ಉಡುಪಿ: ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಸುಲಿಗೆ

ಉಡುಪಿ, ಫೆ. 22: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರವನ್ನು ಯುವಕರಿಬ್ಬರು ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ಫೆ. 22ರಂದು ಬೆಳಗ್ಗೆ ನಾಯರ್ ಕೆರೆ ವಾಣಿಜ್ಯ ತೆರಿಗೆಗಳ ಭವನದ ಎದುರು ನಡೆದಿದೆ.
ಬ್ರಹ್ಮಗಿರಿ ಸತ್ಯಸಾಯಿ ಮಾರ್ಗದ ನಿವಾಸಿ ಜೆಟ್ಲ ಸತ್ಯನಾರಾಯಣ ಎಂಬವರ ಪತ್ನಿ ವಿಜಯ ಜೆ.ಎಸ್. (61) ಎಂಬವರು ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಹಿಂದಿನಿಂದ ಬೈಕಿನಲ್ಲಿ ಅಂದಾಜು 20 ರಿಂದ 30 ವರ್ಷ ಪ್ರಾಯದ ಇಬ್ಬರು ಯುವಕರು ಬಂದರು.
ಇವರ ಪೈಕಿ ಬೈಕ್ ಹಿಂದೆ ಕುಳಿತಿದ್ದ ವ್ಯಕ್ತಿ ವಿಜಯ ಅವರ ಕುತ್ತಿಗೆಗೆ ಕೈ ಹಾಕಿ ತಳ್ಳಿ, ನೆಲಕ್ಕೆ ಬೀಳಿಸಿ, 50 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಸುಲಿಗೆ ಮಾಡಿಕೊಂಡು ಪರಾರಿಯಾದರು. ಸುಲಿಗೆಯಾದ ಸರದ ಮೌಲ್ಯ 2,50,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story