ನಿಟ್ಟೆ ವಿವಿ ಮಾತೃಭಾಷೆಗಳಿಗೆ, ಭಾಷೆಗಳ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ: ಪ್ರೊ. ಸತೀಶ್ ಕುಮಾರ್ ಭಂಡಾರಿ

ಕೊಣಾಜೆ: ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯವು ಈಗಾಗಲೇ ಹಲವಾರು ಭಾಷಾ ಸಂಬಂಧಿ ಯೋಜನೆ ಗಳನ್ನು ನಡೆಸುತ್ತಿದ್ದು ಭಾಷೆಗಳಿಗೆ ಬೆಂಬಲ ನೀಡುತ್ತಿದೆ. ಭಾಷೆ ಮನುಷ್ಯರನ್ನು ಹತ್ತಿರ ತರುತ್ತದೆ ಕುಲಪತಿಗಳಾದ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿಯವರು ಹೇಳಿದರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಮಾತೃಭಾಷಾ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಶ್ರೀ ಟಿ.ಕೆ. ಉಣ್ಣಿಕೃಷ್ಣನ್ ಅವರು ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಭಾಷಾ ಬಾಂಧವ್ಯದ ಕುರಿತು ವಿಸ್ತೃತವಾಗಿ ಮಾತನಾಡಿದರು.
ನಿಟ್ಟೆ ಕಮ್ಯುನಿಕೇಶನ್ ಕಾಲೇಜಿನ ಮುಖ್ಯಸ್ಥರಾದ ಪ್ರೊ. ರವಿರಾಜ್ ಕಿಣಿ, ನಿಟ್ಟೆ ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಸಮಿತಿಯ ನಿರ್ದೇಶಕರಾದ ಪ್ರೊ. ಶ್ರೀನಿಕೇತನ್, ನಿಟ್ಟೆ ವೈಜ್ಞಾನಿಕ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಅನಿರ್ಬನ್ ಚಕ್ರವರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಲವು ಭಾಷೆಗಳ ಪ್ರಸ್ತುತಿಯಿರುವ ಮಿಲೇ ಸುರ್ ಮೇರಾ ತುಮ್ಹಾರಾ ಹಾಡು (ಡಾ. ಶ್ರುತಿ, ಡಾ. ನೇಸರ ಕಾಡನಕುಪ್ಪೆ, ಗಾನಾ ಹಾಗೂ ಭಾರತಿ ಅವರಿಂದ) ಹಾಗೂ ರವೀಂದ್ರನಾಥ ಠಾಗೂರರ ಕವನವನ್ನು (ಡಾ. ಅನಿರ್ಬನ್ಪ್ರ ಚಕ್ರವರ್ತಿ) ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮ ಸಂಯೋಜಕರಾದ ಡಾ. ಸಾಯಿಗೀತಾ ಸ್ವಾಗತಿಸಿದರು. ಶಶಿಕುಮಾರ್ ಶೆಟ್ಟಿ ವಂದಿಸಿದರು. ಸುಮಿತಾ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







