರು. ಕ್ರಿಯಾಶೀಲ ವ್ಯಕ್ತಿಯಾಗಿದ್ದ ಸುರೇಶ್ ಸ್ನೇಹಜೀವಿಯಾಗಿ ಗುರುತಿಸಿಕೊಂಡಿದ್ದರು.







