ಛತ್ತೀಸ್ಗಢ ನಾಯಕರ ಮೇಲೆ ಈಡಿ ದಾಳಿ: 'ತೃತೀಯ ದರ್ಜೆಯ ರಾಜಕೀಯ' ಎಂದ ಕಾಂಗ್ರೆಸ್

ಹೊಸದಿಲ್ಲಿ: ಕಲ್ಲಿದ್ದಲು ಲೆವಿಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆಯು ತನ್ನ ಪಕ್ಷದ ಸಹೋದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಡಳಿತದ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್(Bhupesh Baghel) ವಾಗ್ದಾಳಿ ನಡೆಸಿದ್ದಾರೆ. ಹತಾಶೆಗೊಂಡಿರುವ ಬಿಜೆಪಿ 'ತೃತೀಯ ದರ್ಜೆಯ ರಾಜಕೀಯ' ಮಾಡುತ್ತಿದೆ ಎಂದು ಆರೋಪಿಸಿದರು.
"ಇಂದು ಈಡಿ (ಜಾರಿ ನಿರ್ದೇಶನಾಲಯ) ಛತ್ತೀಸ್ಗಢ ಕಾಂಗ್ರೆಸ್ನ ಖಜಾಂಚಿ, ಪಕ್ಷದ ಮಾಜಿ ಉಪಾಧ್ಯಕ್ಷ ಹಾಗೂ ಶಾಸಕ ಸೇರಿದಂತೆ ನನ್ನ ಅನೇಕ ಸಹೋದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಿದೆ ”ಎಂದು ಬಘೇಲ್ ಟ್ವೀಟ್ ಮಾಡಿದ್ದಾರೆ.
“ನಾಲ್ಕು ದಿನಗಳಲ್ಲಿ ರಾಯ್ಪುರದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ನಮ್ಮ ನಾಯಕರನ್ನು ತಡೆಯುವ ಮೂಲಕ ನಮ್ಮ ಚೈತನ್ಯವನ್ನು ಮುರಿಯಲು ಸಾಧ್ಯವಿಲ್ಲ. ಭಾರತ್ ಜೋಡೋ ಯಾತ್ರೆಯ ಯಶಸ್ಸಿನಿಂದ ಹಾಗೂ ಅದಾನಿ ಸತ್ಯ ಬಹಿರಂಗಗೊಂಡಿದ್ದರಿಂದ ಬಿಜೆಪಿ ಹತಾಶವಾಗಿದೆ. ಈ ದಾಳಿ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ. ದೇಶಕ್ಕೆ ಸತ್ಯ ಗೊತ್ತಿದೆ. ನಾವು ಹೋರಾಡಿ ಗೆಲ್ಲುತ್ತೇವೆ'' ಎಂದು ಬಘೇಲ್ ಟ್ವೀಟ್ ಮಾಡಿದ್ದಾರೆ.





