ಉಕ್ರೇನ್ ಸಂಘರ್ಷ ಬಗೆಹರಿಸಲು ಯಾವುದೇ ಶಾಂತಿ ಪ್ರಕ್ರಿಯೆಗೆ ಸೇರಲು ಸಿದ್ಧ: ಪ್ರಧಾನಿ ಮೋದಿ

ಹೊಸದಿಲ್ಲಿ, ಫೆ.25: ಉಕ್ರೇನ್ ಸಂಘರ್ಷವನ್ನು ಬಗೆಹರಿಸಲು ಯಾವುದೇ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತವು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ಹೇಳಿದರು.
ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರನ್ನು ಸ್ವಾಗತಿಸಿದ ಬಳಿಕ ಮಾತನಾಡಿದ ಮೋದಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಗೆ ಮತ್ತು ಗಡಿಯಾಚೆಯ ಭಯೋತ್ಪಾದನೆಯ ಅಂತ್ಯಕ್ಕೆ ಆಗ್ರಹಿಸಿದರು. ಉಕ್ರೇನ್ ಅನ್ನು ತನ್ನ ಭಾಷಣದ ಕೇಂದ್ರಬಿಂದುವನ್ನಾಗಿಸಿದ್ದ ಸ್ಕೋಲ್ಜ್,ರಶ್ಯಾ-ಉಕ್ರೇನ್ ಬಿಕ್ಕಟ್ಟಿನ ಪರಿಣಾಮದಿಂದ ಜಗತ್ತು ನರಳುತ್ತಿದೆ ಎಂದು ಹೇಳಿದರು. ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳು ತ್ವರಿತವಾಗಿ ಪೂರ್ಣಗೊಳ್ಳುವಂತೆ ಮಾಡಲು ತಾನು ಬದ್ಧನಾಗಿದ್ದೇನೆ ಎಂದು ಅವರು ಘೋಷಿಸಿದರು.
ಜಗತ್ತು ಎದುರಿಸುತ್ತಿರುವ ಬೃಹತ್ ಸಮಸ್ಯೆಗಳ ಕುರಿತು ಭಾರತದ ದೃಷ್ಟಿಕೋನವನ್ನು ಮಂಡಿಸಿದ ಮೋದಿ,‘ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್ ಬಿಕ್ಕಟ್ಟು ಇಡೀ ಜಗತ್ತಿನ ಮೇಲೆ ಪರಿಣಾಮವನ್ನು ಬೀರಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ವಿಶೇಷವಾಗಿ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತಿವೆ. ಜಂಟಿ ಪ್ರಯತ್ನಗಳ ಮೂಲಕ ಈ ಸಮಸ್ಯೆಗಳನ್ನು ಬಗೆಹರಿಸಬಹುದು ಎನ್ನುವುದನ್ನು ನಾವಿಬ್ಬರೂ ಒಪ್ಪಿಕೊಂಡಿದ್ದೇವೆ ಮತ್ತು ಜಿ20 ಗುಂಪಿನಲ್ಲಿ ನಾವು ಈ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತೇವೆ. ಉಕ್ರೇನ್ ಬಿಕ್ಕಟ್ಟಿನ ಆರಂಭದಿಂದಲೂ ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯ ಅಗತ್ಯದ ಬಗ್ಗೆ ಪ್ರತಿಪಾದಿಸುತ್ತಲೇ ಬಂದಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಯಾವುದೇ ಶಾಂತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತವು ಸಿದ್ಧವಿದೆ ’ ಎಂದು ಹೇಳಿದರು.
ಬಹುಪಕ್ಷೀಯ ವೇದಿಕೆಗಳಲ್ಲಿ ಸುಧಾರಣೆಗೆ ಒತ್ತಾಯಿಸಿದ ಅವರು,‘ಇಂತಹ ವೇದಿಕೆಗಳು ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸುವಂತೆ ಮಾಡಲು ಇಂತಹ ಕ್ರಮಗಳು ಅಗತ್ಯವಾಗಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಯನ್ನು ತರಲು ನಾವು ಜಿ4ರಡಿ ಕೈಗೊಂಡ ಜಂಟಿ ಉಪಕ್ರಮದಲ್ಲಿ ಇದು ಸ್ಪಷ್ಟವಾಗಿದೆ ’ಎಂದರು. ಈ ವರ್ಷ ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಚಾನ್ಸಲರ್ ಸ್ಕೋಲ್ಜ್ ಅವರಿಗೆ ಮೋದಿ ಆಹ್ವಾನವನ್ನೂ ನೀಡಿದರು. ಇದೇ ವೇಳೆ ಸ್ಕೋಲ್ಜ್ ಅವರು ಜರ್ಮನಿಯ ಅಧ್ಯಕ್ಷತೆಯಲ್ಲಿ ನಡೆಲಿರುವ ಜಿ7 ಶೃಂಗಸಭೆಗೆ ಮೋದಿಯವರನ್ನು ಆಹ್ವಾನಿಸಿದರು.
ಹ್ಯಾಂಬರ್ಗ್ ಮೇಯರ್ ಆಗಿ ಇಲ್ಲಿಗೆ ತನ್ನ ಮೊದಲ ಭೇಟಿಯ ಬಳಿಕ ಭಾರತವು ಅಗಾಧ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದ ಸ್ಕೋಲ್ಜ್,ಜಿ20 ಅಧ್ಯಕ್ಷತೆಗಾಗಿ ಭಾರತವನ್ನು ಅಭಿನಂದಿಸಿದರು.
‘ನಾವು ಪರಸ್ಪರ ಸಹಕರಿಸುತ್ತಿದ್ದೇವೆ ಮತ್ತು ಅದು ನಾವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಸಾಧ್ಯವಾಗಿಸಿದೆ. ಭಾರತವು ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು ನನಗೆ ಸಂತೋಷವನ್ನುಂಟು ಮಾಡಿದೆ. ಇದು ಅತ್ಯಂತ ಕಷ್ಟದ ಸಮಯದಲ್ಲಿ ಅತ್ಯಂತ ಜವಾಬ್ದಾರಿಯ ಕೆಲಸವಾಗಿದೆ ಎಂದು ಒತ್ತಿ ಹೇಳಲು ನಾನು ಬಯಸುತ್ತೇನೆ. ಆದರೆ ಈ ನಿಟ್ಟಿನಲ್ಲಿ ಏನನ್ನು ಮಾಡಬೇಕಿದೆಯೋ ಅದನ್ನು ಭಾರತವು ಸಂಪೂರ್ಣವಾಗಿ ಪಾಲಿಸುತ್ತದೆ ಎಂಬ ವಿಶ್ವಾಸ ನನಗಿದೆ ’ಎಂದರು.
ಉಕ್ರೇನ್ನಲ್ಲಿ ರಷ್ಯಾ ಆರಂಭಿಸಿದ ಯುದ್ಧದಿಂದಾಗಿ ಆಹಾರ ಮತ್ತು ಇಂಧನಗಳಂತಹ ಅಗತ್ಯ ವಸ್ತುಗಳ ಕೊರತೆಯು ಆಫ್ರಿಕಾ,ಏಶ್ಯಾ ಮತ್ತು ಅಮೆರಿಕಗಳಲ್ಲಿನ ಮತ್ತು ಇತರೆಡೆಗಳಲ್ಲಿನ ದೇಶಗಳು ಬಳಲಬಾರದು ಎಂದು ಹೇಳಿದ ಸ್ಕೋಲ್ಜ್,‘ಒಂದು ವರ್ಷದ ಹಿಂದೆ ಉಕ್ರೇನ್ನಲ್ಲಿ ಆರಂಭವಾದ ಯುದ್ಧವು ಅಗಾಧ ನಷ್ಟಗಳಿಗೆ ಕಾರಣವಾಗಿದೆ,ರೈಲ್ವೆ ಮಾರ್ಗಗಳು ಮತ್ತು ಇಂಧನ ಸಂಪರ್ಕಗಳನ್ನು ನಾಶಗೊಳಿಸಿದೆ. ಅದು ದೊಡ್ಡ ದುರಂತವಾಗಿದೆ, ಆದರೆ ಈ ಯುದ್ಧವು ಹಿಂಸೆಯ ಬಳಕೆಯ ಮೂಲಕ ಗಡಿಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಂಡಿರುವ ಮೂಲಭೂತ ತತ್ತ್ವಗಳನ್ನು ಉಲ್ಲಂಘಿಸಿರುವುದರಿಂದ ಇದು ಎಲ್ಲಕ್ಕೂ ಮಿಗಿಲಾಗಿ ದೊಡ್ಡ ದುರಂತವಾಗಿದೆ. ಹೀಗಾಗಿ ಈ ವಿಷಯದಲ್ಲಿ ನಮ್ಮ ನಿಲುವೇನು ಎಂದು ಪದೇ ಪದೇ ವಿಶ್ವಸಂಸ್ಥೆಯಲ್ಲಿ ಹೇಳುವುದು ಮುಖ್ಯವಾಗಿದೆ’ಎಂದು ಹೇಳಿದರು.
‘ಇಲ್ಲಿ ಅನೇಕ ಸಮರ್ಥ ಕಂಪನಿಗಳಿವೆ. ಭಾರತದಲ್ಲಿ ಅಷ್ಟೊಂದು ಪ್ರತಿಭೆಗಳಿವೆ ಮತ್ತು ನಾವು ಆ ಸಹಕಾರದಿಂದ ಲಾಭಗಳನ್ನು ಬಯಸುತ್ತೇವೆ. ನಾವು ಈ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಅವರನ್ನು ಜರ್ಮನಿಯಲ್ಲಿ ನೇಮಿಸಿಕೊಳ್ಳಲು ಬಯಸುತ್ತೇವೆ ’ಎಂದ ಸ್ಕೋಲ್ಜ್, ಹವಾಮಾನ ಬದಲಾವಣೆಯನ್ನು ‘ಕೇಂದ್ರಬಿಂದುವಾಗಿರುವ ವಿಷಯ’ ಎಂದು ಬಣ್ಣಿಸಿದರು.
ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಸ್ಕೋಲ್ಜ್ ಮತ್ತು ಮೋದಿ ವ್ಯಾಪಕ ಮಾತುಕತೆಗಳನ್ನು ನಡೆಸಿದರು. 2021 ಡಿಸೆಂಬರ್ ನಲ್ಲಿ ಜರ್ಮನ್ ಚಾನ್ಸಲರ್ ಆದ ಬಳಿಕ ಇದು ಸ್ಕೋಲ್ಜ್ ಅವರ ಮೊದಲ ಭಾರತ ಭೇಟಿಯಾಗಿದೆ. ರವಿವಾರ ಬೆಳಿಗ್ಗೆ ಬೆಂಗಳೂರಿಗೆ ಭೇಟಿ ನೀಡಲಿರುವ ಅವರು ಸಂಜೆ ಅಲ್ಲಿಂದ ಸ್ವದೇಶಕ್ಕೆ ನಿರ್ಗಮಿಸಲಿದ್ದಾರೆ.
ಭಾರತ ಮತ್ತು ಜರ್ಮನಿ ಹಂಚಿಕೊಂಡಿರುವ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ಆಧರಿಸಿರುವ ಸದೃಢ ಸಂಬಂಧಗಳನ್ನು ಹೊಂದಿವೆ. ಎರಡು ಬೃಹತ್ ಪ್ರಜಾಸತ್ತಾತ್ಮಕ ಆರ್ಥಿಕತೆಗಳ ನಡುವೆ ಹೆಚ್ಚುತ್ತಿರುವ ಸಹಕಾರವು ಉಭಯ ದೇಶಗಳ ಜನರಿಗೆ ಲಾಭದಾಯಕ ಮಾತ್ರವಲ್ಲ,ಅದು ಒತ್ತಡದಲ್ಲಿರುವ ಇಂದಿನ ಜಗತ್ತಿಗೆ ಸಕಾರಾತ್ಮಕ ಸಂದೇಶವನ್ನೂ ರವಾನಿಸುತ್ತಿದೆ.
-ಪ್ರಧಾನಿ ನರೇಂದ್ರ ಮೋದಿ







