ರೋಹಿತ್ ಚಕ್ರತೀರ್ಥ ವೇಣೂರಿಗೆ ಬಂದರೆ ದಲಿತ ಸಂಘಟನೆಯಿಂದ 'ಗೋ ಬ್ಯಾಕ್' ಹೋರಾಟ: ದಸಂಸ ಎಚ್ಚರಿಕೆ

ಬೆಳ್ತಂಗಡಿ, ಫೆ.24: ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಹಿತ ದಾರ್ಶನಿಕರಿಗೆ ಅವಮಾನ ಮಾಡಿದ ವಿವಾದಿತ ವ್ಯಕ್ತಿ ರೋಹಿತ್ ಚಕ್ರತೀರ್ಥರನ್ನು ವೇಣೂರಿನ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಖಂಡನೀಯ. ಒಂದು ವೇಳೆ ನಮ್ಮ ವಿರೋಧವನ್ನು ಲೆಕ್ಕಿಸದೆ ಅವರು ಆಗಮಿಸಿದರೆ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ವತಿಯಿಂದ ಕಪ್ಪುಪಟ್ಟಿ ಪ್ರದರ್ಶಿಸಿ 'ಗೋ ಬ್ಯಾಕ್' ಅಭಿಯಾನ ಕೈಗೊಳ್ಳಲಾಗುವುದು ಎಂದು ದಸಂಸ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು ಮತ್ತು ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್. ಎಚ್ಚರಿಸಿದ್ದಾರೆ.
ಬೆಳ್ತಂಗಡಿ ಪತ್ರಕರ್ತರ ಸಂಘದ ಸಭಾಂಗಣದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದುಹಾಕಿದ ಪುಸ್ತಕ ಪರಿಷ್ಕರಣೆ ಸಮಿತಿಯ ಮುಖ್ಯಸ್ಥ ರೋಹಿತ್ ಚಕ್ರತೀರ್ಥರನ್ನು 'ಶಿಕ್ಷಣ ಮತ್ತು ಧರ್ಮ' ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ಬ್ರಹ್ಮಕಲಶೋತ್ಸವ ಸಮಿತಿಯವರು ಕರೆದಿರುವುದು ಸರಿಯಲ್ಲ. ಇದಕ್ಕೆ ನಮ್ಮ ಸಂಘಟನೆಯ ವಿರೋಧವಿದೆ ಎಂದವರು ಹೇಳಿದರು.
ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರ ಕವಿ ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಞಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ತರುವ ರೀತಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯಮಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡು, ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ಬ್ರಹ್ಮಕಲಶೋತ್ಸವ ಸಮಿತಿಯವರಲ್ಲಿ ಒಕ್ಕೊರಲ ಮನವಿ ಮಾಡುತ್ತಿದ್ದೇವೆ ಎಂದರು.
ಈ ಮನವಿಯ ಬಳಿಕವೂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಮುಂದಾದರೆ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ಸಂಘ ಪರಿವಾರದ ನಿಜಬಣ್ಣವನ್ನು ಬಯಲು ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಸಂಸ ಹೋಬಳಿ ಸಂಚಾಲಕ ವಿಜಯಕುಮಾರ್ ಉಜಿರೆ, ಸಂಘಟನಾ ಸಂಚಾಲಕರುಗಳಾದ ಜಯಾನಂದ ಕೊಯ್ಯೂರು ಮತ್ತು ನಾಗರಾಜ್ ಎಸ್. ಲಾಯಿಲ, ಕಾರ್ಯಕರ್ತ ಎಸ್. ಪ್ರಭಾಕರ್ ಶಾಂತಿಕೋಡಿ ಉಪಸ್ಥಿತರಿದ್ದರು.