ಯಕ್ಷಗಾನದಲ್ಲಿ ಕಾಲಕ್ಕೆ ತಕ್ಕಂತೆ ಮಾರ್ಪಡು ಅವಶ್ಯಕ: ಸೋದೆ ಶ್ರೀ
76 ಮಂದಿ ಸಾಧಕ ಕಲಾವಿದರಿಗೆ ’ಸಮ್ಮೇಳನ ಸಂಮಾನ’ ಗೌರವ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಉಡುಪಿ ಜಿಲ್ಲಾಡಳಿತ ವತಿಯಿಂದ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಎರಡನೇ ದಿನವಾದ ರವಿವಾರ ಮಲ್ಪೆಶಂಕರನಾರಾಯಣ ಸಾಮಗ ವೇದಿಕೆಯಲ್ಲಿ ಸಾಧಕ ಕಲಾವಿದರಿಗೆ ’ಸಮ್ಮೇಳನ ಸಂಮಾನ’ ನೀಡಿ ಗೌರವಿಸಲಾಯಿತು.
ಹಿರಿಯ ಕಲಾವಿದರಾದ ಕೆ.ಗೋವಿಂದ ಭಟ್, ಐರೋಡಿ ಗೋವಿಂದಪ್ಪ, ಆರ್ಗೋಡು ಮೋಹನದಾಸ ಶೆಟ್ಟಿ, ಲೀಲಾವತಿ ಬೈಪಡಿತ್ತಾಯ, ಗುರುವಯ್ಯ ಒಡೆಯರ್ ಹೊಳಲ್ಕೆರೆ ಸೇರಿದಂತೆ 76 ಮಂದಿ ಹಿರಿಯ ಸಾಧಕರು, ಸಂಘಸಂಸ್ಥೆಗಳು, ಪತ್ರಿಕೆ, ಯಕ್ಷಗಾನ ಪೋಷಕರನ್ನು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ನೂರಾರು ವರ್ಷಗಳಿಂದ ಬೆಳೆದು ಬಂದಿ ರುವ ಯಕ್ಷಗಾನ ಕಲೆಯಲ್ಲಿ ಅನೇಕ ಮಾರ್ಪಡುಗಳಾಗಿವೆ. ಯಕ್ಷಗಾನದಲ್ಲಿ ವೈವಿಧ್ಯತೆ ಕಾಣಬೇಕಾದರೆ ಕಾಲಕ್ಕೆ ತಕ್ಕಂತೆ ಮಾರ್ಪಡು ಆಗುವುದು ಅತ್ಯಂತ ಅವಶ್ಯಕ. ಆದರೆ ಆ ಮಾರ್ಪಡು ಎಂದಿಗೂ ಯಕ್ಷಗಾನದ ಚೌಕಟ್ಟು ಮೀರಿ ಹೋಗಬಾರದು. ಅಂತಹ ಸುಧಾರಣೆಯನ್ನು ಎಲ್ಲರೂ ಸಾರ್ವಕಾಲಿಕವಾಗಿ ಸ್ವಾಗತಿಸಬೇಕು ಎಂದರು.
ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನಗಳ ಕೇಂದ್ರ ಸ್ಥಾನ ಉಡುಪಿ. ಇಲ್ಲಿ ಮಾತ್ರ ಈ ಎರಡೂ ತಿಟ್ಟುಗಳಿಗೆ ಸಮಾನವಾಗಿ ಪ್ರೇಕ್ಷಕರು ಇರುವುದು. ಯಕ್ಷಗಾನ ಕಲಾವಿದರು ಪುರಾಣ ಪಾತ್ರಗಳನ್ನು ಜನ ಮುಂದೆ ಚಿತ್ರಿಸುವ ಶಿಲ್ಪಿಗಳು. ಯಕ್ಷಗಾನ ಇಂದಿಗೂ ಜೀವಂತವಾಗಿರುವ ಕಲೆ ಎಂದು ಅವರು ತಿಳಿಸಿದರು.
ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿದರು. ಅಂಬಲ ಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಮುಖ್ಯ ಅತಿಥಿ ಯಾಗಿದ್ದರು. ಅಧ್ಯಕ್ಷತೆಯನ್ನು ಉಡುಪಿ ಶಾಸಕ, ಸ್ವಾಗತ ಸಮಿತಿ ಅಧ್ಯಕ್ಷ ರಘುಪತಿ ಭಟ್ ವಹಿಸಿದ್ದರು.
ಸಮ್ಮೇಳನ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟ, ಹಿರಿಯ ವೇಷಧಾರಿಗಳಾದ ಡಾ.ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟರಮಣ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಗಳಾದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಅಶೋಕ್ ಚಲವಾದಿ, ಸಹಾಯಕ ನಿರ್ದೇಶಕಿ ಪೂರ್ಣಿಮಾ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಉಪಸ್ಥಿತರಿದ್ದರು.
ಸಮಿತಿ ಸದಸ್ಯ ಹರಿನಾರಾಯಣದಾಸ ಅಸ್ರಣ್ಣ ಸ್ವಾಗತಿಸಿದರು. ವಾದಿರಾಜ ಕಲ್ಲುರಾಯ ಸಾಧಕರ ಪಟ್ಟಿ ವಾಚಿಸಿದರು. ವಿದ್ಯಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶೃಂಗೇಶ್ವರ ರಾವ್ ವಂದಿಸಿದರು.







