ಇಬ್ಬರು ಯುವಕರನ್ನು ಸುಟ್ಟು ಕೊಂದ ಪ್ರಕರಣ: ಮೋನು ಮನೇಸರ್ಗೆ ರಾಜಸ್ಥಾನ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆಯೇ?

ಜೈಪುರ್: ಫೆಬ್ರವರಿ 16 ರಂದು, ರಾಜಸ್ಥಾನದ ಭರತ್ಪುರ ಜಿಲ್ಲೆಯ ಘಾಟ್ಮೀಕಾ ನಿವಾಸಿಗಳಾದ ಜುನೈದ್ (35) ಮತ್ತು ನಾಸಿರ್ (25) ಎಂಬ ಇಬ್ಬರು ವ್ಯಕ್ತಿಗಳ ದೇಹವು ಸುಟ್ಟ ಸ್ಥಿತಿಯಲ್ಲಿ ಹರಿಯಾಣದ ಭಿವಾನಿಯಲ್ಲಿ ಪತ್ತೆಯಾಗಿದ್ದು, ಬಜರಂಗದಳದ ಸದಸ್ಯರು ಇವರಿಗೆ ಹಲ್ಲೆ ನಡೆಸಿ ಅಪಹರಿಸಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು. ಬಜರಂಗದಳದ ಜಿಲ್ಲಾ ಸಂಯೋಜಕ ಮೋನು ಮನೇಸರ್ ಎಂಬಾತನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು.
ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ರಾಜಸ್ಥಾನ ಪೊಲೀಸರು ಎಫ್ಐಆರ್ನಲ್ಲಿ ಹಲವು ವ್ಯಕ್ತಿಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಇಲ್ಲಿಯವರೆಗೆ ರಿಂಕು ಸೈನಿ ಎಂಬಾತನನ್ನು ಮಾತ್ರ ಬಂಧಿಸಲಾಗಿದೆ. ಇನ್ನೂ ಎಂಟು ಮಂದಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ನಡುವೆ, ಫೆ.23ರಂದು ರಾಜಸ್ಥಾನ ಪೊಲೀಸರು ಪ್ರಕರಣದ ಆರೋಪಿ ಮೋನು ಮಾನೇಸರ್ ಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ನ್ಯೂಸ್ 24 ಹಿಂದಿಯು ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ರಾಜಸ್ಥಾನ ಪೊಲೀಸರ ವಾಂಟೆಡ್ ಪಟ್ಟಿಯಿಂದ ಮೋನು ಮಾನೇಸರ್ ಮತ್ತು ಲೋಕೇಶ್ ಸಿಂಗ್ಲಾ ಅವರ ಹೆಸರನ್ನು ತೆಗೆದುಹಾಕಲಾಗಿದೆ, ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ" ಎಂದು ಹೇಳಿತ್ತು.
ಬಲಪಂಥೀಯ ಧೋರಣೆಯ OpIndia.com ಕೂಡಾ News24 ನ ಟ್ವೀಟ್ ಅನ್ನು ಆಧರಿಸಿ ಸುದ್ದಿ ಮಾಡಿತ್ತು. “ಭಿವಾನಿ ಘಟನೆಯಲ್ಲಿ ಮೋನು ಮಾನೇಸರ್ಗೆ ರಾಜಸ್ಥಾನ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ! ವಾಂಟೆಡ್ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲಾಗಿದೆ" ಎಂಬ ತಲೆಬರಹದಲ್ಲಿ ನವಭಾರತ್ ಟೈಮ್ಸ್ ಕೂಡ ಇದೇ ಮಾಹಿತಿಯನ್ನು ಹಂಚಿತ್ತು.
ಈ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿರುವ altnews.com ಈ ಮಾಹಿತಿ ತಪ್ಪೆಂದು ಹೇಳಿದೆ.
ಈ ಬಗ್ಗೆ ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಯನ್ನು altnews ಸಂಪರ್ಕಿಸಿದ್ದು, ಈ ಪ್ರಕರಣದಲ್ಲಿ ಯಾರಿಗೂ ಕ್ಲೀನ್ ಚಿಟ್ ನೀಡಲಾಗಿಲ್ಲ ಎಂದು ಅಧಿಕಾರಿ ತಿಳಿಸಿರುವುದಾಗಿ ಆಲ್ಟ್ ನ್ಯೂಸ್ ವರದಿಮಾಡಿದೆ.
“ನಾವು 8 ಹೆಸರುಗಳನ್ನು ಬಿಡುಗಡೆ ಮಾಡಿದ್ದೇವೆ, ಅದಕ್ಕೆ ನಮ್ಮಲ್ಲಿ ಸ್ಪಷ್ಟವಾದ ಪುರಾವೆಗಳಿವೆ, ಇನ್ನೂ ಅನೇಕರು ಭಾಗಿಯಾಗಿರಬಹುದು. ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ" ಎಂದು ಅಧಿಕಾರಿ ಹೇಳಿರುವುದಾಗಿ ವರದಿ ಹೇಳಿದೆ.
ಅಲ್ಲದೆ, "ರಿಂಕು ಸೈನಿ ಅವರ ವಿಚಾರಣೆಯ ಮೂಲಕ ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ಸ್ಪಷ್ಟ ಪುರಾವೆಗಳನ್ನು ಹೊಂದಿರುವ ಎಂಟು ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ. ಹರಿಯಾಣ ಪೊಲೀಸರೊಂದಿಗೆ ಶೋಧ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ" ಎಂದು ಭರತ್ಪುರ ಪೊಲೀಸರು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಎಫ್ಐಆರ್ನಲ್ಲಿ ಉಲ್ಲೇಖಿಸಲಾದ ಮೋನು ಮನೇಸರ್, ಲೋಕೇಶ್ ಸಿಂಗ್ಲಾ ಮತ್ತು ಇತರ ಎಲ್ಲ ಆರೋಪಿಗಳಿಗೆ ಸಂಬಂಧಿಸಿದಂತೆ ಪೊಲೀಸರು ತೀವ್ರವಾದ ತನಿಖೆ ನಡೆಸುತ್ತಿದ್ದಾರೆ ಎಂದು ರಾಜಸ್ಥಾನ ಪೊಲೀಸ್ ಮೂಲಗಳು ಹೇಳಿವೆ.
ಹಾಗಾಗಿ, ನಾಸಿರ್ ಮತ್ತು ಜುನೈದ್ ಹತ್ಯೆಯಲ್ಲಿ ಮೋನು ಮನೇಸರ್ ಮತ್ತು ಲೋಕೇಶ್ ಸಿಂಗ್ಲಾ ಅವರ ಪಾತ್ರದ ಬಗ್ಗೆ ಇನ್ನೂ ತನಿಖೆ ಮಾಡಲಾಗುತ್ತಿದ್ದು, ಅವರಿಗೆ ಯಾವುದೇ ಕ್ಲೀನ್ ಚಿಟ್ ನೀಡಲಾಗಿಲ್ಲ ಎಂದು ಸ್ಪಷ್ಟವಾಗಿದೆ ಎಂದು altnews.com ವರದಿ ಮಾಡಿದೆ.
#Bharatpur
— Bharatpur Police (@BharatpurPolice) February 23, 2023
#गोपालगढ़ अपहरण व हत्या के प्रकरण मे गिरफ्तार रिंकु सैनी की पूछताछ एवं अब तक के अनुसंधान से प्रमाणित पाए गए 8 आरोपी
हरियाणा पुलिस के साथ तलाश अभियान जारी
FIRमें नामजद मोनू मानेसर व लोकेश सिंगला एवं अनुसंधान से सामने आए कुछ अन्य के संबंध में गहनता से अनुसंधान जारी pic.twitter.com/n2HcRJyidZ







