ಪ್ರತಿ ಗ್ರಾಮದಲ್ಲೂ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಸಮಿತಿ ರಚನೆ: ಶ್ರೀಪ್ರಣವಾನಂದ ಸ್ವಾಮೀಜಿ

ಮಂಗಳೂರು: ಬಿಲ್ಲವ ಯುವ ಸಮುದಾಯದ ಮನಪರಿವರ್ತನೆಗೆ ಕರಾವಳಿ ಭಾಗದ ಪ್ರತಿ ಗ್ರಾಮದಲ್ಲೂ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಸಮಿತಿ ರಚನೆ ಮಾಡಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಬ್ರಹ್ಮ ಶ್ರೀನಾರಾಯಣಗುರು ಶಕ್ತಿಪೀಠ ಸಮಿತಿ ಮೂಲ ಉದ್ದೇಶ ಪರಿವರ್ತನೆ ಮಾಡುವುದು ಆಗಿದೆ. ನಾವೆಲ್ಲರೂ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎನ್ನುವುದು ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತವಾಗಿದೆ. ಅದರಂತೆ ವಸುದೈವ ಕುಟುಂಬ ಎಂಬ ನೆಲೆಯಲ್ಲಿ ನಾವು ಬದುಕಬೇಕು. ಕರಾವಳಿ ಭಾಗದಲ್ಲಿ ಶಾಂತಿ ಸೌಹಾರ್ದತೆಯನ್ನು ಮೂಡಿಸಲು ಎಲ್ಲ ಪ್ರಯತ್ನವನ್ನು ಮಾಡಲಾಗುವುದು ಎಂದರು.
ಮಾರ್ಚ್ ೧೨ರಂದು ಸಭೆ: ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಲ್ಲವ ಸಮುದಾಯದ ಮುಖಂಡರ ಮತ್ತು ಗರಡಿಗಳ ಮುಖ್ಯಸ್ಥರ ಸಭೆಯನ್ನು ಮಾ.೧೨ರಂದು ಬ್ರಹ್ಮ ಶ್ರೀನಾರಾಯಣಗುರು ಶಕ್ತಿಪೀಠ ಸಮಿತಿ ರಚನೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಕರೆಯಲಾಗಿದೆ. ಸ್ಥಳ ಇನ್ನೂ ನಿಗದಿಯಾಗಿಲ್ಲ. ಈ ಸಭೆಯಲ್ಲಿ ಯುವ ಸಮದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಜಿಲ್ಲೆ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ರಚನೆಯಾಗಲಿರುವ ಶಕ್ತಿ ಪೀಠದ ಸಮಿತಿ ಯು ಬ್ರಹ್ಮಶ್ರೀನಾರಾಯಣ ಗುರುಗಳ ಸಿದ್ಧಾಂತವನ್ನು ಯುವ ಸಮುದಾಯಕ್ಕೆ ತಿಳಿಸಿ ಅವರ ಮನಪರಿವರ್ತನೆ ಮಾಡಲು ಶ್ರಮಿಸಲಿದೆ. ಧರ್ಮ, ದ್ವೇಷ ರಾಜಕಾರಣ ಮತ್ತು ಇನ್ನೊಬ್ಬರನ್ನು ಹತ್ಯೆ ಮಾಡುವ ರಾಜಕಾರಣದಿಂದ ಬಿಲ್ಲವ ಸಮುದಾಯ ದೂರವಿರವಿರಬೇಕು. ಮುಂದೆ ಹಳ್ಳಿ ಹಳ್ಳಿಗಳಿಗೆ ಹೋಗಿ ಸಮುದಾಯದ ಕಷ್ಟಗಳನ್ನು ಅರಿತುಕೊಳ್ಳುವ, ಮನೆ ಇಲ್ಲದವರಿಗೆ ಮನೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.
ತಲಾ 3 ಸ್ಥಾನಗಳನ್ನು ನೀಡಲು ಆಗ್ರಹ: ರಾಜ್ಯದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ರಾಷ್ಟ್ರೀಯ ಪಕ್ಷಗಳು ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯದವರಿಗೆ ತಲಾ ಮೂರು ಕ್ಷೇತ್ರಗಳಲ್ಲಿ ಅವಕಾಶ ನೀಡುವಂತೆ ಸ್ವಾಮೀಜಿ ಆಗ್ರಹಿಸಿದರು.
ಅಪೂರ್ವ ಬೆಂಬಲ : ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಳೆದ ಜನವರಿ ೬ರಿಂದ ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನವರೆಗೆ ತಮ್ಮ ನೇತೃತ್ವದಲ್ಲಿ ನಡೆದ ೪೦ ದಿನಗಳ ಸುಮಾರು ೭೫೧ ಕಿ.ಮೀ ದೂರದ ಪಾದಯಾತ್ರೆಗೆ ಅಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಈಡಿಗ, ಬಿಲ್ಲವ, ನಾಮದಾರಿ ಸಮಾಜದ ಕುಲಬಾಂಧವರು ಬೆಂಬಲ ನೀಡಿದ್ದಾರೆ.
ಪಾದಯಾತ್ರೆಯ ಕೊನೆಯಲ್ಲಿ ಜನಸಾಗರ ಹರಿದು ಬಂದಿದೆ. ನಾವು ಸರಕಾರಕ್ಕೆ ಕೊಟ್ಟಿರುವ ಬೇಡಿಕೆಯಲ್ಲಿ ಕುಲಶಾಸ್ತ್ರ ಅಧ್ಯಯನ ಮಾಡಿ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟ )ಪಟ್ಟಿಯಲ್ಲಿ ಸೇರಿಸಬೇಕು, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ, ರಾಜ್ಯಾದ್ಯಂತ ಕುಲಕಸಬು ಸೇಂದಿ ಇಳಿಸಿ ಮಾರಾಟ ಮಾಡುವುದಕ್ಕೆ ಅನುಮತಿ, ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಮೂರ್ತಿ ಸ್ಥಾಪನೆ, ಸಮಾಜಕ್ಕೆ ೧ ಲಕ್ಷ ಮನೆ ನೀಡಲು ಆಗ್ರಹ ಸೇರಿದಂತೆ ೧೪ ಬೇಡಿಕೆಗಳ ಪೈಕಿ ಹೆಚ್ಚಿನದ್ದು ಕ್ಯಾಬಿನೆಟ್ನಲ್ಲಿ ಮಂಜೂರು ಮಾಡುವಂತಾಗಿದೆ.
ಈಡಿಗ , ಬಿಲ್ಲವ , ನಾಮಧಾರಿ ೨೬ ಒಳಪಂಗಡಗಳ ಅಭಿವೃದ್ಧಿಗೆ ಕುಲಶಾಸ್ತ್ರ ಅಧ್ಯಯನಕ್ಕೆ ರಾಜ್ಯ ಸರಕಾರ ೨೫ ಲಕ್ಷ ರೂ. ಘೋಷಣೆ ಮಾಡಿದೆ. ಬ್ರಹ್ಮಶ್ರೀನಾರಾಯಣ ಗುರುಗಳ ಹೆಸರಿನಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸರಕಾರ ನೀಡಬಹುದೆಂಬ ಭರವಸೆ ಇದೆ . ನಾಳೆ ಸರಕಾರ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಹುತೇಕ ಬೇಡಿಕೆಗಳು ಮಾರ್ಚ್ ೩ರೊಳಗೆ ಈಡೇರಿಸುವ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಾದಯಾತ್ರೆ ಸಮಿತಿಯ ಜಿಲ್ಲಾಧ್ಯಕ್ಷ ಜಿತೇಂದ್ರ ಜೆ ಸುವರ್ಣ, ಬಿಲ್ಲವ ಸಮುದಾಯ ಮುಖಂಡರಾದ ಸುರೇಶ್ ಚಂದರ್ ಕೋಟ್ಯಾನ್, ಲೋಕನಾಥ ಪೂಜಾರಿ, ಚಂದ್ರಶೇಖರ, ವಿಶುಕುಮಾರ್ ಕಲ್ಯಾಣಪುರ, ಸರ್ವೊತ್ತಮ ಪೂಜಾರಿ, ಗೋಪಾಲಕೃಷ್ಣ, ಅಕ್ಷಯ ಕಾರ್ಕಳ, ಬಾಲಕೃಷ್ಣ ಮಲ್ಪೆ , ದಾಮೋದರ ಮತ್ತಿತರರು ಉತಸ್ಥಿತರಿದ್ದರು.







