ಮಾ.3ರಿಂದ ಹಿರಿಯಡ್ಕದಲ್ಲಿ ಕೃಷಿ ಮೇಳ

ಉಡುಪಿ, ಮಾ.1: ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಪರ್ಕಳ ವಿವಿಧ ಸಂಸ್ಥೆ ಹಾಗೂ ಸಂಘಟನೆಗಳ ಸಹಯೋಗದೊಂದಿಗೆ ಹಿರಿಯಡಕದಲ್ಲಿ ‘ಹಿರಿಯಡಕ ಕೃಷಿ ಮೇಳ-2023’ನ್ನು ಮಾ.3ರಿಂದ 5ರವರೆಗೆ ಆಯೋಜಿಸಿದೆ ಎಂದು ಹಿರಿಯಡಕ ಕೃಷಿ ಮೇಳ ಸಮಿತಿಯ ಗೌರವಾಧ್ಯಕ್ಷ ಹಾಗೂ ಪ್ರಗತಿಪರ ಕೃಷಿಕ ಪಳ್ಳಿ ನಟರಾಜ್ ಹೆಗ್ಡೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯಡಕದ ವೆನಿಲ್ಲಾ ಅಭಿವೃದ್ಧಿ ಟ್ರಸ್ಟ್, ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಹಿರಿಯಡಕ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ನೈಸರ್ಗಿಕ ಕೃಷಿ ಯೋಜನೆ ವಲಯ-10, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಹಾಗೂ ಜಿಲ್ಲಾ ಕೃಷಿಕ ಸಂಘಗಳು ಸಂಯುಕ್ತವಾಗಿ ಈ ಕೃಷಿ ಮೇಳ ಹಾಗೂ ಸಾಂಸ್ಕೃತಿಕ ವೈಭವವನ್ನು ಆಯೋಜಿಸಿದೆ ಎಂದವರು ತಿಳಿಸಿದರು.
ಕೃಷಿ ಮೇಳ ಹಾಗೂ ಕೃಷಿ ಪ್ರದರ್ಶನಗಳು ಹಿರಿಯಡಕ ಮಹತೋಬಾರ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ಬಾಕಿಮೀರು ಗದ್ದೆಯಲ್ಲಿ ನಡೆಯಲಿದೆ. ಕೃಷಿ ಮೇಳವನ್ನು ಮಾ.3ರ ಶುಕ್ರವಾರ ಬೆಳಗ್ಗೆ 10ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ತಾಂತ್ರಿಕ ಕೈಪಿಡಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಮಂಗಳೂರಿನ ಕಾಂಪ್ಕೋ ಅಧ್ಯಕ್ಷ ಕಿಶೋರ್ಕುಮಾರ ಕೊಡ್ಗಿ ಅವರು ರೈತರನ್ನು ಸನ್ಮಾನಿಸಲಿದ್ದಾರೆ. ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ ಅವರು ವಸ್ತು ಪ್ರದರ್ಶನವನ್ನು ಉದ್ಘಾಟಿಸ ಲಿದ್ದಾರೆ. ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಪಂ ಸಿಇಓ ಪ್ರಸನ್ನ ಎಚ್., ಶ್ಯಾಮಲಾ ಕುಂದರ್, ಕುಯಿಲಾಡಿ ಸುರೇಶ್ ನಾಯಕ್, ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನಟರಾಜ ಹೆಗ್ಡೆ ತಿಳಿಸಿದರು.
ಮೂರು ದಿನಗಳ ಕೃಷಿ ಮೇಳದಲ್ಲಿ ಒಟ್ಟು ಐದು ತಾಂತ್ರಿಕ ಸಮಾವೇಶಗಳು ನಡೆಯಲಿವೆ. ತೋಟಗಾರಿಕಾ ಬೆಳೆಗಳು, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿ, ಹೈನುಗಾರಿಕೆ ಮತ್ತು ಮೀನುಗಾರಿಕೆ, ಕೃಷಿ ಇಲಾಖೆಗಳ ಯೋಜನೆಗಳು ಮತ್ತು ಬ್ಯಾಂಕ್ ಸೌಲಭ್ಯಗಳ ಕುರಿತು ಉಪನ್ಯಾಸಗಳನ್ನು ನೀಡಲಾಗುತ್ತದೆ. ಕೊನೆಯ ದಿನವಾದ ಮಾ.5ರಂದು ಅಪರಾಹ್ನ 2:00ರಿಂದ ಸ್ಥಳೀಯ ಖಾದ್ಯ ತಯಾರಿಕೆ ಪ್ರದರ್ಶನ, ಸ್ಪರ್ಧೆ ಹಾಗೂ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ಮಾ.5ರ ರವಿವಾರ ಸಂಜೆ 5ಕ್ಕೆ ಸಮಾರೋಪ ಸಮಾರಂಭ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಾಂಸ್ಕೃತಿಕ ವೈಭವದ ಅಂಗವಾಗಿ ಪ್ರತಿದಿನ ಸಂಜೆ 6ಕ್ಕೆ ಕ್ರಮವಾಗಿ ಗರುಡ ಪಂಚಮಿ ತುಳು ನಾಟಕ, ಸಾಲಿಗ್ರಾಮ ಮೇಳದಿಂದ ಯಕ್ಷಗಾನ ‘ಭುವನ ಭಾರತಿ’ ಹಾಗೂ ತುಳುನಾಡ ಸಂಸ್ಕೃತಿ ಪ್ರದರ್ಶನವಿರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರದ ಡಿಪ್ಲೋಮಾ ಕೃಷಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಸುಧೀರ್ ಕಾಮತ್, ಕೆವಿಕೆ ಬ್ರಹ್ಮಾವರದ ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ, ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಹಾಗೂ ಪ್ರಗತಿಪರ ಕೃಷಿಕ ಸುರೇಶ್ ನಾಯಕ್ ಹಾಗೂ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.