ಅನುಷ್ಠಾನದಲ್ಲಿ ಹಿಂದಿದ್ದರೂ ಕೋಟ್ಯಂತರ ರೂ. ಖರ್ಚು ಮಾಡಿ ಫಲಾನುಭವಿಗಳ ಸಮ್ಮೇಳನ!

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಯವ್ಯಯದಲ್ಲಿ ಘೋಷಿಸಿದ್ದ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನದಲ್ಲಿ ಹಿಂದೆ ಬಿದ್ದಿದ್ದರೂ ವಿಧಾನಸಭೆ ಚುನಾವಣೆಗಿನ್ನು ಮೂರ್ನಾಲ್ಕು ತಿಂಗಳು ಇರುವಾಗಲೇ ರಾಜ್ಯ ಬಿಜೆಪಿ ಸರಕಾರವು ಇದೀಗ ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜಿಸಲು ಮುಂದಾಗಿದೆ.
ಈಗಾಗಲೇ ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಸರಕಾರವು ಆಯೋಜಿಸಿದ್ದ ಬೃಹತ್ ಸಮ್ಮೇಳನ, ಸಮಾವೇಶಕ್ಕೆ ಪ್ರಧಾನಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ಘಟಕದ ಹಲವು ಧುರೀಣರು ಭಾಗವಹಿಸಿದ್ದ ಕಾರ್ಯಕ್ರಮಕ್ಕೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ದುಂದುವೆಚ್ಚ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿರುವ ಹೊತ್ತಿನಲ್ಲೇ ಜಿಲ್ಲಾ ಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಆಯೋಜಿಸಬೇಕು ಎಂದು ಎಲ್ಲ ಇಲಾಖೆಗಳ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾ ರಿಗಳಿಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು 2023ರ ಫೆ.10ರಂದು ನಿರ್ದೇಶಿಸಿ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ''the-file.in''ಗೆ ಲಭ್ಯವಾಗಿದೆ.
ಮುಖ್ಯ ಕಾರ್ಯದರ್ಶಿ ಬರೆದಿರುವ ಪತ್ರದಲ್ಲೇನಿದೆ?:
ದೇಶದ ಪ್ರಜೆಗಳೆಲ್ಲರ ಸರ್ವತೋಮುಖ ಅಭಿವೃ ದ್ಧಿಗೆ ಕಂಕಣಬದ್ಧವಾಗಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ಪ್ರಸ್ತುತ ಭಾರತ ಸರಕಾರದ ಪ್ರಾಯೋಜಕತ್ವದ ಯೋಜ ನೆಗಳು ಹಾಗೂ ಸ್ವಯಂ ರಾಜ್ಯ ಸರಕಾರದ ಹಲವು ಯೋಜನೆಗಳ ಮೂಲಕ ಸಮಾಜದ ಕಟ್ಟ ಕಡೆಯ ನಾಗರಿಕರನ್ನು ತಲುಪಲು ನಮ್ಮ ಸರಕಾರವು ಅವಿರತವಾಗಿ ಕ್ರಮ ವಹಿಸಿದೆ.
ಕೇಂದ್ರ ಸರಕಾರದ ಪ್ರಾಯೋಜಿತ/ಸ್ವಯಂ ರಾಜ್ಯ ಸರಕಾರದ ಫಲಾನುಭವಿ ಆಧಾರಿತ ಹಲವು ಯೋಜನೆಗಳಿಗೆ ಸಂಪೂರ್ಣವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಆಯಾ ಇಲಾಖೆಗಳ ಸಹಯೋಗದಲ್ಲಿ ಆಂದೋಲನ ರೂಪದಲ್ಲಿ ಚಾಲನೆ ನೀಡಲು ತಿಳಿಸಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲ ಫಲಾನುಭವಿ ಆಧರಿತ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ವಹಿಸಬೇಕು.
ಫಲಾನುಭವಿಗಳ ಆಧಾರಿತ ಯೋಜನೆಗಳ ಎಲ್ಲ ಅರ್ಹ ಫಲಾನುಭವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕರನ್ನು ಒಳಗೊಂಡಂತೆ ಫಲಾನುಭವಿಗಳ ಸಮ್ಮೇಳನವನ್ನು ಶೀಘ್ರವಾಗಿ ಆಯೋಜಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ನಿರ್ದೇಶಿಸಿದ್ದಾರೆ.
‘ಬೊಕ್ಕಸದ ಮೇಲೆ ವ್ಯತಿರಿಕ್ತ ಪರಿಣಾಮ’
ಕಂದಾಯ ಗ್ರಾಮಗಳಲ್ಲಿ ವಾಸಿಸುತ್ತಿರುವ ಮಂದಿಗೆ ಹಕ್ಕುಪತ್ರಗಳನ್ನು ಸ್ಥಳೀಯ ತಹಶೀಲ್ದಾರ್ಗಳು ನಿಯಮಾನುಸಾರ ವಿತರಿಸುತ್ತಾರೆ. ಚುನಾವಣೆ ವರ್ಷವಾಗಿರುವ ಕಾರಣ ಹಕ್ಕುಪತ್ರಗಳ ವಿತರಣೆಯನ್ನು ರಾಜಕೀಯಕರಣಗೊಳಿಸಲಾಗುತ್ತಿದೆಯಲ್ಲದೇ ಇದರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುಂದುವೆಚ್ಚ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಬೊಕ್ಕಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಿದ್ದರೂ ಜಿಲ್ಲಾಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲು ಹೊರಡಿಸಿರುವ ಸುತ್ತೋಲೆಯು ಬೊಕ್ಕಸದಲ್ಲಿ ಉಳಿದಿರುವ ಹಣವನ್ನೂ ಬರಿದಾಗಿಸಲಿದೆ ಎನ್ನುತ್ತಾರೆ ಉನ್ನತ ಅಧಿಕಾರಿಯೊಬ್ಬರು.







