ಕಾರ್ಕಳ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬೈಕ್ ರ್ಯಾಲಿ

ಕಾರ್ಕಳ: ಕಾರ್ಕಳದಲ್ಲಿ ಬಿಜೆಪಿಯಿಂದ ಚುನಾಯಿತರಾದ ಶಾಸಕರು ರಾಜ್ಯದ ಮಂತ್ರಿಯಾದಾಗಲೆ ಕಾರ್ಕಳವು ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ಅವರು ಕಾರ್ಕಳ ತಾಲೂಕಿನ ಅಜೆಕಾರು ಜ್ಯೋತಿ ಹೈಸ್ಕೂಲ್ ಬಳಿಯ ಮೈದಾನ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬೈಕ್ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಬಿಜೆಪಿ ಸರಕಾರವು ರಾಜ್ಯವನ್ನು ಅಭಿವೃದ್ಧಿ ಮಾಡಿದೆ. ಅದರಂತೆಯೆ ಕಾರ್ಕಳಕ್ಕೆ ಬಿಜೆಪಿ ಪಕ್ಷವೆ ಅಭಿವೃದ್ಧಿ ಸಾಕ್ಷಿಯಾಗಿದೆ. ಈ ಬಾರಿ ಸಚಿವ ಸುನೀಲ್ ಕುಮಾರ್ ಒಂದು ಲಕ್ಷ ಅಂತರದಲ್ಲಿ ಚುನಾವಣೆಯಲ್ಲಿ ಗೆಲ್ಲಿಸುವ ನಮ್ಮ ಕಾರ್ಯವಾಗಬೇಕು. ಶಕ್ತಿ ಕೆಂದ್ರದ ಸದಸ್ಯರು ಕಾರ್ಯಕರ್ತರು ಮುಂದಿನ 50 ದಿನಗಳ ಕಾಲ ಮನೆಮನೆಗೆ ತೆರಳಿ ಸಾಧನೆಯನ್ನು ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.
ಕಾರ್ಕಳವನ್ನು ನೆನಪಿಸಿದ ಅಣ್ಣಾಮಲೈ : ಕಾರ್ಕಳ ತಾಲೂಕು ನನ್ನ ಮೊದಲ ವೃತ್ತಿ ಗೆ ದಾರಿ ತೋರಿಸಿದ ಊರು . ಇಲ್ಲಿ ನಕ್ಸಲ್ ಚಟುವಟಿಕೆ ಸಮಸ್ಯೆಯಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಬದಲಾವಣೆ ಯಾಗಿ ಅಭಿವೃದ್ಧಿಯ ಗಾಳಿ ಬೀಸಿದೆ. ರಸ್ತೆಗಳು ಉತ್ತಮವಾಗಿವೆ, ನೀರಿನ ಅಣೆಕಟ್ಟುಗಳು ಸಾಕ್ಷಿಯಾಗಿದೆ ಎಂದರು. ಅದಕ್ಕೆ ಬಿಜೆಪಿಯೆ ಸಾಕ್ಷಿ ಎಂದರು. ನಕ್ಸಲ್ ಚಟುವಟಿಕೆ ಸಂಪೂರ್ಣ ಬಂದ್ ಅಗಿದೆ ಎಂದರು.
ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ರಾಷ್ಟ್ರದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣಗಳಿರುವ ರಾಜ್ಯ ಕರ್ನಾಟಕವಾಗಲಿದೆ. ಕಳೆದ ಎಂಟು ವರ್ಷಗಳಲ್ಲಿ ಡಬ್ಬಲ್ ಎಂಜಿನ್ ಸರಕಾರದಿಂದ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಗಳನ್ನು ನಿರ್ಮಾಣ ಮಾಡಿದೆ, ಡಬಲ್ ಎಂಜಿನ್ ಸರಕಾರದಿಂದ 48% ಜನರಿಗೆ ಜಲಜೀವನ್ ಮಿಷನ್ ಯೋಜನೆಯಿಂದ ನೀರಾವರಿ ಒದಗಿಸಲಿದೆ ಎಂದರು.
ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ, ವಿಜಯ ಸಂಕಲ್ಪ ಬೈಕ್ ರ್ಯಾಲಿ ಐತಿಹಾಸಿಕ ವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕಾರ್ಕಳ ತಾಲೂಕು ಅಭಿವೃದ್ದಿಗೆ ಸಾಕ್ಷಿಯಾಗಿದೆ . ಕಾರ್ಕಳ ವಿಧಾನಸಭಾ ಕ್ಷೇತ್ರದ 209 ಬೂತುಗಳಲ್ಲಿ ಅಭಿವೃದ್ಧಿ ಪ್ರೇರಣೆಯಾಗಿದೆ . ಸ್ವಚ್ಛ ಕಾರ್ಕಳ ಸ್ವರ್ಣ ಕಾರ್ಕಳವೇ ಶ್ರಿರಕ್ಷೆ ಯಾಗಿದೆ. ಕಾಂಗ್ರೆಸ್ ಅಭಿವೃದ್ದಿಯ ಬಗ್ಗೆ ಮಾತನಾಡಲು ತಯಾರಿಲ್ಲ, ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಅಭಿವೃದ್ಧಿ ಯನ್ನು ಪ್ರತಿ ಮನೆಮನೆಗೆ ತಿಳಿಸಿ ಎಂದು ಸಚಿವರು ಕಾರ್ಯಕರ್ತರಿಗೆ ತಿಳಿಸಿದರು.
ಮಾ.19 ರಂದು ಕಾರ್ಕಳ ಅಭಿವೃದ್ಧಿ ಬಗ್ಗೆ ರಿಪೋರ್ಟ್ ಕಾರ್ಡ್ ನೀಡಲು ಸಿದ್ದನಾಗಿದ್ದೇನೆ . ಮಾ.3 ರಂದು ನಿಟ್ಟೆಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ರಾಜ್ಯ ಯುವಮೋರ್ಚ ಸಂದೀಪ್ ಕುಮಾರ್ ಮಾತನಾಡಿದರು , ಗೇರುನಿಗಮ ಅದ್ಯಕ್ಷ ಮಣಿರಾಜ್ ಶೆಟ್ಟಿ , ,ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ,ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ , ಬಿಜೆಪಿ ಜಿಲ್ಲಾದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾರ್ಕಳ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಸುಹಾಸ್ ಶೆಟ್ಟಿ ಮುಟ್ಲುಪಾಡಿ ,ಕ್ಷೇತ್ರಾದ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಸ್ವಾಗತಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಳ ಸ್ವರಾಜ್ಯ ಮೈದಾನದಿಂದ ಹೊರಟ ಬಿಜೆಪಿ ವಿಜಯ ಸಂಕಲ್ಪ ಬೈಕ್ ರ್ಯಾಲಿ ಅಜೆಕಾರಿನ ಜ್ಯೋತಿ ಹೈಸ್ಕೂಲು ಮೈದಾನದ ಬಳಿ ಸಮಾಪನಗೊಂಡಿತು.