ಧರ್ಮ, ಭಾಷೆಗಳ ಹೋಲಿಕೆ ಸಲ್ಲ : ನ್ಯಾ.ಸಂತೋಷ್ ಹೆಗ್ಡೆ

ಉಡುಪಿ: ದೇಶದಲ್ಲಿ ಧರ್ಮ, ಭಾಷೆಗಳಿಗೆ ಸಂಬಂಧಿಸಿ ನಡೆಯುತ್ತಿ ರುವ ಬೆಳವಣಿಗೆಗಳು ಬಹಳ ಅಪಾಯಕಾರಿ ಎನಿಸುತ್ತಿದೆ. ನನಗೂ ನನ್ನ ಧರ್ಮದ ಮೇಲೆ ಅಪಾರ ನಂಬಿಕೆ ಇದೆ. ಆದರೆ ಅದು ನನ್ನ ವೈಯಕ್ತಿಕ ವಿಚಾರ. ಆದರೆ ನಾವು ಧರ್ಮ, ಭಾಷೆಗಳನ್ನು ಬೇರೆ ಧರ್ಮ, ಭಾಷೆಗಳ ಜೊತೆ ಹೋಲಿಕೆ ಮಾಡಬಾರದು. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಏನು ಆಗ ಬಹುದು ಎಂಬುದರ ಬಗ್ಗೆ ಯೋಚನೆ ಮಾಡಬೇಕಾಗಿದೆ ಎಂದು ನಿವೃತ್ತ ಕರ್ನಾಟಕ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಡಾ.ಪ್ರಭುದೇವ ಬಿ.ಮಾನೆ ಅವರ ಸೇವಾನುಭವದ ನೆನಪುಗಳು ಕೃತಿಯನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.
ಸಮಾಜದ ಇಂದಿನ ಪರಿಸ್ಥಿತಿಗೆ ಇಡೀ ಸಮಾಜ ಕಾರಣ ಹೊರತು ವ್ಯಕ್ತಿಗಳು ಅಲ್ಲ. ಹಿಂದೆ ನಮ್ಮ ಸಮಾಜ ಪ್ರಾಮಾಣಿಕರನ್ನು ಮತ್ತು ಸಮಾಜ ಸೇವೆ ಮಾಡಿದವರನ್ನು ಗೌರವಿಸುತ್ತಿತ್ತು. ಜೈಲಿಗೆ ಹೋದವರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಲಾಗುತ್ತಿತ್ತು. ಹಾಗಾಗಿ ಅಂದು ತಪ್ಪು ಮಾಡುವವರು ಕಡಿಮೆ ಇದ್ದರು. ಆದರೆ ಇಂದು ಜೈಲಿಗೆ ಹೋಗಿ ಜಾಮೀನಿನಲ್ಲಿ ಹೊರಗೆ ಬಂದವರನ್ನು ಕೂಡ ಅದ್ದೂರಿಯಾಗಿ ಸ್ವಾಗತ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದಲ್ಲಿನ ಈ ಮನೋಭಾವವನ್ನು ಬದಲಾಯಿಸದಿದ್ದರೆ ಮುಂದೆ ಸಮಾಜ ಶಾಂತಿ ಸೌಹಾರ್ದತೆ ಇರಲು ಸಾಧ್ಯವಿಲ್ಲ. ಇದರಿಂದ ತಿಕ್ಕಾಟ ಜಾಸ್ತಿ ಯಾಗುತ್ತದೆ. ಇಂದು ಎಲ್ಲರಿಗೂ ಶ್ರೀಮಂತರರಾಗಬೇಕೆಂಬ ಆಸೆ ಬರುತ್ತಿದೆ. ಆದರೆ ಅದು ತಪ್ಪಲ್ಲ. ನಾವು ಕಾನೂನಿನ ಚೌಕಟ್ಟಿನಲ್ಲಿ ದುಡಿದು ಶ್ರೀಮಂತರಾಗ ಬೇಕೆ ಹೊರತು ಇನ್ನೊಬ್ಬನ ಜೇಬಿಗೆ ಕೈ ಹಾಕಿ ಅಲ್ಲ. ಅಂತಹ ಸಂಪತ್ತಿನಿಂದ ಎಂದಿಗೂ ಸಂತೋಷ ಸಿಗುವುದಿಲ್ಲ. ಪ್ರಾಮಾಣಿಕತೆ ಯಿಂದ ಹಣ ಸಂಪಾದಿಸುವ ಮೂಲಕ ಶ್ರೀಮಂತರಾಗುವ ಗುರಿ ಹೊಂದಬೇಕು ಎಂದು ಅವರು ತಿಳಿಸಿದರು.
ಎಲ್ಲ ರೋಗಕ್ಕೂ ಮದ್ದಿದೆ. ಆದರೆ ದುರಾಸೆಗೆ ಮದ್ದಿಲ್ಲ. ಆದರೆ ಅದಕ್ಕೆ ಇರುವ ಒಂದೇ ಒಂದು ದಾರಿ ಅಂದರೆ ತೃಪ್ತಿಯನ್ನು ಅಳವಡಿಸಿಕೊಳ್ಳುವುದು. ದುರಾಸೆ ಯನ್ನು ಮಟ್ಟ ಹಾಕಿದರೆ ಸಮಾಜದಲ್ಲಿ ಶಾಂತಿ ಸೌಹೌರ್ದತೆ ನೆಲೆಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ವಹಿಸಿದ್ದರು. ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ, ಲೇಖಕ ಡಾ.ಎಂ.ಆರ್.ಕೇಶವ ಧರಣಿ ಕೃತಿ ಪರಿಚಯ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಸುಧಾಕರ ಹೆಗಡೆ ಉಪಸ್ಥಿತರಿದ್ದರು.
ಕೃತಿಯ ಲೇಖಕ ಡಾ.ಪ್ರಭುದೇವ ಮಾನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.







