ಉಡುಪಿಯಲ್ಲಿದೆ ವಿದೇಶದಲ್ಲಿ ಉದ್ಯೋಗ ಪಡೆಯಲು ಸಮಗ್ರ ನೆರವು ನೀಡುವ 'ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ'

ಉಡುಪಿ: ನಿಮಗೆ ವಿದೇಶಗಳಲ್ಲಿ ಉದ್ಯೋಗ ಅಥವಾ ಕೆಲಸ ಮಾಡುವ ಆಸಕ್ತಿ ಇದೆಯೇ...? ಹಾಗಿದ್ದರೆ ವಿದೇಶದಲ್ಲಿ ಉದ್ಯೋಗಕ್ಕೆ ತೆರಳಲು ಇರಬೇಕಾದ ಅರ್ಹತೆಗಳೇನು, ಅಲ್ಲಿ ಎದುರಿಸಬೇಕಾದ ಕಾನೂನು ಪ್ರಕ್ರಿಯೆಗಳೇನು, ವಿದೇಶದಲ್ಲಿ ತೊಂದರೆಯಾದರೆ ಯಾರನ್ನು ಸಂಪರ್ಕಿ ಸಬೇಕು, ಸುರಕ್ಷಿತವಾಗಿ ವಿದೇಶಕ್ಕೆ ತೆರಳಿ, ಸುಗಮವಾಗಿ ಹಿಂದಿರುಗಲು ಅನುಸರಿಸಬೇಕಾದ ಪ್ರಕಿಯೆಗಳೇನು, ಖಾಸಗಿ ಸಂಸ್ಥೆ ಮತ್ತು ಮಧ್ಯವರ್ತಿಗಳ ಮೂಲಕ ದುಬಾರಿ ಶುಲ್ಕ ನೀಡಿ ದೇಶಗಳಿಗೆ ತೆರಳಿ ಅಲ್ಲಿ ತೊಂದರೆಯಾದಾಗ ಏನು ಮಾಡಬೇಕು...? ಈ ಎಲ್ಲಾ ಪ್ರಶ್ನೆ ಹಾಗೂ ಸಂದೇಹಗಳಿಗೆ ಉಚಿತ ವಾಗಿ ಪರಿಹಾರ ನೀಡುವ ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರವೊಂದು ಉಡುಪಿ ಜಿಲ್ಲೆಯಲ್ಲಿದೆ...
ರಾಜ್ಯ ಸರಕಾರ ವಿದೇಶಗಳಿಗೆ ತೆರಳುವ ರಾಜ್ಯದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕ ಮಂಡಳಿಯ ಮೂಲಕ ಆರಂಭಿಸಿರುವ ರಾಜ್ಯದಲ್ಲಿನ 4 ಪ್ರಾಯೋಗಿಕ ‘ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ’ ಗಳಲ್ಲಿ ಒಂದು ಮಾಹಿತಿ ಕೇಂದ್ರ ಉಡುಪಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾರ್ಮಿಕ ಇಲಾಖೆಯಲ್ಲಿದೆ.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾಗರೋತ್ತರ ನೇಮಕಾತಿ ಸಂಸ್ಥೆ-ಕರ್ನಾಟಕ ಸರಕಾರದ ಸ್ವಾಮಿತ್ವದ ಸಂಸ್ಥೆಯು ಉದ್ಯೋಗ ಅರಸಿ ರಾಜ್ಯದಿಂದ ವಿದೇಶಗಳಿಗೆ ತೆರಳುವ ಎಲ್ಲಾ ಕಾರ್ಮಿಕರಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ವಿದೇಶದಲ್ಲಿರುವ ಉದ್ಯೋಗಾವಕಾಶಗಳು, ಅದಕ್ಕೆ ಬೇಕಾದ ಅರ್ಹತೆಗಳು, ಉದ್ಯೋಗದ ಕುರಿತು ಸಮಾಲೋಚನೆ ಮತ್ತು ಮಾರ್ಗದರ್ಶನ, ಮ್ಯಾನೇಜ್ಮೆಂಟ್ ಇನ್ಫಾರ್ಮೇಷನ್ ಸಿಸ್ಟಂ ಅಡಿಯಲ್ಲಿ ನೊಂದಾವಣಿ, ದಾಖಲಾತಿಗಳ ಪರಿಶೀಲನೆ ವಿಧಾನ, ಕರಾರು ವಿವರಣೆಗಳ ಮಾಹಿತಿ, ಪ್ರಯಾಣದಲ್ಲಿ ಅನುಸರಿಸಬೇಕಾದ ವಿಧಾನಗಳು ಸೇರಿದಂತೆ ಎಲ್ಲಾ ರೀತಿಯ ಸಮಗ್ರ ಮಾರ್ಗದರ್ಶನ ಈ ಕೇಂದ್ರದಲ್ಲಿ ದೊರಕುತ್ತದೆ.
ಈ ಕೇಂದ್ರದ ಮೂಲಕ ವಿದೇಶಕ್ಕೆ ತೆರಳಿದಲ್ಲಿ, ವಿದೇಶದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಸರಕಾರದ ವತಿಯಿಂದ ಅಗತ್ಯ ನೆರವು ದೊರೆಯಲಿದ್ದು, ವಿದೇಶದಲ್ಲಿದ್ದರೂ ಸಹ ಎಲ್ಲಾ ಸಂದರ್ಭದಲ್ಲಿ ಸುರಕ್ಷಿತವಾಗಿ ಇರಲು ಸಾಧ್ಯವಾಗಲಿದೆ. ಅಲ್ಲದೆ ನಿಮಗೆ ಉದ್ಯೋಗ ನೀಡಿದ ಸಂಸ್ಥೆಯೊಂದಿಗೆ ನಿರಂತರ ಸಂಪಕದಲ್ಲಿದ್ದು, ಆ ದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯ ನೆರವು ಒದಗಿಸುವುದರ ಜೊತೆಗೆ ನಿಮಗೆ ವಿಮೆ ಪಡೆಯಲು ಮತ್ತು ಕಲ್ಯಾಣ ನಿಧಿಯ ಮೊತ್ತ ದೊರೆಯಲು ಸಹ ಕೇಂದ್ರ ಸಹಕರಿಸಲಿದೆ.
ಈ ಕೇಂದ್ರದ ಮೂಲಕ ಉದ್ಯೋಗಕ್ಕೆ ತೆರಳಲು ಇಚ್ಚಿಸಿದ್ದಲ್ಲಿ ಈಗಾಗಲೇ ಇ-ಮೈಗ್ರೇಟ್ ಪೋರ್ಟಲ್ನಲ್ಲಿ ಉದ್ಯೋಗದ ಬೇಡಿಕೆ ಕೋರಿರುವ ನೋಂದಣಿ ಮಾಡಿರುವ ವಿದೇಶಿ ಸಂಸ್ಥೆಗಳ ನೈಜತೆ ಪರಿಶೀಲಿಸಿ, ಉದ್ಯೋಗದಾತ ಸಂಸ್ಥೆಯಲ್ಲಿ ಯಾವುದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಅನಗತ್ಯ ತೊಂದರೆಗಳು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದೆ.
ವಿಶೇಷವಾಗಿ ವಿದೇಶಗಳಲ್ಲಿ ಉದ್ಯೋಗಕ್ಕೆ ತೆರಳುವ ಮಹಿಳಾ ಉದ್ಯೋಗಿ ಗಳ ಬಗ್ಗೆ ಕೇಂದ್ರವು ಹೆಚ್ಚಿನ ಕಾಳಜಿ ವಹಿಸಲಿದೆ. ವಿದೇಶದಿಂದ ವಾಪಸಾದ ಬಳಿಕ ಕಾರ್ಮಿಕರ ಕೌಶಲ್ಯ ಸಂಗ್ರಹ ಮತ್ತು ಮರುವಲಸೆಗೆ ಸಹಾಯ ಮಾಡುವುದರ ಜೊತೆಗೆ, ಪುರ್ನವಸತಿ ಬಗ್ಗೆ ಮಾಹಿತಿ ನೀಡಲಿದ್ದು, ಕುಂದು ಕೊರತೆಗಳ ನಿವಾರಣೆ ಮತ್ತು ವಿಮಾ ಮೊತ್ತವನ್ನು ಪಡೆಯಲು ಸಹಾಯ ಮಾಡಲಿದೆ.
ವಿದೇಶಕ್ಕೆ ತೆರಳುವ ಮುನ್ನ 8 ಗಂಟೆಗಳ ಕಾಲ ಸಮಗ್ರ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಲಿದ್ದು, ವಿದೇಶ ಪ್ರಯಾಣದ ಅವಧಿಯಲ್ಲಿ ಮತ್ತು ನಂತರ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ, ವಿಧಾನಗಳು, ಸಿದ್ಧತೆಗಳು, ವಿಮಾನ ನಿಲ್ದಾಣದಲ್ಲಿ ವ್ಯವಹರಿಸುವ ಕಾರ್ಯವಿಧಾನಗಳ ಬಗ್ಗೆ ಸಹ ತರಬೇತಿ ನೀಡಲಾಗುತ್ತದೆ.
ಪ್ರಸ್ತುತ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಉಡುಪಿ, ದಾವಣಗೆರೆ. ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸಾವಿರಾರು ಮಂದಿ ಉದ್ಯೋಗ ಅರಸಿ ವಿದೇಶಗಳಿಗೆ ತೆರಳುತ್ತಿದ್ದು, ಈ ಕೇಂದ್ರದ ಪ್ರಯೋಜನ ಪಡೆಯುವ ಮೂಲಕ ವಿದೇಶದಲ್ಲಿ ಸೂಕ್ತ ಉದ್ಯೋಗ ಪಡೆದು ಅಲ್ಲಿಯೂ ನೆಮ್ಮದಿಯ ಜೀವನ ನಡೆಸಲು ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಸಕಲ ನೆರವು ನೀಡಲಿದೆ.
ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳಿಂದ ಸುಮಾರು 40,000ಕ್ಕೂ ಅಧಿಕ ಮಂದಿ ಮಧ್ಯಪ್ರಾಚ್ಯ ದೇಶಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಖಾಸಗಿ ಸಂಸ್ಥೆಗಳು ಮತ್ತು ಮದ್ಯವರ್ತಿಗಳ ಮೂಲಕ ದುಬಾರಿ ಶುಲ್ಕ ನೀಡಿ, ಸಮರ್ಪಕ ದಾಖಲೆ ಮತ್ತು ಮಾಹಿತಿ ಇಲ್ಲದೇ ವಿದೇಶಗಳಿಗೆ ತೆರಳಿ, ಅಲ್ಲಿ ಸೂಕ್ತ ದಾಖಲೆಗಳ ಮತ್ತು ಇತರೆ ಕಾನೂನು ತೊಡುಕುಗಳಿಗೆ ಸಿಲುಕಿಕೊಂಡಾಗ ಅವರಿಂದ ಸೂಕ್ತ ನೆರವು ದೊರೆಯದೇ ಕಷ್ಟಕ್ಕೆ ಸಿಲುಕುತ್ತಿರುವುದು ಕೇಳಿಬರುತ್ತಿದೆ. ಜಿಲ್ಲೆಯಿಂದ ವಿದೇಶಕ್ಕೆ ತೆರಳುವವರು, ಜಿಲ್ಲೆಯಲ್ಲಿ ಸರಕಾರ ಆರಂಭಿಸಿರುವ ವಲಸೆ ಮಾಹಿತಿ ಕೇಂದ್ರದ ನೆರವಿನಿಂದ ವಿದೇಶದಲ್ಲಿ ಸೂಕ್ತ ಉದ್ಯೋಗದ ಆಯ್ಕೆ ಮಾಡಿಕೊಳ್ಳುವುದರೊಂದಿಗೆ ನೆಮ್ಮದಿಯ ಮತ್ತು ಸುರಕ್ಷಿತ ಜೀವನ ನಡೆಸಲು ಸಾಧ್ಯವಾಗಲಿದೆ. ಈ ಕೇಂದ್ರದ ಸೌಲಭ್ಯಗಳ ಬಗ್ಗೆ ಮತ್ತು ವಿದೇಶದಲ್ಲಿ ಉದ್ಯೋಗಕ್ಕೆ ತೆರಳ ಬಯಸುವ ಉದ್ಯೋಗಾಕಾಂಕ್ಷಿ ಗಳು ದೂರವಾಣಿ ಸಂಖ್ಯೆ 0820-2574851 ಅಥವಾ ದಿನದ 24 ಗಂಟೆ ಕಾರ್ಯಾಚರಿಸುವ ಕಾರ್ಮಿಕ ಸಹಾಯವಾಣಿ ಸಂಖ್ಯೆ 155214ನ್ನು ಸಂಪರ್ಕಿಸಿ ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳ ಬಹುದು. ಈ ಬಗ್ಗೆ ಇತ್ತೀಚೆಗೆ ನಡೆದ ಉದ್ಯೋಗಾಕಾಂಕ್ಷಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.
-ಕುಮಾರ್ ಬಿ.ಆರ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಉಡುಪಿ ಉಪವಿಭಾಗ, ಉಡುಪಿ







