ಉಡುಪಿ: ಸರಕಾರಿ ನೌಕರರ ಮುಷ್ಕರ; ಸಾರ್ವಜನಿಕರ ಪರದಾಟ
ಡಿಸಿಗೂ ತಟ್ಟಿದ ಮುಷ್ಕರದ ಬಿಸಿ!

ಉಡುಪಿ, ಮಾ.1: ಏಳನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರಿ ನೌಕರರು ಬುಧವಾರ ಹಮ್ಮಿಕೊಂಡಿದ್ದ ಮುಷ್ಕರದಿಂದ ಉಡುಪಿ ಜಿಲ್ಲೆಯಾದ್ಯಂತ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಬೆಳಗ್ಗೆಯಿಂದ ಜಿಲ್ಲಾಧಿಕಾರಿ ಸಂಕೀರ್ಣ ರಜತಾದ್ರಿ ಸೇರಿದಂತೆ ಬಹುತೇಕ ಸರಕಾರಿ ಕಚೇರಿಗಳು ಸರಕಾರಿ ನೌಕರರ ಗೈರು ಹಾಜರಿಯಿಂದ ಬಿಕೋ ಎನ್ನುತ್ತಿತ್ತು. ಜಿಲ್ಲೆಯಲ್ಲಿ ಸುಮಾರು 12ಸಾವಿರ ಸರಕಾರಿ ನೌಕರರಿದ್ದು, ಇವರಲ್ಲಿ ಬಹುತೇಕ ಮಂದಿ ಕರ್ತವ್ಯ ಹಾಜರಾಗದೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಎಲ್ಲ ಇಲಾಖೆಗಳ ಜಿಲ್ಲಾ ಕಚೇರಿ ಗಳು, ತಾಲೂಕು ಕಚೇರಿಗಳು ನೌಕರರು ಇಲ್ಲದೆ ಖಾಲಿಖಾಲಿಯಾಗಿರುವುದು ಕಂಡುಬಂತು. ಆದರೆ ಕೆಲವು ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಮುಷ್ಕರದಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಕೂಡ ಭಾಗಿಯಾಗಿರುವುದರಿಂದ ಕೆಲವು ಶಾಲೆಗಳಿಗೆ ರಜೆ ಸಾರಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಹೊರಗುತ್ತಿಗೆ ನೌಕರರನ್ನು ಕರ್ತವ್ಯ ಹಾಜರಾಗದಂತೆ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಸೇರಿದಂತೆ ಪದಾಧಿಕಾರಿಗಳು ಮನವೊಲಿಸುವ ಪ್ರಯತ್ನ ನಡೆಸಿದರು. ಈ ವೇಳೆ ಇವರ ಮಧ್ಯೆ ವಾಗ್ವಾದಗಳು ನಡೆದವು. ಆದರೂ ಹೊರಗುತ್ತಿಗೆ ನೌಕರರು ಕಚೇರಿಗೆ ತೆರಳಿ ಕರ್ತವ್ಯ ನಿರ್ವಹಿಸಿದರು.
‘ಜಿಲ್ಲಾಸ್ಪತ್ರೆಯ ಆಸ್ಪತ್ರೆಯ ರೋಗಿಗಳಿಗೆ, ತುರ್ತು ಸೇವೆಯಲ್ಲಿ ಯಾವುದೇ ತೊಂದರೆ ಆಗದಂತೆ ಕಪ್ಪು ಪಟ್ಟಿ ಧರಿಸಿ ವೈದ್ಯರು ಹಾಗೂ ದಾದಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಕಾರ ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ನೌಕರರು ತಕ್ಷಣವೇ ಕರ್ತವ್ಯ ಹಾಜರಾದರು ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಅಂಪಾರು ತಿಳಿಸಿದರು.
‘ಉಡುಪಿ ಜಿಲ್ಲೆಯಲ್ಲಿ ಇಂದು ನಡೆದ ಸರಕಾರಿ ನೌಕರರ ಮುಷ್ಕರದಿಂದ ಆರೋಗ್ಯ ಸೇವೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳ ಲಾಗಿದೆ. ಬೇರೆ ಬೇರೆ ಸರಕಾರಿ ಕಚೇರಿಯಲ್ಲಿರುವ ಹೊರಗುತ್ತಿಗೆ ನೌಕರರ ಮೂಲಕ ಕೆಲವೊಂದು ಸೇವೆಗಳನ್ನು ಒದಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದರು.
ಡಿಸಿಗೂ ತಟ್ಟಿದ ಮುಷ್ಕರದ ಬಿಸಿ!
ಸರಕಾರಿ ನೌಕರರ ಮುಷ್ಕರ ಬಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರಿಗೂ ತಟ್ಟಿದೆ.
ಅವರ ಕಾರು ಚಾಲಕ ಸರಕಾರಿ ನೌಕರರಾಗಿರುವುದರಿಂದ ಮುಷ್ಕರಕ್ಕೆ ಬೆಂಬಲ ನೀಡಿ ಕರ್ತವ್ಯ ಹಾಜರಾಗಿರಲಿಲ್ಲ. ಆದರೆ ಜಿಲ್ಲಾಧಿಕಾರಿ ಕೂರ್ಮಾರಾವ್ ಕರ್ತವ್ಯಕ್ಕೆ ಹಾಜರಾಗಲು ಗುತ್ತಿಗೆ ಆಧಾರದ ಚಾಲಕರನ್ನು ಅಲಂಬಿಸಬೇಕಾಯಿತು. ಬೇರೆ ಸರಕಾರಿ ಕಾರುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರ ಇಂದು ಜಿಲ್ಲಾಧಿಕಾರಿಗಳ ಕಾರಿಗೆ ಚಾಲಕರಾಗಿ ಸೇವೆ ಸಲ್ಲಿಸಿದರು.
