ತೀವ್ರವಾದಿ ಧಾರ್ಮಿಕ ಪ್ರಚಾರಕ ಲವ್ಪ್ರೀತ್ ಸಿಂಗ್ ಕಾರಾಗೃಹದಿಂದ ಬಿಡುಗಡೆ

ಅಮೃತ್ಸರ, ಫೆ. 24: ತೀವ್ರವಾದಿ ಧಾರ್ಮಿಕ ಪ್ರಚಾರಕ ಅಮೃತ್ಪಾಲ್ ಸಿಂಗ್ ಸಹಾಯಕ ಹಾಗೂ ಅಪಹರಣ ಪ್ರಕರಣದ ಆರೋಪಿ ಲವ್ಪ್ರೀತ್ ಸಿಂಗ್ ಇಲ್ಲಿನ ಕಾರಾಗೃಹದಿಂದ ಶುಕ್ರವಾರ ಬಿಡುಗಡೆಯಾಗಿದ್ದಾನೆ.
ಪೊಲೀಸರು ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಅಂಜಲಾದಲ್ಲಿರುವ ನ್ಯಾಯಾಲಯ ಈ ಬಿಡುಗಡೆ ಆದೇಶ ನೀಡಿದೆ. ಲವ್ಪ್ರೀತ್ ಸಿಂಗ್ನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ತೀವ್ರವಾದಿ ಧಾರ್ಮಿಕ ಪ್ರಚಾರಕ ಹಾಗೂ ಖಲಿಸ್ತಾನಿ ಬಗ್ಗೆ ಅನುಕಂಪೆ ಹೊಂದಿರುವ ಅಮೃತಪಾಲ್ ಸಿಂಗ್ ಬೆಂಬಲಿಗರು ಅಂಜಲಾ ಪೊಲೀಸ್ ಠಾಣೆಗೆ ನುಗ್ಗಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಅಂಜಲಾ ಪಟ್ಟಣ ಹಾಗೂ ಪೊಲೀಸ್ ಠಾಣೆ ಸುತ್ತಮುತ್ತ ಶುಕ್ರವಾರ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಗುರುವಾರ ಖಡ್ಗ ಹಾಗೂ ಬಂದೂಕುಗಳನ್ನು ಝಳಪಿಸುತ್ತಿರುವವರು ಸೇರಿದಂತೆ ಅಮೃತ್ಪಾಲ್ ಸಿಂಗ್ ಬೆಂಬಲಿಗರು ಬ್ಯಾರಿಕೇಡ್ಗಳನ್ನು ಮುರಿದು ಪೊಲೀಸ್ ಠಾಣೆಯ ಸಂಕೀರ್ಣದ ಒಳಗೆ ಪ್ರವೇಶಿಸಿದ್ದರು. ಅಪಹರಣ ಪ್ರಕರಣದ ಆರೋಪಿಯಾಗಿರುವ ಲವ್ಪ್ರೀತ್ ಸಿಂಗ್ ಆಲಿಯಾಸ್ ತೂಫಾನ್ನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಮೃತಸರದ ಹೊರವಲಯದಲ್ಲಿರುವ ಪೊಲೀಸ್ ಠಾಣೆಗೆ ಬೆಂಬಲಿಗರು ಪ್ರವೇಶಿಸಿದ್ದರು.







