ರೋಹಿಣಿ, ರೂಪಾ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ ಮುಖ್ಯ ಕಾರ್ಯದರ್ಶಿ

ಬೆಂಗಳೂರು, ಫೆ.24: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಡಿ.ರೂಪಾ ನಡುವಿನ ಆರೋಪ-ಪ್ರತ್ಯಾರೋಪ ಪ್ರಕರಣವನ್ನು ಇಲಾಖಾ ತನಿಖೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ರೋಹಿಣಿ ವಿರುದ್ಧ ಐಪಿಎಸ್ ಡಿ.ರೂಪಾ ಬಹಿರಂಗ ಹೇಳಿಕೆ, ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಸಿಂಧೂರಿ ಫೋಟೋ ಪ್ರಕಟನೆ, ಸರಕಾರಕ್ಕೆ ಮುಜುಗರ ಉಂಟು ಮಾಡಿರುವುದು, ರೋಹಿಣಿ ಸಿಂಧೂರಿ ವಿರುದ್ಧ ಈಜುಕೊಳ ನಿರ್ಮಾಣ ಆರೋಪ, ರೋಹಿಣಿಯಿಂದ ಪಾರಂಪರಿಕ ಕಟ್ಟಡ ನಿಯಮಾವಳಿ ಉಲ್ಲಂಘನೆ ಹಾಗೂ ಬ್ಯಾಗ್ ಖರೀದಿ ಪ್ರಕರಣ, ಸಿವಿಲ್ ಸೇವಾ ನಿಯಮಾವಳಿ ಉಲ್ಲಂಘನೆ ಮಾಡಿರುವ ಬಗ್ಗೆಯೂ ಇಬ್ಬರು ವಿರುದ್ದ ಇಲಾಖೆ ತನಿಖಾ ವ್ಯಾಪ್ತಿಗೆ ವಹಿಸಿ ಆದೇಶಿಸಿದ್ದಾರೆ.
ಇಬ್ಬರು ಅಧಿಕಾರಿಗಳ ವರ್ಗಾವಣೆ
ಇತ್ತೀಚೆಗೆ ರಾಜ್ಯ ಸರಕಾರ ಯಾವುದೇ ಸ್ಥಳ ನೀಡದೇ ರೋಹಿಣಿ ಸಿಂಧೂರಿ ಹಾಗೂ ಡಿ ರೂಪಾ ಅವರನ್ನು ವರ್ಗಾವಣೆ ಮಾಡಿತ್ತು. ಇದೀಗ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇಬ್ಬರ ವಿರುದ್ಧ ಇಲಾಲಾ ತನಿಖೆಗೆ ಆದೇಶಿಸಿದ್ದಾರೆ.





