ಮಾಸ್ಕ್ ನೆಪದಲ್ಲಿ ಡಾ.ಕಕ್ಕಿಲ್ಲಾಯರ ವಿರುದ್ಧ ಅಪಪ್ರಚಾರ, ಅವಹೇಳನ: ವಿಚಾರಣೆಗೆ ಹಾಜರಾಗಲು ಮೂವರಿಗೆ ನ್ಯಾಯಾಲಯ ಆದೇಶ
ಸುಳ್ಳಾರೋಪದೊಂದಿಗೆ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಆರೋಪ

ಮಂಗಳೂರು, ಫೆ.25: ಮಾಸ್ಕ್ ವಿಚಾರವಾಗಿ ನಗರದ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯರಿಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಹಾಗೂ ಅವರ ತಂದೆ, ಸ್ವಾತಂತ್ರ್ಯ ಹೋರಾಟಗಾರ ಬಿ.ವಿ.ಕಕ್ಕಿಲ್ಲಾಯ ಮತ್ತು ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಧ್ವನಿ ಮುದ್ರಿಕೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಮಂಗಳೂರಿನ ಜೆಎಂಎಫ್ ಸಿ 6ನೇ ನ್ಯಾಯಾಲಯ ಆದೇಶಿಸಿದೆ.
ಮಂಗಳೂರಿನ ಜಿಮ್ಮೀಸ್ ಸೂಪರ್ ಮಾರ್ಕೆಟ್ ನ ಮಾಲಕ ರಯಾನ್ ರೊಸಾರಿಯೋ ಮತ್ತು ಡೊನಾಲ್ಡ್ ರೊಸಾರಿಯೋ ಹಾಗೂ ಇವರಿಬ್ಬರಿಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಗುರುದೇವ ಪೈ ಎಂಬವರ ವಿರುದ್ಧ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರಿನ ಜೆಎಂಎಫ್ಸಿ 6ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯನ್ನು ಮಾನ್ಯ ಮಾಡಿರುವ ನ್ಯಾಯಾಲಯವು ಫೆಬ್ರವರಿ 23ರಂದು ಈ ಮೂವರನ್ನೂ ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.
ಮೇ 19, 2021ರಂದು ಮಂಗಳೂರಿನ ಜಿಮ್ಮೀಸ್ ಸೂಪರ್ ಮಾರ್ಕೆಟ್ ಎಂಬ ಅಂಗಡಿಯಲ್ಲಿ ಮಾಸ್ಕ್ ವಿಚಾರವಾಗಿ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಅಂಗಡಿ ಮಾಲಕರ ನಡುವೆ ವಾಗ್ವಾದ ನಡೆದಿತ್ತು. ಇದರ ಸಿಸಿಟಿವಿ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೆ, ಈ ಬಗ್ಗೆ ಡಾ.ಕಕ್ಕಿಲ್ಲಾಯರ ವಿರುದ್ಧ ಪೊಲೀಸರು ಅಪರಾಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಈ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಡಾ.ಕಕ್ಕಿಲ್ಲಾಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ 2021ರ ಆಗಸ್ಟ್ 31ರಂದು ಆರೋಪ ಪಟ್ಟಿಯ ವಿಚಾರಣೆಯನ್ನು ತಡೆಹಿಡಿಯುವಂತೆ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿತ್ತು.
ಬಳಿಕ ಅಂದಿನ ಘಟನೆಯ ಮೂಲ ವೀಡಿಯೋವನ್ನು ತಿರುಚಿ ಸುಳ್ಳುಗಳನ್ನು ಸೇರಿಸಿ ತೀರಾ ಅವಹೇಳನಕಾರಿಯಾಗಿ ಪ್ರಸಾರ ಮಾಡಿದ್ದಲ್ಲದೆ, ಯಾವುದೇ ಮಾಹಿತಿಯಿಲ್ಲದೆ, ಸತ್ಯಾಸತ್ಯತೆ ಪರಿಶೀಲಿಸದೆ ತನ್ನ ತೇಜೋವಧೆ ಮಾಡಲು ಮತ್ತು ತನ್ನ ಬಗ್ಗೆ ಜನರಲ್ಲಿ ಅಪನಂಬಿಕೆ ಹುಟ್ಟಿಸುವುದಕ್ಕೆ ವಿಡಿಯೋ ಹಾಗೂ ಪತ್ರಿಕಾ ಹೇಳಿಕೆಗಳನ್ನು ಹಂಚಿದ್ದಾಗಿ ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ ನ ಪದಾಧಿಕಾರಿಗಳ ಮೇಲೆ ಹಾಗೂ 'ಕಹಳೆ ನ್ಯೂಸ್' ಚಾನೆಲ್ ಮೇಲೆ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಿದ್ದರು.
ಈ ದೂರನ್ನು ಮಾನ್ಯ ಮಾಡಿದ ನ್ಯಾಯಾಲಯವು ಪುತ್ತೂರಿನ ವೈದ್ಯ ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಕಹಳೆ ನ್ಯೂಸ್ನ ಶ್ಯಾಮ್ ಸುದರ್ಶನ್ ಹೊಸಮೂಲೆ, ಮಂಗಳೂರಿನ ವೈದ್ಯರಾದ ರಾಮಚಂದ್ರ ಕಾಮತ್, ಪ್ರಶಾಂತ್ ಭಟ್, ಅನಿಮೇಶ್ ಜೈನ್, ಎಂ.ಎ.ಆರ್.ಕುಡ್ವ ಹಾಗೂ ಕುಮಾರಸ್ವಾಮಿ ಎಂಬ ಏಳು ಮಂದಿಯನ್ನು ಎಪ್ರಿಲ್ 8, 2022ರಂದು ಅಪರಾಧಿಗಳೆಂದು ಹೆಸರಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಈ ಪೈಕಿ ಎಂಎಆರ್ ಕುಡ್ವ ಮೃತಪಟ್ಟಿದ್ದರೆ, ಉಳಿದ ಆರು ಮಂದಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
"ಮೇ 19, 2021ರಂದು ಮಂಗಳೂರಿನ ಜಿಮ್ಮೀಸ್ ಸೂಪರ್ ಮಾರ್ಕೆಟ್ ಎಂಬ ಅಂಗಡಿಯ ಮಾಲಕರು ವಿಡಿಯೋವನ್ನು ದುರ್ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಕ್ರಮವಾಗಿ ಬಿಡುಗಡೆ ಮಾಡಿದ್ದು ಹಾಗೂ ಹತಾಶೆಯಲ್ಲಿ ನರಳುತ್ತಿರುವ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅದನ್ನು ತಿರುಚಿ, ರಾಷ್ಟ್ರೀಯ-ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ನನ್ನ ತೇಜೋವಧೆಗೆ ದುರುಪಯೋಗಿಸಿಕೊಂಡದ್ದು ದೊಡ್ಡ ಸುದ್ದಿಯಾಗಿದ್ದವು. ರಾಜ್ಯ ಸರಕಾರ ಮತ್ತು ಪೊಲೀಸ್ ವ್ಯವಸ್ಥೆಯು ಕೂಡ ವಿವೇಚನೆಯಿಲ್ಲದೆ ನನ್ನ ಮೇಲೆ ಅಪರಾಧ ಪ್ರಕರಣವನ್ನು ದಾಖಲಿಸಿತ್ತು. ಇವೆಲ್ಲವುಗಳ ವಿರುದ್ಧ ನ್ಯಾಯಕ್ಕಾಗಿ ನಡೆಸಿದ ಹೋರಾಟದಲ್ಲಿ ನನಗೆ ಮೊದಲ ಹಂತದ ಯಶಸ್ಸು ದೊರಕಿದೆ" ಎಂದು ಡಾ. ಕಕ್ಕಿಲ್ಲಾಯ ಹೇಳಿದ್ದಾರೆ.
"ನ್ಯಾಯಕ್ಕಾಗಿ ನನ್ನ ಹೋರಾಟದಲ್ಲಿ ಸಲಹೆಗಳನ್ನು ನೀಡಿ ನನ್ನ ಪರವಾಗಿ ವಾದಿಸಿರುವ ಮಂಗಳೂರಿನ ನ್ಯಾಯವಾದಿಗಳಾದ ಚಿದಾನಂದ ಕೆದಿಲಾಯ, ಶಿವಪ್ರಸಾದ್ ಅಜೆಕಲ್ ಮತ್ತು ಉಚ್ಚ ನ್ಯಾಯಾಲಯದ ನ್ಯಾಯವಾದಿ ಸಚಿನ್ ಬಿ.ಎಸ್. ಅವರಿಗೆ ನಾನು ಚಿರಋಣಿ. ಸರಕಾರದ ಅವೈಜ್ಞಾನಿಕವಾದ, ತಪ್ಪಾದ, ಜನವಿರೋಧಿಯಾದ ನಿರ್ಧಾರಗಳನ್ನು ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ಪ್ರಶ್ನಿಸಿದ್ದಕ್ಕೆ ಅಥವಾ ವಿರೋಧಿಸಿದ್ದಕ್ಕೆ ನನ್ನ ಮೇಲೆ ರಾಜಕೀಯ ಪ್ರೇರಿತ ಪಿತೂರಿಯಿಂದ, ವೈದ್ಯಕೀಯ ಸಂಘಟನೆಗಳ ದರ್ಪ ಹಾಗೂ ಸ್ವೇಚ್ಛಾಚಾರದಿಂದ ನಡೆಸಲಾದ ವಿಕೃತವಾದ ತೇಜೋವಧೆ ಹಾಗೂ ಸುಳ್ಳು ಪ್ರಕರಣಗಳನ್ನು ಎದುರಿಸಿ ನ್ಯಾಯವು ದೊರೆಯುವವರೆಗೆ ಈ ಎಲ್ಲಾ ಹೋರಾಟಗಳನ್ನು ಮುಂದುವರಿಸುತ್ತೇನೆ" ಎಂದು ಡಾ.ಕಕ್ಕಿಲ್ಲಾಯ ಹೇಳಿದ್ದಾರೆ.
"ಈ ಹೊಸ ಕೊರೋನ ಸೋಂಕು ಮತ್ತು ಅದರ ನಿಭಾವಣೆಯ ಬಗ್ಗೆ ನಾನು ಎತ್ತಿದ್ದ ಪ್ರಶ್ನೆಗಳು, ಆತಂಕಗಳು ಹಾಗೂ ನೀಡಿದ್ದ ಸಲಹೆಗಳೆಲ್ಲವೂ ವೈಜ್ಞಾನಿಕವಾಗಿದ್ದವು, ಸರಿಯೇ ಆಗಿದ್ದವು ಎನ್ನುವುದನ್ನು ಈ 3 ವರ್ಷಗಳಲ್ಲಿ ನಡೆಸಲಾಗಿರುವ ಅಧ್ಯಯನಗಳು ಅತ್ಯಂತ ಸ್ಪಷ್ಟವಾಗಿ ದೃಢಪಡಿಸಿವೆ. ಕೊರೋನ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡುವುದರಿಂದ ಸೋಂಕಿನ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ, ಬದಲಿಗೆ ಎಲ್ಲಾ ವಲಯಗಳಿಗೂ ಅತ್ಯಂತ ಹಾನಿಯಾಗಬಹುದು ಎಂದು ಮಾರ್ಚ್ ಆರಂಭದಲ್ಲೇ ಹೇಳಿದ್ದು [https://sites.krieger.jhu.edu/iae/files/2022/01/A-Literature-Review-and-Meta-Analysis-of-the-Effects-of-Lockdowns-on-COVID-19-Mortality.pdf]; ಶಾಲೆ-ಕಾಲೇಜುಗಳನ್ನು ಮುಚ್ಚುವ ಅಗತ್ಯವೇ ಇಲ್ಲ, ಅದರಿಂದ ಕಲಿಕೆಗೆ ತೀವ್ರ ಹಿನ್ನಡೆಯಾಗುವುದಷ್ಟೇ ಅಲ್ಲ, ಮಕ್ಕಳ ಭವಿಷ್ಯಕ್ಕೇ ಮಾರಕವಾಗಬಹುದು ಎಂದು ಜೂನ್ 2020ರಿಂದ ಹೇಳುತ್ತಲೇ ಬಂದದ್ದು [https://www.nature.com/articles/s41562-022-01506-4]; ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡುವುದರಿಂದ ಹೆಚ್ಚಿನ ಉಪಯೋಗವೇನೂ ಇಲ್ಲ ಎಂದು ಆರಂಭದಿಂದಲೇ ಹೇಳುತ್ತಾ ಬಂದದ್ದು, [https://www.cochranelibrary.com/cdsr/doi/10.1002/14651858.CD006207.pub6/full]; ಕೊರೋನ ಚಿಕಿತ್ಸೆಯಲ್ಲಿ ಸೂಕ್ಷ್ಮಾಣು ನಿರೋಧಕ ಔಷಧಗಳು ನಿರುಪಯುಕ್ತವಾಗಿವೆ ಎಂದು ಮೊದಲಿನಿಂದಲೂ ಹೇಳುತ್ತಲೇ ಇದ್ದದ್ದು; ಸರಿಯಾದ ಪರೀಕ್ಷೆಗಳನ್ನೇ ನಡೆಸದೆ, ಸಾಧಕ-ಬಾಧಕಗಳ ವಿವರಗಳೇ ಇಲ್ಲದೆ ಹೊಸ ಕೊರೋನ ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಿದ್ದನ್ನು ಜನವರಿ 2021ರಲ್ಲೇ ಪ್ರಶ್ನಿಸಿದ್ದು, ಆಗಲೇ ಸೋಂಕಿತರಾಗಿದ್ದ ಶೇ.70ಕ್ಕೂ ಹೆಚ್ಚು ಭಾರತೀಯರಿಗೆ ಲಸಿಕೆಗಳ ಅಗತ್ಯವೇ ಇಲ್ಲ ಎಂದು ಆಗಲೇ ಸ್ಪಷ್ಟವಾಗಿ ಹೇಳಿದ್ದು, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಕಡ್ಡಾಯ ಮಾಡಿದ್ದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು [https://www.thelancet.com/journals/lancet/article/PIIS0140-6736(22)02465-5/fulltext] ಎಲ್ಲವೂ ಅತ್ಯಂತ ಸೂಕ್ತವೂ, ವೈಜ್ಞಾನಿಕವೂ ಆಗಿದ್ದವು ಎನ್ನುವುದನ್ನು ನಂತರದಲ್ಲಿ ಪ್ರಕಟವಾದ ಹಲವು ವರದಿಗಳು ಮತ್ತು ಆದೇಶಗಳು ದೃಢಪಡಿಸಿವೆ. ವೈಜ್ಞಾನಿಕ ಚಿಂತನೆ ಮತ್ತು ಸತ್ಯಗಳು ಚಿರಂತನ, ಅವನ್ನು ಅದುಮುವುದಕ್ಕೆ ಸಾಧ್ಯವಿಲ್ಲ. ಕೊರೋನ ಕಾಲದಲ್ಲಿ ವಿಜ್ಞಾನದ ಪರವಾಗಿ, ಸತ್ಯದ ಪರವಾಗಿ, ಜನರ ಪರವಾಗಿ ದನಿಯೆತ್ತುತ್ತಲೇ ಇದ್ದ ಬಗ್ಗೆ ನನಗೆ ಹೆಮ್ಮೆ ಇದೆ, ತೃಪ್ತಿ ಇದೆ, ಅದರಿಂದ ಸ್ಫೂರ್ತಿಯೂ ದೊರೆತಿದೆ" ಎಂದು ಡಾ. ಕಕ್ಕಿಲ್ಲಾಯ ಹೇಳಿದ್ದಾರೆ.