ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅಪಾರ: ಸೈಯದ್ ಮುಹಮ್ಮದ್ ಬ್ಯಾರಿ
ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಮ್ಮೇಳನಕ್ಕೆ ಚಾಲನೆ

ಮಂಗಳೂರು, ಫೆ.13: ಪ್ರತಿಯೊಬ್ಬ ವಿದ್ಯಾರ್ಥಿಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)ದ ಗೌರವ ಸಲಹೆಗಾರ, ಬ್ಯಾರೀಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್)ದ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿರುವ 'ಶೈಕ್ಷಣಿಕ ಸಮ್ಮೇಳನ'ದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ತಮ್ಮ ಮಕ್ಕಳನ್ನು ಸಾಕಿ ಸಲಹಲು ಹೆತ್ತವರು ತುಂಬಾ ಪ್ರಯತ್ನ ಪಡುತ್ತಾರೆ. ಆದರೆ ಶಿಕ್ಷಕರು ತನ್ನ ತರಗತಿಯಲ್ಲಿರುವ ಬೇರೆ ಬೇರೆ ಭಾಷೆ, ಧರ್ಮ, ಸಂಸ್ಕೃತಿಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಸವಾಲಿನ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕ ವರ್ಗವನ್ನು ಅಭಿನಂದಿಸಲೇಬೇಕಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.
ನಾವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದಾಗ ಮೀಫ್ನಂತಹ ಸಂಘಟನೆಗಳು ಇರಲಿಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸಿ ಶಿಕ್ಷಣ ಕ್ಷೇತ್ರದಲ್ಲಿ ಭದ್ರ ನೆಲೆಯೂರಿದ್ದೇವೆ. ಆದರೆ ಈಗ ವ್ಯವಸ್ಥಿತ ಯೋಜನೆ, ಗುರಿಗಳಿರುವುದನ್ನು ಗಮನಿಸಬೇಕಿದೆ. ಪ್ರಸಕ್ತ ಕಾಲದಲ್ಲಿ ಶಿಕ್ಷಣ ನೀಡುವಲ್ಲಿ ಶಿಕ್ಷಕರು, ಆಡಳಿತ ಮಂಡಳಿಯ ಶ್ರಮವನ್ನು ಮೆಚ್ಚಲೇಬೇಕಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಅಭಿಪ್ರಾಯಪಟ್ಟರು.
ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರು ತನ್ನೆಲ್ಲಾ ಶ್ರಮ ಹಾಕುವುದನ್ನು ನಾವು ಗುರುತಿಸಬೇಕಿದೆ. ಆಸ್ತಿ, ಅಂತಸ್ತು ಸಂಪಾದನೆಯೇ ಬದುಕಿನ ಗುರಿಯಾಗಬಾರದು. ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಬೇಕು. ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿ, ಬೆಳೆದು ಬರುವ ವಾತಾವರಣವನ್ನು ಶಿಕ್ಷಕ ವೃಂದವು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.
ಇದನ್ನೂ ಓದಿ: ದ್ವೇಷ ಮುಕ್ತ ಸಮಾಜ ಕಟ್ಟೋಣ: ಡಾ.ಎನ್.ವಿನಯ್ ಹೆಗ್ಡೆ ಕರೆ
ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ, ಟೀಕೇಸ್ ಗ್ರೂಪ್ನ ಅಧ್ಯಕ್ಷ ಉಮರ್ ಟೀಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಟ್ಟೆ ಡೀಮ್ಡ್ ವಿವಿಯ ಕುಲಾಧಿಪತಿ ಡಾ.ಎನ್.ವಿನಯ್ ಹೆಗ್ಡೆ, ಯೆನೆಪೊಯ ಡೀಮ್ಡ್ ವಿವಿ ಕುಲಪತಿ ಡಾ.ವೈ.ಅಬ್ದುಲ್ಲ ಕುಂಞಿ, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್, ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಮಹೇಶ್ ಮಸಾಲ್, ಬೆಂಗಳೂರಿನ ಸೈಯದ್ ಸುಲ್ತಾನ್ ಅಹ್ಮದ್, ಮೀಫ್ ಉಪಾಧ್ಯಕ್ಷರುಗಳಾದ ಬಿ.ಎಂ.ಮುಮ್ತಾಝ್ ಅಲಿ, ಕೆ.ಎಂ.ಮುಸ್ತಫ ಸುಳ್ಯ, ಶಬಿ ಅಹ್ಮದ್ ಖಾಝಿ, ಬಿ.ಎ. ನಝೀರ್ ಮತ್ತಿತರರು ಉಪಸ್ಥಿತರಿದ್ದರು.
ನಗರದ ಅಲ್ ಇಖ್ರಾ ಸ್ಕೂಲ್ನ ವಿದ್ಯಾರ್ಥಿಗಳು ಕಿರಾಅತ್ ಪಠಿಸಿದರು. ನಗರದ ಬ್ಯಾರೀಸ್ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಸ್ವಾಗತಿಸಿದರು.