ಸಿದ್ದರಾಮಯ್ಯಗೆ ಚುನಾವಣೆ ಖರ್ಚಿಗೆ ತಾನು ಕೂಡಿಟ್ಟ ಹಣ ನೀಡಲು ಮುಂದಾದ ಬಾಲಕಿ; ವಿಪಕ್ಷ ನಾಯಕರು ಮಾಡಿದ್ದೇನು?

ವಿಜಯಪುರ: ಮುಂಬರಲಿರುವ ವಿಧಾನಸಭೆ ಚುನಾವಣೆಯ ವೆಚ್ಚಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಾಲಾ ಬಾಲಕಿಯೋರ್ವಳು ತಾನು ಕೂಡಿಟ್ಟ ಉಳಿತಾಯದ ಹಣ ನೀಡಲು ಮುಂದಾದ ಪ್ರಸಂಗವೊಂದು ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆಯುತ್ತಿರುವ 'ಪ್ರಜಾಧ್ವನಿ' ಸಮಾವೇಶದಲ್ಲಿ ನಡೆಯಿತು.
ಸಮಾವೇಶದ ವೇದಿಕೆಗೆ ತೆರಳಿದ ಝಿಯಾ ರಫೀಕ್ ಎಂಬ ಬಾಲಕಿಯು ಸಿದ್ದರಾಮಯ್ಯ ಅವರಿಗೆ ಐದು ಸಾವಿರ ರೂಪಾಯಿಗಳನ್ನು ಚುನಾವಣಾ ಖರ್ಚಿಗೆ ದೇಣಿಗೆಯಾಗಿ ನೀಡಲು ಮುಂದಾಗಿದ್ದಾಳೆ. ಈ ವೇಳೆ ಸಿದ್ದರಾಮಯ್ಯ ಅವರು ಬಾಲಕಿಯಿಂದ ಹಣ ಪಡೆಯದೆ ಪ್ರೀತಿಯಿಂದ ಮಾತನಾಡಿಸಿ, ವಿದ್ಯಾಭ್ಯಾಸಕ್ಕೆ ಉಪಯೋಗಿಸಿ, ಚೆನ್ನಾಗಿ ಓದು ಎಂದು ಕಿವಿ ಮಾತು ಹೇಳಿ ಕಳುಹಸಿದ್ದಾರೆ.
ಈ ಕುರಿತ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ, ''ಹಣವಿಲ್ಲದೆ ಚುನಾವಣೆ ಗೆಲ್ಲುವುದೇ ಅಸಾಧ್ಯವೆಂಬ ಪರಿಸ್ಥಿತಿ ಇರುವ ಈಗಿನ ಕಾಲದಲ್ಲಿ, ನನ್ನ ಗೆಲುವಿಗೆ ಬಾಲಕಿಯೊಬ್ಬಳು ತನ್ನ ಬಳಿಯಿದ್ದ ಅಲ್ಪಹಣವನ್ನೇ ಕೊಡಲು ಮುಂದಾದದ್ದು ಭವಿಷ್ಯದ ರಾಜಕಾರಣದ ಬಗ್ಗೆ ಆಶಾಭಾವನೆ ಮೂಡಿಸಿದೆ. ಇದು ನನ್ನ ರಾಜಕೀಯ ಬದುಕಿನ ಆರಂಭದ ದಿನಗಳನ್ನು ಕಣ್ಣೆದುರು ತಂದಿತು. ಹಣ ಪಡೆಯದೆ ಪ್ರೀತಿಯ ಅಪ್ಪುಗೆ ನೀಡಿ ಕಳಿಸಿದೆ'' ಎಂದು ಬರೆದುಕೊಂಡಿದ್ದಾರೆ.
ಹಣವಿಲ್ಲದೆ ಚುನಾವಣೆ ಗೆಲ್ಲುವುದೇ ಅಸಾಧ್ಯವೆಂಬ ಪರಿಸ್ಥಿತಿ ಇರುವ ಈಗಿನ ಕಾಲದಲ್ಲಿ, ನನ್ನ ಗೆಲುವಿಗೆ ಬಾಲಕಿಯೊಬ್ಬಳು ತನ್ನ ಬಳಿಯಿದ್ದ ಅಲ್ಪಹಣವನ್ನೇ ಕೊಡಲು ಮುಂದಾದದ್ದು ಭವಿಷ್ಯದ ರಾಜಕಾರಣದ ಬಗ್ಗೆ ಆಶಾಭಾವನೆ ಮೂಡಿಸಿದೆ.
— Siddaramaiah (@siddaramaiah) February 11, 2023
ಇದು ನನ್ನ ರಾಜಕೀಯ ಬದುಕಿನ ಆರಂಭದ ದಿನಗಳನ್ನು ಕಣ್ಣೆದುರು ತಂದಿತು. ಹಣ ಪಡೆಯದೆ ಪ್ರೀತಿಯ ಅಪ್ಪುಗೆ ನೀಡಿ ಕಳಿಸಿದೆ. pic.twitter.com/bO9hQquM8W







