ಬ್ಲಡ್ ಡೋನರ್ಸ್ ಮಂಗಳೂರು(ರಿ)ಸಂಸ್ಥೆಗೆ ʼರಾಷ್ಟ್ರೀಯ ರಕ್ತ-ನಾಯಕ ಪ್ರಶಸ್ತಿʼ

ಕರ್ನಲ್: ನ್ಯಾಷನಲ್ ಇಂಟಿಗ್ರೇಟೆಡ್ ಪೋರಂ ಅಫ್ ಆರ್ಟ್ಸ್ ಆ್ಯಂಡ್ ಆಕ್ಟಿವಿಸ್ಟ್.(ನಿಫಾ) ಸಂಸ್ಥೆಯು 75ನೇ ಸ್ವಾತಂತ್ರೋತ್ಸವದ ಅಂಗವಾಗಿ ದೇಶದಾದ್ಯಂತ ಆಯೋಜಿಸಿದ್ದ "ಅಮೃತ್ ಮಹೋತ್ಸವ ಬ್ಲಡ್ ಡೊನೆಷನ್ ಕ್ಯಾಂಪೈನ್" ನಲ್ಲಿ ಭಾಗವಹಿಸಿ ಅತ್ಯಧಿಕ ರಕ್ತದಾನ ಶಿಬಿರಗಳನ್ನು ಆಯೋಜಿಸಿ ದಾಖಲೆಯ ರಕ್ತಸಂಗ್ರಹಣೆ ಮಾತ್ರವಲ್ಲದೆ ರಕ್ತದಾನ ಜಾಗೃತಿ ಶಿಬಿರಗಳನ್ನು ಏರ್ಪಡಿಸಿ ಸ್ವಯಂ ಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹವನ್ನು ನೀಡಿದ ಬ್ಲಡ್ ಡೋನರ್ಸ್ ಮಂಗಳೂರು( ರಿ) ಸಂಸ್ಥೆಗೆ "ರಾಷ್ಟ್ರೀಯ ರಕ್ತ-ನಾಯಕ ಪ್ರಶಸ್ತಿ"ಯನ್ನು ನೀಡಿ ಗೌರವಿಸಲಾಯಿತು.
ಹರ್ಯಾಣದ ಕರ್ನಲ್'ನ ಡಾ ಮಂಗಲ್ ಸೆನ್ ಸಭಾಭವನದಲ್ಲಿ ಕಾರ್ಯಕ್ರಮ ಜರುಗಿತು. ಬ್ಲಡ್ ಡೋನರ್ಸ್ ಮಂಗಳೂರು( ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ ಇವರು ಹರ್ಯಾಣ ಮುಖ್ಯ ಮಂತ್ರಿ ಶ್ರೀಯುತ ಮನೋಹರ್ ಲಾಲ್ ಕಟ್ಟಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕರಾದ ಸಲಾಂ ಚೊಂಬುಗುಡ್ಡೆ ಮತ್ತು ಫಾರೂಕ್ ಬಿಗ್ ಗ್ಯಾರೇಜ್ ಹಾಗು ಹಿತೈಷಿ ಮಹಮ್ಮದ್ ಅಶ್ರಪ್ ಗುರುಪುರ ಇವರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿಫಾ ಸಂಸ್ಥೆಯ ಸಂಸ್ಥಾಪಕರಾದ ಪ್ರೀತ್ಪಾಲ್ ಸಿಂಗ್ ಪನ್ನು, ಅಧ್ಯಕ್ಷರಾದ ಅನಿಮೇಶ್ ದೇಬರಾಯ್, ಪ್ರದಾನ ಕಾರ್ಯದರ್ಶಿ ಡಾ. ಅಶ್ವಿನಿ ಶೆಟ್ಟಿ ಸಂಯೋಜಕರಾದ ನರೇಶ್ ಬರಣ ಹಾಗು ಹಲವಾರು ಗಣ್ಯರು ಭಾಗಿಯಾಗಿದ್ದರು.
ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು ತನ್ನ 10ನೇ ವಾರ್ಷಿಕೋತ್ಸವದ ಹೊಸ್ತಿಲಲ್ಲಿದ್ದು ಈಗಾಗಲೇ ದೇಶ ವಿದೇಶಗಳಲ್ಲಿ 380 ಕ್ಕಿಂತಲೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಕಳೆದ ವರ್ಷ ಸಂಸ್ಥೆಗೆ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯು ಕೂಡ ಒಲಿದಿತ್ತು ಎಂದು ಇಲ್ಲಿ ಸ್ಮರಿಸಬಹುದು.
ಸಂಸ್ಥೆಯ ಜೊತೆ ಕೈಜೋಡಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ, ಸ್ವಯಂ ಪ್ರೇರಿತ ರಕ್ತ ನೀಡಿದ ರಕ್ತದಾನಿಗಳಿಗೆ ಮತ್ತು ಬೆಂಬಲಿಸಿದ ಸರ್ವ ಹಿತೈಷಿಗಳಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.