ಸೋಲಾರ್ ಮ್ಯಾನ್ ಆಫ್ ಇಂಡಿಯಾ ಪ್ರೊ. ಚೇತನ್ ಸಿಂಗ್ ಸೋಲಂಕಿ ಎನ್ಐಟಿಕೆಗೆ ಭೇಟಿ

ಮಂಗಳೂರು, ಫೆ.22: ಸೋಲಾರ್ ಮ್ಯಾನ್ ಆಫ್ ಇಂಡಿಯಾ ಮತ್ತು ಸೋಲಾರ್ ಗಾಂಧಿ ಎಂಬ ಹೆಸರು ಪಡೆದರುವ ಐಐಟಿ ಬಾಂಬೆಯ ಪ್ರಾಧ್ಯಾಪಕ ಪ್ರೊ. ಚೇತನ್ ಸಿಂಗ್ ಸೋಲಂಕಿ ಬುಧವಾರ ತಮ್ಮ ಸೋಲಾರ್ ಬಸ್ನಲ್ಲಿ ಎನ್ಐಟಿಕೆಗೆ ಭೇಟಿ ನೀಡಿದ್ದಾರೆ.
ಪ್ರೊ. ಚೇತನ್ ಸಿಂಗ್ ಸೋಲಂಕಿ ನವೆಂಬರ್ 2020ರಲ್ಲಿ ಸೋಲಾರ್ ಬಸ್ನಲ್ಲಿ ಎನರ್ಜಿ ಸ್ವರಾಜ್ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ ಮತ್ತು 2030 ರವರೆಗೆ ಹನ್ನೊಂದು ವರ್ಷಗಳ ಕಾಲ ಯಾತ್ರೆಯನ್ನು ಮುಂದುವರಿಸಲಿದ್ದಾರೆ.
ಈ ಯಾತ್ರೆಯಲ್ಲಿ ಪ್ರೊ.ಸೋಲಂಕಿ ಅವರು 11 ವರ್ಷಗಳ ಕಾಲ ಮನೆಗೆ ಹಿಂತಿರುಗುವುದಿಲ್ಲ ಮತ್ತು ಸೋಲಾರ್ ಬಸ್ನಲ್ಲಿ ಮಾತ್ರ ಇರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಎನರ್ಜಿ ಸ್ವರಾಜ್ ಯಾತ್ರೆಯಲ್ಲಿ ಶೇ100 ಸೌರ ಶಕ್ತಿಯನ್ನು ಅಳವಡಿಸಿಕೊಳ್ಳುವ ಕಡೆಗೆ ಜನಜಾಗೃತಿ ಮೂಡಿಸುವ ಅಭಿಯಾನವನ್ನು ಸೋಲಂಕಿ ಕೈಗೊಂಡಿದ್ದಾರೆ.
ಪ್ರೊ. ಸೋಲಂಕಿ ಅವರು ಪ್ರಪಂಚದಾದ್ಯಂತ 30 ದೇಶಗಳಲ್ಲಿ ಸೌರಶಕ್ತಿಯ ಬಗ್ಗೆ ಸಂದೇಶವನ್ನು ಹರಡಿದ್ದಾರೆ. ಈ ಎನರ್ಜಿ ಸ್ವರಾಜ್ ಯಾತ್ರೆಯ ಭಾಗವಾಗಿ, ಅವರು ಈಗಾಗಲೇ 36,000 ಕಿಲೋಮೀಟರ್ಗಳಿಗಿಂತ ಹೆಚ್ಚು ಪ್ರಯಾಣಿಸಿದ್ದಾರೆ. 17 ರಾಜ್ಯಗಳಲ್ಲಿ ಸುಮಾರು 1 ಲಕ್ಷದ 30 ಸಾವಿರ ಜನರನ್ನು ಸಂಪರ್ಕಿಸಿದ್ದಾರೆ. 11 ವರ್ಷಗಳಲ್ಲಿ 4-5 ಬಾರಿ ದೇಶ ಸುತ್ತುವ ಯೋಜನೆಯಲ್ಲಿದ್ದಾರೆ. ಈ ಯಾತ್ರೆಯ ಮುಖ್ಯ ಗುರಿಯು 100 ಕೋಟಿಗೂ ಹೆಚ್ಚು ಜನರಿಗೆ ಇಂಧನ ಸಾಕ್ಷರತೆಯನ್ನು ಉತ್ತೇಜಿಸುವುದು. ಮತ್ತು 1 ಕೋಟಿ ಕುಟುಂಬಗಳನ್ನು ಶೇ 100ರಷ್ಟು ಸೌರಶಕ್ತಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದಾಗಿದೆ.
ಪ್ರೊ. ಸೋಲಂಕಿ ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಐಇಇಇ ಯ ಗ್ಲೋಬಲ್ ಗ್ರ್ಯಾಂಡ್ ಪ್ರಶಸ್ತಿ, ಪ್ರಧಾನ ಮಂತ್ರಿಗಳ ನಾವೀನ್ಯತೆ ಪ್ರಶಸ್ತಿ, ಒಎನ್ಜಿಸಿಯಿಂದ ಸೋಲಾರ್ ಚುಲ್ಹಾ ಡಿಸೈನ್ ಚಾಲೆಂಜ್ನಲ್ಲಿ ಮೊದಲ ಬಹುಮಾನ, ಮೂರು ಗಿನ್ನೆಸ್ ವಿಶ್ವ ದಾಖಲೆ, ಎರಡು ಯುವ ವಿಜ್ಞಾನಿ ಪ್ರಶಸ್ತಿಗಳು, ಸಿಎಸ್ಐಆರ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ಅವರಿಗೆ ಸಂದಿವೆ.
ಎನ್ಐಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರೊಫೆಸರ್ ಸೋಲಂಕಿ, ಇಡೀ ಜನತೆಯ ಪಾಲ್ಗೊಳ್ಳುವಿಕೆ ಇಲ್ಲದೆ ಸರಕಾರದ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ ಎಂಬುದು ಕಳೆದ 30 ರಿಂದ 40 ವರ್ಷಗಳಲ್ಲಿ ಸಾಬೀತಾಗಿದೆ. ಶಕ್ತಿಯ ಸ್ವಾತಂತ್ರ್ಯವನ್ನು ಸಾಧಿಸುವ ಮೂಲಕ, ಗ್ಲೋಬ್ ಇಂಗಾಲದ ತಟಸ್ಥ ಮತ್ತು ಇಂಗಾಲ ಮುಕ್ತವಾಗುತ್ತದೆ. ಹವಾಮಾನ ಬದಲಾವಣೆಯು ಅತ್ಯಂತ ತೀವ್ರವಾದ ಸಮಸ್ಯೆಯಾಗಿದೆ ಎಂದು ಅರಿತುಕೊಳ್ಳಿ ಎಂದರು.
ಪ್ರಭಾರ ನಿರ್ದೇಶಕ ಪ್ರೊ.ಎಸ್.ಎಂ.ಕುಲಕರ್ಣಿ, ರಿಜಿಸ್ಟ್ರಾರ್, ಜಂಟಿ ರಿಜಿಸ್ಟ್ರಾರ್, ಡೀನ್ ಅಕಾಡೆಮಿಕ್, ಅಸೋಸಿಯೇಟ್ ಡೀನ್ ಆರ್.ಸಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.