ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಮನವಿ

ಮಂಗಳೂರು, ಫೆ.25: ಮೀನುಗಾರಿಕೆ ಕೆಲಸಕ್ಕೆಂದು ನಗರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿದ್ದು, ಅವರ ಪತ್ತೆಗೆ ಸಹಕರಿಸುವಂತೆ ಪಾಂಡೇಶ್ವರ ಪೊಲೀಸರು ಮನವಿ ಮಾಡಿದ್ದಾರೆ.
ನಗರದ ಫಲ್ಗುಣಿ ಎಂಬ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡುವ ಪ್ರಕಾಶ್ ರಾಮ್ ಹರಿಕಾಂತ್ ಎಂಬವರು ತನ್ನೂರಿನ ಪರಿಚಯದ ಬಾಬು ರಾಮ್ ಹರಿಕಾಂತ್ (38)ಎಂಬವರನ್ನು ಬಂದರ್ ದಕ್ಕೆಯಲ್ಲಿ ಕೆಲಸ ಮಾಡಲು ಕರೆದುಕೊಂಡು ಬಂದಿದ್ದು, ಈ ವ್ಯಕ್ತಿಯು ಫೆ.10ರಿಂದ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಾಬು ರಾಮ್ ಹರಿಕಾಂತ್ ಅಂದು ಸಂಜೆ 5:30ಕ್ಕೆ ತನ್ನ ಗೆಳೆಯ ಸಂತೋಷ್ ಜೊತೆ ಚಲನಚಿತ್ರ ನೋಡಿಕೊಂಡು ರಾತ್ರಿ 10:30 ವಾಪಸ್ ಬಂದಿದ್ದು, ಬಳಿಕ ತಂಬಾಕು ತರುತ್ತೇನೆ ಎಂದೇಳಿ ಸಂತೋಷ್ನ್ ಮೊಬೈಲ್ ತೆಗೆದುಕೊಂಡು ಹೋದವ ಮರಳಿ ಬಂದಿಲ್ಲ ಎನ್ನಲಾಗಿದೆ. ಈ ಮೊಬೈಲ್ ಸ್ವಿಚ್ ಆಫ್ ಆಗಿದೆ.
5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಪೂರ ಶರೀರದ ಬಾಬು ರಾಮ್ ಹರಿಕಾಂತ್ ಅಂದು ಹೊರಗೆ ಹೋಗುವಾಗ ಗುಲಾಬಿ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಬರ್ಮುಡ ಧರಿಸಿದ್ದಾರೆ. ಇವರನ್ನು ಕಂಡವರು ಬಂದರು (0824-2220800/2220516/9480805339/9480805346)ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.