ಕಡಬ | ಆನೆ ದಾಳಿ ಪ್ರಕರಣ: ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಭೇಟಿಗೆ ಸ್ಥಳೀಯರ ಪಟ್ಟು

ಕಡಬ, ಫೆ.20: ರೆಂಜಿಲಾಡಿ ಗ್ರಾಮದ ಇಬ್ಬರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಆಕ್ರೋಶಕ್ಕೊಳಗಾಗಿದ್ದಾರೆ. ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಆಗಮಿಸಬೇಕು. ಅಲ್ಲಿಯವರೆಗೆ ಮೃತದೇಹದ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಅರಣ್ಯ ಇಲಾಖೆಯ ವಿರುದ್ದ ಮತ್ತು ಇಲ್ಲಿ ಕಾಡಾನೆ ಸಮಸ್ಯೆಯ ಬಗ್ಗೆ ಸ್ಥಳೀಯರೊಬ್ಬರು ಈ ಹಿಂದೆ ವೀಡಿಯೊ ಮಾಡಿ ಯೂಟ್ಯೂಬ್ ನಲ್ಲಿ ಹಾಕಿದ್ದರು. ಇದನ್ನು ಕಡಬ ಪೋಲಿಸರು ಡಿಲಿಟ್ ಮಾಡಿಸಿದ್ದು, ಈ ವಿಚಾರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರ ಜೊತೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದರು. ಇದರಿಂದ ಸ್ಥಳದಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಭಾಗದಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದರೂ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವೀಡಿಯೊ ಡಿಲೀಟ್ ಮಾಡಿಸಿದ ಪೊಲೀಸರು!
ಕೆಲ ದಿನಗಳ ಹಿಂದೆ ಮರ್ಧಾಳದ ಸಂತೋಷ್ ಎಂಬವರು ಈ ಪರಿಸರದಲ್ಲಿ ಕಾಡಾನೆ ಹಾವಳಿ ಬಗ್ಗೆ ಸಚಿತ್ರ ವರದಿ ತಯಾರಿಸಿ ವೀಡಿಯೊ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಐತ್ತೂರು ಪಿಡಿಒ ನೀಡಿದ್ದ ದೂರನ್ನು ಅನುಸರಿಸಿ ಕಡಬ ಪೊಲೀಸರು ವೀಡಿಯೋ ಡಿಲೀಟ್ ಮಾಡಿಸಿದ್ದರೆನ್ನಲಾಗಿದೆ. ಈ ವಿಚಾರವೂ ಪ್ರಸ್ತಾಪವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳದಲ್ಲಿ ಎಲ್ಲರೂ ಇಲಾಖಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ.