'ರಾಮನಗರದಲ್ಲಿ ರಾಮ ಮಂದಿರ'ದ ಘೋಷಣೆ ಬಜೆಟ್ ಪುಸ್ತಕದಲ್ಲಿಯೇ ಉಳಿಯಲಿದೆ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಮೂರು ತಿಂಗಳಲ್ಲಿ ಚುನಾವಣೆ ಇಟ್ಟುಕೊಂಡು ಶಾಸ್ತ್ರಕ್ಕೆ ಮಂಡಿಸಿರುವ ರಾಜ್ಯ ಮುಂಗಡ ಪತ್ರ ರಾಜ್ಯದ ಜನರ ಸಂಕಷ್ಟಗಳನ್ನು ಪರಿಹಾರ ಮಾಡಲು ಮೂರು ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಇನ್ನೂ ಸರಳವಾಗಿ ಹೇಳುವುದಾದರೆ, ವರ್ಷಕ್ಕೊಮ್ಮೆ ಜಾತ್ರೆ ಮುಗಿದ ಮೇಲೆ ಅಲ್ಲಿನ ಅಂಗಡಿಗಳು ಸ್ಟಾಕ್ ಕ್ಲಿಯರೆನ್ಸ್ ಸೇಲ್ ಬೋರ್ಡ್ ಹಾಕಿ ರಿಯಾಯಿತಿ ದರದ ಘೋಷಣೆ ಮಾಡುತ್ತವೆ, ಹಾಗಿದೆ ಈ ಬಜೆಟ್' ಎಂದು ವ್ಯಂಗ್ಯವಾಡಿದರು.
'ಬಿಜೆಪಿಯಿಂದ ರಾಮನಗರದಲ್ಲಿ ರಾಮಮಂದಿರ ಕಟ್ಟಲು ಸಾಧ್ಯವಿಲ್ಲ. ರಾಮಮಂದಿರ ಘೋಷಣೆ ಬಜೆಟ್ ಬುಕ್ನಲ್ಲೇ ಉಳಿಯುತ್ತದೆ. ರಾಮಮಂದಿರ ನಿರ್ಮಾಣ ನನ್ನಿಂದ ಸಾಧ್ಯ. ರಾಮನಗರದಲ್ಲಿ ಯಾವುದೇ ಜಪ ಮಾಡಿದರು ಏನೂ ಆಗಲ್ಲ' ಎಂದು ತಿಳಿಸಿದರು.
ಮೂರು ವರ್ಷಗಳಲ್ಲಿ ಬಿಜೆಪಿ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದೆ. ಕೈಗಾರಿಕೆ, ಮೂಲಸೌಕರ್ಯ, ಸಾರಿಗೆ, ಶಿಕ್ಷಣ, ಕೃಷಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಬಸವಳಿದಿದೆ. ಕೇಂದ್ರದ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ದುಸ್ಥಿತಿ ಬಂದಿದೆ. ಕೇಂದ್ರ ಸರಕಾರವು ರಾಜ್ಯಕ್ಕೆ ಅನುದಾನವನ್ನು ಭಿಕ್ಷೆಯಂತೆ ಹಾಕುತ್ತಿದೆ. ಇನ್ನು ಈ ಬಜೆಟ್ಟಿನ ಹಣೆಬರಹಕ್ಕೆ ದಿಕ್ಕೆಲ್ಲಿ ಎಂದು ಮಾಜಿ ಮುಖ್ಯಮಂತ್ರಿ ಅವರು ಕಟುವಾಗಿ ಟೀಕಿಸಿದರು.
ಬೊಮ್ಮಾಯಿ ಬಜೆಟ್ಗೆ ಯಾವುದೇ ಮಹತ್ವ ಇಲ್ಲ. ಇದು ಅತ್ಯಂತ ನೀರಸ, ಮಾತ್ರವಲ್ಲ ನಿರುಪಯುಕ್ತ ಕೂಡ. ಚುನಾವಣೆ ನಂತರ ಬರುವ ಸರಕಾರ ಮಂಡಿಸುವ ಬಜೆಟ್ ಜಾರಿಗೆ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎನ್ನುವುದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ಸಂಗತಿ ಎಂದು ಅವರು ತಿಳಿಸಿದರು.







