ಸರಕಾರ ರಚನೆಯಲ್ಲಿ ಕರ್ನಾಟಕ ಜನತಾ ಪಕ್ಷ ಕಿಂಗ್ ಮೇಕರ್: ಪದ್ಮನಾಭ ಪ್ರಸನ್ನ

ಉಡುಪಿ: ಕರ್ನಾಟಕ ಜನತಾ ಪಕ್ಷವು ಈ ಬಾರಿಯ ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಸುಮಾರು ೫೦ ಸ್ಥಾನಗಳಲ್ಲಿ ಗೆಲವು ಸಾಧಿಸ ಲಿದೆ. ಈ ಮೂಲಕ ಪಕ್ಷವು ಸರಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮುಂದಿನ ವಾರ ಬೆಂಗಳೂರಿನಲ್ಲಿ ಬಿಡುಗಡೆ ಗೊಳಿಸಲಾಗುವುದು. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಟಿಕೆಟ್ ಸಿಗದ ಪ್ರಮುಖ ನಾಯಕರು ನಮ್ಮ ಪಕ್ಷದಲ್ಲಿ ಸ್ಪರ್ಧಿಸಲಿದ್ದಾರೆ. ಮುಂದೆ ಇವರ ಹೆಸರನ್ನು ಬಹಿರಂಗ ಪಡಿಸಲಾಗುವುದು ಎಂದರು.
ಬಿಜೆಪಿ ಹಾಗೂ ಕಾಂಗ್ರೆಸ್ ಬಹುತೇಕ ಲೂಟಿಕೋರರು, ಕ್ರಿಮಿನಲ್ ಹಿನ್ನೆಲೆ ಉಳ್ಳವರಿಗೆ ಮನ್ನಣೆ ನೀಡುತ್ತಿದ್ದು, ಈ ರೀತಿಯ ಹಿನ್ನೆಲೆ ಉಳ್ಳವರು ಇಂದು ಆಡಳಿತ ಮತ್ತು ರಾಜ್ಯಭಾರದಲ್ಲಿ ಹೆಚ್ಚಿದ್ದಾರೆ. ಇದರ ಪರಿಣಾಮ ರಾಜ್ಯ ರಾಜಕೀಯದಲ್ಲಿ ಅರಾಜಕತೆ ತಾಂಡವಾಡುತ್ತಿದೆ. ಈ ಅರಾಜಕೀಯ ವನ್ನು ಕಿತ್ತು ಹಾಕಿ ನ್ಯಾಯಸಮ್ಮತ ಆಡಳಿತಕ್ಕಾಗಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಕೇಲವೇ ದಿನದಲ್ಲಿ ಪಕ್ಷದಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷ ನಿರ್ಮಲಾ ರಾಜ ಕುಮಾರ್, ಮುಖಂಡರಾದ ವಿಲನ್ ಗೋವನ್, ದೊರೆಸ್ವಾಮಿ, ಪುಟ್ಟಸ್ವಾಮಿ ಉಪಸ್ಥಿತರಿದ್ದರು.







