ಸಜೀಪ ಮುನ್ನೂರು ಗ್ರಾಮದ ಆಲಾಡಿಯ ಜಾಕ್ವೆಲ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಭೇಟಿ

ಬಂಟ್ವಾಳ: ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರದ ಹಲವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯ ಪೈಪ್ಲೈನ್ ಕಾಮಗಾರಿ ಗೊಂದಲದ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಆಲಾಡಿಯಲ್ಲಿ ನಿರ್ಮಾಣ ಗೊಂಡಿರುವ ಜಾಕ್ವೆಲ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾ.ಪಂ.ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು.
ಸಜೀಪ ಮುನ್ನೂರು ಸೇರಿದಂತೆ 5 ಗ್ರಾ.ಪಂ.ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 279 ಕೋಟಿ ರೂ ಗಳು ಮಂಜೂರಾಗಿದ್ದು, ಅದರ ಅನುಷ್ಠಾನದಲ್ಲಿ ವಿಳಂಬವಾಗು ವುದರಿಂದ, ಈ ಗ್ರಾಮದ ಜನತೆಗೆ ಕುಡಿಯುವ ನೀರು ತಕ್ಷಣ ನೀಡಲು ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಶುದ್ಧೀಕರಣಕ್ಕಾಗಿ ಪಿಲ್ಟರ್ ಅಳವಡಿಸಿ, 0.2 ಎಂ.ಎಲ್.ಡಿ. ನೀರನ್ನು ಸಜೀಪ ಮುನ್ನೂರು ಗ್ರಾಮಕ್ಕೆ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜತೆಗೆ ಉಳ್ಳಾಲ ಹಾಗೂ ಬಂಟ್ವಾಳದ ಹಲವು ಗ್ರಾಮಗಳಿಗೆ ನೀರನ್ನು ಒದಗಿಸುವ ಕಚ್ಚಾನೀರು ಹಾಗೂ ಶುದ್ಧೀಕರಣದ ನೀರಿನ ಪೈಪ್ಲೈನ್ ಅಳವಡಿಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅನುಮತಿ ನೀಡಲು ಗ್ರಾ.ಪಂ.ಗೆ ಮನವರಿಕೆ ಮಾಡಿದರು.
ಆಲಾಡಿ ಪ್ಲಾಂಟೇಷನ್ಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಬಳಿಕ ಸಚಿವರು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳ ಜೊತೆ ಮುಡಿಪುವಿನಲ್ಲಿ ನಿರ್ಮಾಣ ಗೊಂಡಿರುವ ಶುದ್ಧೀಕರಣ ಘಟಕಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸಬೀನಾ, ಗ್ರಾಮದ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಸಜೀಪ, ಸಂತೋಷ್ ಶೆಟ್ಟಿ ದಳಂದಿಲ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ, ಸಹಾಯಕ ಇಂಜಿನಿಯರ್ ಶೋಭಾಲಕ್ಮೀ, ಎ.ಇ.ಇ., ಜಿ.ಕೆ.ನಾಯ್ಕ್ , ಸಹಾಯಕ ಇಂಜಿನಿಯರ್ ಜಗದೀಶ್ ನಿಂಬಾಲ್ಕರ್, ತಾ.ಪಂ. ಇ.ಒ.,ರಾಜಣ್ಣ, ಸಜೀಪ ಮುನ್ನೂರು ಪಿಡಿಒ ಲಕ್ಷಣ್, ಸಜೀಪ ಮೂಡ ಪಿಡಿಒ ಮಾಯ ಕುಮಾರಿ, ಕಂದಾಯ ನಿರೀಕ್ಷಕಿ ಸ್ವಾತಿ ಮತ್ತಿತರರು ಉಪಸ್ಥಿತರಿದ್ದರು.