ಅಪಘಾತಕ್ಕೊಳಗಾದ ಕಾರಣ ಚಾಲಕನ ವೇತನ ಶ್ರೇಣಿಗೆ ಹಿಂಬಡ್ತಿ ನೀಡಬಾರದು: ಬಿಎಂಟಿಸಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು, ಫೆ.15: ರಸ್ತೆ ಅಪಘಾತಕ್ಕೆ ಒಳಗಾದ ಹಿನ್ನೆಲೆ ಚಾಲಕನ ವೇತನ ಶ್ರೇಣಿಯಿಂದ ಕಚೇರಿ ಸಹಾಯಕನ ವೇತನ ಶ್ರೇಣಿಗೆ ಹಿಂಬಡ್ತಿ ನೀಡಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಕ್ರಮವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಚಾಲಕನ ವೇತನ ಶ್ರೇಣಿಯ ಮೂಲಕ ವೇತನ ಪಾವತಿಸುವಂತೆ ಬಿಎಂಟಿಸಿಗೆ ಸೂಚನೆ ನೀಡಿದೆ.
ರಸ್ತೆ ಅಪಘಾತಕ್ಕೆ ಒಳಗಾಗಿ ಶೇ.40ರಷ್ಟು ಅಂಗವೈಫಲ್ಯಕ್ಕೆ ತುತ್ತಾಗಿದ್ದ, ವೇತನ ಶ್ರೇಣಿಯಿಂದ ಹಿಂಬಡ್ತಿ ಪಡೆದಿದ್ದ ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಬಿ.ಜಯದೇವಯ್ಯ ಈ ಬಗ್ಗೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವೇತನ ಶ್ರೇಣಿಗೆ ಹಿಂಬಡ್ತಿ ನೀಡಬಾರದು ಎಂದು ಆದೇಶ ಹೊರಡಿಸಿದೆ.
ವಿಶೇಷ ಚೇತನರ ಸೆಕ್ಷನ್ 47ರಂತೆ ಸರಕಾರಿ ಉದ್ಯೋಗದಲ್ಲಿರುವ ಸಂದರ್ಭ ಅಂಗವೈಫಲ್ಯಕ್ಕೆ ತುತ್ತಾದಲ್ಲಿ ವೇತನ ಶ್ರೇಣಿ ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲದೇ, ಅಂಥ ವ್ಯಕ್ತಿ ಆ ಹುದ್ದೆಗೆ ಅರ್ಹರಿಲ್ಲದಿದ್ದಲ್ಲಿ, ಬೇರೊಂದು ಉದ್ಯೋಗ ನೀಡಬಹುದಾಗಿದೆ. ಆದರೆ, ನಿವೃತ್ತಿಯಾಗುವವರೆಗೂ ಯಾವುದೇ ವೇತನ ಶ್ರೇಣಿಯನ್ನು ಬದಲಾವಣೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣವೇನು: ಅರ್ಜಿದಾರರಾದ ಎಂ.ಬಿ.ಜಯದೇವಯ್ಯ ಅವರು ರಸ್ತೆ ಅಪಘಾತದಿಂದಾಗಿ ಶೇ.40ರಷ್ಟು ಅಂಗ ವೈಫಲ್ಯಕ್ಕೆ ತುತ್ತಾದ್ದರಿಂದ ಬಸ್ ಚಾಲಕನಾಗಿ ಮುಂದುವರೆಸುವುದಕ್ಕೆ ಅವಕಾಶವಿಲ್ಲ ಎಂದು ವೈದ್ಯಕೀಯ ವರದಿ ತಿಳಿಸಿತ್ತು. ಜೊತೆಗೆ, ಶಿಸ್ತು ಪ್ರಾಧಿಕಾರವು ಅಪಘಾತದಲ್ಲಿ ಚಾಲಕ ನಿರ್ಲಕ್ಷ್ಯ ವಹಿಸಿರಲಿಲ್ಲ ಎಂದು ಸಹ ತಿಳಿಸಿತ್ತು.
ಆದರೆ, ಬಿಎಂಟಿಸಿ ಅಧಿಕಾರಿಯು ಚಾಲಕನಾಗಿದ್ದ ಜಯದೇವಯ್ಯ ಅವರನ್ನು ಕಚೇರಿ ಸಹಾಯಕನ್ನಾಗಿ ನೇಮಿಸಿ, ವೇತನ ಶ್ರೇಣಿಯಲ್ಲಿ ಹಿಂಬಡ್ತಿ ನೀಡಿತ್ತು. ಇದನ್ನು ಪ್ರಶ್ನಿಸಿ ಜಯದೇವಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ಚಾಲಕನ ವೇತನ ಶ್ರೇಣಿ ನೀಡುವಂತೆ ಸೂಚನೆ ನೀಡಿತ್ತು. ಆದರೂ ಬಿಎಂಟಿಸಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಜಯದೇವಯ್ಯ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು.
ಈ ನಡುವೆ ಜಯದೇವಯ್ಯ ಅವರನ್ನು ಮತ್ತೊಂದು ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. 2014ರಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಬಿಎಂಟಿಸಿಗೆ ಸಲ್ಲಿಸಿದ್ದರು. ಆದರೂ, ಬಿಎಂಟಿಸಿ ವೇತನ ಶ್ರೇಣಿಯನ್ನು ಬದಲಾಯಿಸಲು ಮುಂದಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಜಯದೇವಯ್ಯ ಮತ್ತೊಂದು ಬಾರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಚಾಲಕನ ವೇತನ ಶ್ರೇಣಿಯಂತೆ ವೇತನ ಪಾವತಿ ಮಾಡುವುದಕ್ಕೆ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.







