ಪ್ರಯಾಗ್ ರಾಜ್: ಗ್ಯಾಂಗ್ ಸ್ಟರ್ ಅತಿಕ್ ಅಹ್ಮದ್ ಸಹಚರನ ಮನೆ ಬುಲ್ಡೋಝರ್ ಮೂಲಕ ಧ್ವಂಸ

ಲಕ್ನೋ: ಉತ್ತರ ಪ್ರದೇಶದಲ್ಲಿ ಕೊಲೆ ಪ್ರಕರಣದ ಸಾಕ್ಷಿಯೊಬ್ಬರನ್ನು ಹಗಲು ಹೊತ್ತಿನಲ್ಲಿ ಹತ್ಯೆಗೈದ ಐದು ದಿನಗಳ ಬಳಿಕ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ ಹೊತ್ತಿರುವ ದರೋಡೆಕೋರ ಅತಿಕ್ ಅಹ್ಮದ್ ಹತ್ತಿರದ ಸಂಬಂಧಿಯ ಮನೆಯನ್ನು ಆದಿತ್ಯನಾಥ್ ಸರಕಾರವು ಬುಧವಾರ ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿದೆ.
2005ರಲ್ಲಿ ರಾಜಕಾರಣಿ ರಾಜು ಪಾಲ್ ಕೊಲೆ ಪ್ರಕರಣದ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ನನ್ನು ಪ್ರಯಾಗ್ರಾಜ್ನಲ್ಲಿರುವ ಆತನ ಮನೆಯ ಹೊರಗೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲಾಗಿತ್ತು. ಐವರು ನಡೆಸಿದ ಗುಂಡಿನ ದಾಳಿಯಲ್ಲಿ ಪಾಲ್ ಅವರ ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದ.
ಗ್ಯಾಂಗ್ ಸ್ಟರ್ -ರಾಜಕಾರಣಿ ಹಾಗೂ ಸಮಾಜವಾದಿ ಪಕ್ಷದ ಮಾಜಿ ನಾಯಕ ಅತಿಕ್ ಅಹ್ಮದ್ ಹತ್ಯೆಯನ್ನು ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅತಿಕ್ ಅಹ್ಮದ್ ನ ಕಡು ಪ್ರತಿಸ್ಪರ್ಧಿಯಾಗಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಶಾಸಕ ರಾಜು ಪಾಲ್ ಅವರ ಹತ್ಯೆಯನ್ನು ಉಮೇಶ್ ಪಾಲ್ ಕಣ್ನಾರೆ ನೋಡಿದ್ದ. ಅಹಮದಾಬಾದ್ನ ಜೈಲಿನಲ್ಲಿರುವ ಅತಿಕ್ ಅಹ್ಮದ್ ಸಾಕ್ಷಿಯನ್ನು ಕೊಲ್ಲಲು ತನ್ನ ಹತ್ತಿರದ ಐದು ಅಥವಾ ಆರು ಸಹಚರರನ್ನು ಕಳುಹಿಸಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಶೂಟೌಟ್ ಬಳಿಕ ನಾಪತ್ತೆಯಾಗಿರುವ ಅತಿಕ್ ಅಹ್ಮದ್ ಇನ್ನೊಬ್ಬ ಆಪ್ತ ಸಹಾಯಕ ಜಾಫರ್ ಅಹ್ಮದ್ ಗೆ ಸೇರಿರುವ ಪ್ರಯಾಗ್ರಾಜ್ನಲ್ಲಿರುವ ಮನೆಯನ್ನು ಕೆಡವಲು ಇಂದು ಬೆಳಗ್ಗೆ ಬುಲ್ಡೋಝರ್ಗಳು ಆಗಮಿಸಿವೆ.
ಇಂದು ಮುಂಜಾನೆ ಪೊಲೀಸರು ಲಕ್ನೋದಲ್ಲಿರುವ ಅತಿಕ್ ಅಹ್ಮದ್ ಮನೆಯ ಮೇಲೆ ದಾಳಿ ನಡೆಸಿ ಎರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.







