ಪ್ರಾಂಶುಪಾಲೆಯಿಂದ ವಿದ್ಯಾರ್ಥಿಗಳಿಬ್ಬರಿಗೆ ಕಿರುಕುಳ: ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ರಿಯಾನ್ ಇಂಟರ್ ನ್ಯಾಷನಲ್ ಸ್ಕೂಲ್ನಿಂದ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮತ್ತು ಪರೀಕ್ಷೆ ಬರೆಯಲು ಅವಕಾಶ ನೀಡದ ಧೋರಣೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಪೋಷಕರ ಪರ ಮಧ್ಯಂತರ ತೀರ್ಪು ನೀಡಿರುವ ಹೈಕೋರ್ಟ್, ಫೆ.20ರಿಂದ ಪ್ರಾರಂಭವಾಗಲಿರುವ 9ನೆ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಬೇಕೆಂದು ಆದೇಶಿಸಿದೆ.
ಅಲ್ಲದೆ, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ ಸೋಮವಾರದಿಂದ ಆರಂಭವಾಗಲಿರುವ 9ನೆ ತರಗತಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ನಿರ್ದೇಶನ ನೀಡಿದ್ದು, ಮುಂದಿನ ವಿಚಾರಣೆಗೆ ಫೆ.24ರಂದು ಹಾಜರಾಗುವಂತೆ ನಿರ್ದೇಶನ ನೀಡಿದೆ.
ಮೇಲ್ಕಂಡ ಶಾಲೆಯಲ್ಲಿ ಹರಿಶಂಕರ್ ಎಂಬವರ ಎರಡನೇ ಪುತ್ರ 9ನೆ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಡಿಸೆಂಬರ್ ಎರಡನೆ ವಾರದಲ್ಲಿ ನಡೆದ ಪರೀಕ್ಷೆಗೂ ಹಾಜರಾಗಲು ಪ್ರಾಂಶುಪಾಲರು ಅವಕಾಶ ನೀಡಿರಲಿಲ್ಲ. ಹರಿವಂಶ್ ಅವರ 9 ಮತ್ತು 10ನೆ ತರಗತಿ ಓದುತ್ತಿರುವ ತಮ್ಮ ಮಕ್ಕಳಿಬ್ಬರು ಒಂದೂವರೆ ವರ್ಷದಿಂದ ಶಾಲೆಯಲ್ಲಿ ಕಿರುಕುಳ ನೀಡಲಾಗುತ್ತಿದೆ. ವಿಶೇಷವಾಗಿ ಪ್ರಾಂಶುಪಾಲೆ ಪ್ರೀತಿ ಸೆತ್ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ಈ ಬಗ್ಗೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಂತರ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೂ ದೂರು ಸಲ್ಲಿಸಿದ್ದರು. ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಗಮನಕ್ಕೂ ಈ ವಿಚಾರವನ್ನು ತಂದಿದ್ದರು. ರಾಷ್ಟ್ರೀಯ ಆಯೋಗ ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಶಾಲೆಯಲ್ಲಿ ಪದೇ ಪದೇ ಪೋಷಕರ ಸಭೆ ಕರೆದು ಅನಗತ್ಯವಾಗಿ ಪೋಷಕರನ್ನು ಪ್ರಶ್ನಿಸುತ್ತಿದ್ದರು. ಇದನ್ನು ಪೋಷಕರು ಆಕ್ಷೇಪಿಸಿದ ಕಾರಣಕ್ಕಾಗಿ ತನ್ನ ಮಕ್ಕಳಿಬ್ಬರಿಗೆ ಕಿರುಕುಳ ನೀಡಿದ್ದಾರೆ. ಮಕ್ಕಳು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆಂದು ಪೋಷಕರು ಆರೋಪಿಸಿದ್ದರು.
ಕಳೆದ 9-10 ವರ್ಷಗಳಿಂದ ಮಕ್ಕಳು ಇದೆ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಒಂದೂವರೆ ವರ್ಷದ ಹಿಂದೆ ಪ್ರೀತಿ ಸೆತ್ ಪ್ರಾಂಶುಪಾಲರಾದ ನಂತರ ಇಂತಹ ಸಮಸ್ಯೆ ನಿರ್ಮಾಣವಾಗಿದೆ ಎಂದು ಹರಿಶಂಕರ್ ಆರೋಪಿಸಿದ್ದರು. ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡದ ಕಾರಣಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು.







