ನಮಗೆ ನಮ್ಮ ಸಂಬಳ ನೀಡಿ, ಕಾಶ್ಮೀರಕ್ಕೆ ಮರಳಲು ಒತ್ತಾಯಿಸಬೇಡಿ: ಸರಕಾರಕ್ಕೆ ಪಂಡಿತ ನೌಕರರ ಆಗ್ರಹ

ಶ್ರೀನಗರ, ಫೆ. 16: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಮ್ಮ ಬಾಕಿ ವೇತನ ಬಿಡುಗಡೆ ಮಾಡುವಂತೆ ಮುಷ್ಕರ ನಿರತ ಪಿಎಂ ಪ್ಯಾಕೇಜ್ ಪಂಡಿತ ನೌಕರರು ಸರಕಾರವನ್ನು ಆಗ್ರಹಿಸಿದ್ದಾರೆ. ಭದ್ರತೆ ಕುರಿತು ಆತಂಕ ಇರುವುದರಿಂದ ಕಾಶ್ಮೀರಕ್ಕೆ ಮರಳಲು ಒತ್ತಾಯಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ನಮ್ಮ ಸಂಬಳವನ್ನು ಕಳೆದ ಕೆಲವು ತಿಂಗಳುಗಳಿಂದ ತಡೆ ಹಿಡಿಯಲಾಗಿದೆ.
ಮಹಾಶಿವರಾತ್ರಿಯಂದು ನಮ್ಮ ಬಾಕಿ ಇರುವ ಸಂಬಳವನ್ನು ಸರಕಾರ ಬಿಡುಗಡೆ ಮಾಡಬೇಕು ಎಂದು ಕಾಶ್ಮೀರದ ನೌಕರರ ಸಂಘದ ಅಧ್ಯಕ್ಷ ರುಬೋನ್ ಸಪ್ರು ಹೇಳಿದ್ದಾರೆ. ಕಣಿವೆಯಲ್ಲಿ ತಮ್ಮ ಕೆಲಸವನ್ನು ಪುನರಾರಂಭಿಸಿದ ಪಿಎಂ ಪ್ಯಾಕೇಜ್ ಪಂಡಿತ ನೌಕರರ ವೇತನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಇತ್ತೀಚೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಬಾಕಿ ಇರುವ ವೇತನ ಬಿಡುಗಡೆಗೆ ಸರಕಾರ ಯಾವುದೇ ಷರತ್ತುಗಳನ್ನು ವಿಧಿಸಬಾರದು ಎಂದು ಸಪ್ರು ಹೇಳಿದ್ದಾರೆ.
‘‘ಪಿಎಂ ಪ್ಯಾಕೇಜ್ ನ ಎಲ್ಲ ನೌಕರರು ತಮ್ಮ ಸಂಬಳ ಪಡೆಯುವುದನ್ನು ಆಡಳಿತ ಖಚಿತಪಡಿಸಿಕೊಳ್ಳಬೇಕು. ಇದರಿಂದ ಅವರು ತಮ್ಮ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯದ ಪ್ರಕಾರ ಮಹಾಶಿವರಾತ್ರಿ ಆಚರಿಸಬಹುದು’’ ಎಂದು ಅವರು ಹೇಳಿದ್ದಾರೆ. ಕೇಂದ್ರ ಕಾಶ್ಮೀರದಲ್ಲಿರುವ ತನ್ನ ಕಚೇರಿಯಲ್ಲಿ ಪಂಡಿತ ನೌಕರ ರಾಹುಲ್ ಭಟ್ ಭಯೋತ್ಪಾದಕರಿಂದ ಹತ್ಯೆಯಾದ ಬಳಿಕ 5,000ಕ್ಕೂ ಅಧಿಕ ಪಿಎಂ ಪ್ಯಾಕೇಜ್ ಪಂಡಿತ ನೌಕರರು ಕಳೆದ ವರ್ಷ ಮೇ 12ರಿಂದ ಮುಷ್ಕರ ನಡೆಸುತ್ತಿದ್ದಾರೆ.
ಪಿಎಂ ಪ್ಯಾಕೇಜ್ ನೌಕರರಲ್ಲಿ ಹೆಚ್ಚಿನವರು ಹತ್ಯೆಯ ಬಳಿಕ ಕಣಿವೆ ತೊರೆದಿದ್ದಾರೆ ಹಾಗೂ ಜಮ್ಮುವಿನಲ್ಲಿ ಪ್ರತಿದಿನ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಕೆಲವರು ತಮ್ಮ ಕರ್ತವ್ಯವನ್ನು ಪುನರಾರಂಭಿಸಲು ಕಣಿವೆಗೆ ಮರಳಿದ್ದಾರೆ. ಪಂಡಿತ ನೌಕರರು ಜಮ್ಮುವಿನ ಪ್ರೆಸ್ ಕ್ಲಬ್ ಮುಂದೆ ಪ್ರತಿಭಟನೆ ನಡೆಸಲು ಯೋಜಿಸಿದ್ದರು. ಆದರೆ, ಪ್ರತಿಭಟನೆಯನ್ನು ನಿಗ್ರಹಿಸಲು ಆಡಳಿತ ಸುತ್ತಮುತ್ತ ಪ್ರದೇಶದಲ್ಲಿ 144 ಸೆಕ್ಷನ್ ಅನ್ನು ಜಾರಿಗೊಳಿಸಿತ್ತು. ಅನಂತರ ಪಂಡಿತ ನೌಕರರು ಜಮ್ಮುವಿನಲ್ಲಿರುವ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.







