ವಿಧಾನಸೌಧ ಬಳಿ ಸಿಕ್ಕ 10 ಲಕ್ಷ ರೂ. ಹಣದ ಮೂಲ ಪತ್ತೆ

ಬೆಂಗಳೂರು: ಇತ್ತೀಚಿಗೆ ವಿಧಾನಸೌಧದ ಬಳಿ ಪತ್ತೆಯಾಗಿದ್ದ 10 ಲಕ್ಷ ರೂ. ಹಣದ ಮೂಲವನ್ನು ವಿಧಾನಸೌಧ ಠಾಣಾ ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ.
ಇಂಜಿನಿಯರ್ ಜಗದೀಶ್ ಮೂವರು ವ್ಯಕ್ತಿಗಳಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದ. ಗುತ್ತಿಗೆದಾರರೊಬ್ಬರಿಂದ 5 ಲಕ್ಷ ರೂ. ಹಾಗೂ ತನ್ನಿಬ್ಬರು ಸಹೋದ್ಯೋಗಿಗಳ ಬಳಿ ತಲಾ 3.5 ಮತ್ತು 1.5 ಲಕ್ಷ ರೂ.ಹಣ ಸಾಲ ಪಡೆದಿದ್ದ ಎಂದು ತಿಳಿದುಬಂದಿದೆ.
ಜಗದೀಶ್ಗೆ ಹಣ ಕೊಟ್ಟ ಮೂವರು ವ್ಯಕ್ತಿಗಳನ್ನು ವಿಚಾರಣೆ ನಡೆಸಿರುವ ವಿಧಾನಸೌಧ ಪೊಲೀಸರು ಹೇಳಿಕೆಯನ್ನು ದಾಖಲಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ಇರುವುದು ಬೆಳಕಿಗೆ ಬಂದಿದೆ. ಚೆಕ್ಬೌನ್ಸ್ ಪ್ರಕರಣ ಸಂಬಂಧ ಹಣ ಮರುಪಾವತಿಗೆ ಜಗದೀಶ್ ಹಣ ಹೊಂದಿಸಿದ್ದ ಎಂದು ಹೇಳಲಾಗುತ್ತಿದೆ.
ಜ.5ರಂದು ವಿಧಾನಸೌಧದ ಪೂರ್ವಗೇಟ್ನಲ್ಲಿ 10 ಲಕ್ಷ ರೂಪಾಯಿ ಹಣವನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಕೇಂದ್ರ ಡಿಸಿಪಿ ಶ್ರೀನಿವಾಸ ಗೌಡ ಹೇಳಿಕೆ ನೀಡಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಹಣದ ಸಹಿತ ಬಂದಿದ್ದರು. ಈ ವೇಳೆ ವಿಧಾನ ಸೌಧ ಮತ್ತು ವಿಕಾಸ ಸೌಧದ ಭದ್ರತಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ಬಳಿ ಸರಿಯಾದ ಉತ್ತರ ಇಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದಿದ್ದರು.