ಸುಳ್ಯ: ಸಾಲ ತೀರಿಸಲಾಗದೆ ಬ್ಯಾಂಕ್ ನೊಳಗೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ

ಸುಳ್ಯ: ಸರಸ್ವತಿ ಕ್ರೆಡಿಟ್ ಸೌಹಾರ್ದ ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಾಲ ಪಡೆದ ಗ್ರಾಹಕರೊಬ್ಬರು ಬ್ಯಾಂಕ್ ಗೆ ಬಂದು ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಸುಳ್ಯದ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಂಘದಿಂದ ಗಾಂಧಿನಗರದಲ್ಲಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿರುವ ಶಿವಣ್ಣ ಗೌಡ ಎಂಬವರು 2015ರಲ್ಲಿ 18 ಲಕ್ಷದ 50 ಸಾವಿರ ಪರ್ಚೆಸ್ ಲೋನ್ ಪಡೆದುಕೊಂಡಿದ್ದರು. ಲೋನ್ ಪಡೆದ ಬಳಿಕ ಪಾವತಿಯೂ ಸರಿಯಾಗಿಯೇ ಇತ್ತು. ಆದರೆ ಕೊರೋನ ಕಾಲದ ಬಳಿಕ ಶಿವಣ್ಣ ಗೌಡರು ಬ್ಯಾಂಕ್ ಗೆ ಲೋನ್ ಕಂತು ಕಟ್ಟಿರಲಿಲ್ಲ. ತೆಗೆದ ಸಾಲ ಬೆಳೆಯುತ್ತಾ ಹೋಯಿತು. ಬ್ಯಾಂಕ್ ನವರು ಶಿವಣ್ಣ ಗೌಡರಿಗೆ ಲೋನ್ ಕಟ್ಟುವಂತೆ ತಿಳಿಸಿದ್ದರು. ಕೆಲವು ಬಾರಿ ಬ್ಯಾಂಕ್ ಗೆ ಬಂದ್ದಿದ್ದ ಶಿವಣ್ಣ ಗೌಡರು ನನಗೆ ರಿಯಾಯಿತಿ ಮಾಡುವಂತೆಯೂ ಕೇಳಿಕೊಂಡರೆಂದೂ ತಿಳಿದುಬಂದಿದೆ. ಶಿವಣ್ಣ ಗೌಡರ ಕೋರಿಕೆಯ ಮೇರೆಗೆ ಬ್ಯಾಂಕ್ ನವರು ಬಡ್ಡಿ ರಿಯಾಯಿತಿಯೂ ನೀಡಿದ್ದರೆಂದೂ ತಿಳಿದುಬಂದಿದೆ. ಆದರೆ ಅಸಲು ಹಾಗೆ ಉಳಿದಿತ್ತು.
ಸೋಮವಾರ ಬೆಳಗ್ಗೆ ಬ್ಯಾಂಕ್ ಓಪನ್ ಆಗುವ ಸಂದರ್ಭ ಶಿವಣ್ಣ ಗೌಡರು ಬಂದಿದ್ದರು. ಬ್ಯಾಂಕ್ ಓಪನ್ ಆಗಿ ಸಿಬ್ಬಂದಿಗಳು ಬರುತ್ತಿದ್ದಂತೆ ಬ್ಯಾಂಕ್ ಒಳಗೆ ಬಂದ ಶಿವಣ್ಣ ಗೌಡರು ಕ್ಯಾನ್ನಲ್ಲಿ ತಂದಿದ್ದ ಪೆಟ್ರೋಲ್ನ್ನು ಬ್ಯಾಂಕ್ನೊಳಗೆ ಚೆಲ್ಲಿ ನಾನು ಆತ್ಮಹತ್ಯೆ ಮಾಡುವುದಾಗಿ ಹೇಳಿದರೆನ್ನಲಾಗಿದೆ. ಇದನ್ನರಿತ ಬ್ಯಾಂಕ್ ನ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಶಿವಣ್ಣರನ್ನು ತಡೆದು ಬ್ಯಾಂಕ್ ನಿಂದ ಹೊರಗೆ ಎಳೆದು ತಂದರು. ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸುಳ್ಯ ಪೊಲೀಸರು ಬಂದು ಶಿವಣ್ಣ ಗೌಡರನ್ನು ವಶಪಡಿಸಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ.







