ಮರ್ಕಝ್ ಸಮ್ಮೇಳನ ಯಶಸ್ವಿಗೊಳಿಸಲು ಸಖಾಫೀಸ್ ಸಂಘಟನೆ ಕರೆ

ಮಂಗಳೂರು: ವಿಶ್ವವಿಖ್ಯಾತ ಸಮನ್ವಯ ಶಿಕ್ಷಣ ಸಂಸ್ಥೆ, ಸುನ್ನೀ ಸಾಂಸ್ಕ್ರತಿಕ ಕೇಂದ್ರ ’ಮರ್ಕಝ್ ಸಖಾಫತಿ ಸುನ್ನಿಯ್ಯ ಇದರ ಘಟಿಕೋತ್ಸವ ಹಾಗೂ ಖತ್ಮುಲ್ ಬುಖಾರಿ ಮಹಾ ಸಂಗಮವು ಮಾರ್ಚ್ 2ರಂದು ಬೆಳಗ್ಗೆ ಹತ್ತು ಗಂಟೆಗೆ ಕೋಝಿಕ್ಕೋಡ್ ಕಾರಂದೂರು ಮರ್ಕಝ್ ನಲ್ಲಿ ನಡೆಯಲಿದೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಸಖಾಫಿ ಶೂರಾ ನಾಯಕರಾದ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ ಅವರು ಮರ್ಕಝ್ ಶರೀಅತ್ ಕಾಲೇಜಿನಲ್ಲಿ ಕಲಿತ 437 ವಿದ್ಯಾರ್ಥಿಗಳಿಗೆ ಫಾಝಿಲ್ ಸಖಾಫಿ, ಶರೀಅತ್ ಕಾಲೇಜ್ ಸ್ನಾತಕೋತ್ತರ ವಿಭಾಗದಿಂದ ಹೊರಬರುವ 62 ವಿದ್ಯಾರ್ಥಿಗಳಿಗೆ ಕಾಮಿಲ್ ಸಖಾಫಿ ಹಾಗೂ ಮರ್ಕಝ್ ನಾಲೇಜ್ ಸಿಟಿಯಲ್ಲಿ ವ್ಯಾಸಂಗ ಮುಗಿಸಿದ 33 ವಿದ್ಯಾರ್ಥಿಗಳಿಗೆ ವಾರಿಸ್ ಸಖಾಫಿ ಪದವಿ ಸೇರಿದಂತೆ ಒಟ್ಟು 532 ವಿದ್ಯಾರ್ಥಿಗಳಿಗೆ ಬಿರುದು ನೀಡಲಾಗುತ್ತದೆ ಎಂದು ಹೇಳಿದರು.
1978 ರಲ್ಲಿ ಪ್ರಾರಂಭಗೊಂಡ ಮರ್ಕಝುಸ್ಸಖಾಫತಿ ಸುನ್ನಿಯ್ಯದ ಅಧೀನದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಾಗೂ ದೇಶದ ಹೊರಗೂ ಸಾವಿರಾರು ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಕೋಝಿಕ್ಕೋಡ್ ಸಮೀಪ ಕೈದಪ್ಪೋಯಿಲ್ನಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ನಾಲೇಜ್ ಸಿಟಿ’ಯು ಈಗಾಗಾಲೇ ದೇಶದ ಶೈಕ್ಷಣಿಕ ಭೂಪಟದಲ್ಲಿ ಗುರುತಿಸಲ್ಪಟ್ಟ ಜ್ಞಾನ ನಗರಿಯಾಗಿದೆ ಎಂದರು.
ಕಳೆದ ನಾಲ್ಕುವರೆ ದಶಕಗಳಿಂದ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅನನ್ಯ ಸೇವೆಗಳನ್ನು ಮಾಡಿರುವ ಮರ್ಕಝ್ ಸಂಸ್ಥೆಗಳು ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಸಾರಥ್ಯದಲ್ಲಿ ಅನುಪಮವಾಗಿ ಮುನ್ನಡೆಯುತ್ತಿದೆ ಎಂದು ನುಡಿದರು.
ಮಾರ್ಚ್ 2ರಂದು ಗುರುವಾರ ಬೆಳಗ್ಗೆ ಹತ್ತು ಗಂಟೆಯಿಂದ ರಾತ್ರಿ ತನಕ ನಡೆಯುವ ಸಮ್ಮೇಳನದಲ್ಲಿ ಸನದುದಾನ, ದಿಕ್ರ್ ಹಲ್ಖಾ, ಖತ್ಮುಲ್ ಬುಖಾರಿ,ಉಲಮಾ ಸಂಗಮ, ದಸ್ತಾರ್ ಬಂದೀ, ಮೀಡಿಯಾ ಸೆಮಿನಾರ್ ಹಾಗೂ ಯುಎಇ ರಾಷ್ಟ್ರಪಿತ ಶೈಖ್ ಝಾಯಿದ್ ಹೆಸರಿನಲ್ಲಿ ಪೀಸ್ ಕಾನ್ಸರೆನ್ಸ್ ನಡೆಯಲಿದೆ ಎಂದು ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷ ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ಟ, ಪ್ರಧಾನ ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿ , ಕಾರ್ಯದರ್ಶಿಗಳಾದ ಬಿ ಕೆ ಉಸ್ಮಾನ್ ಸಖಾಫಿ ಕಣ್ಣೂರು ಮತ್ತು ಮುಸ್ತಫ ಸಖಾಫಿ ಬೇಂಗಿಲ ,ಉಪಾಧ್ಯಕ್ಷ ಬಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಉಪಸ್ಥಿತರಿದ್ದರು







