ಉಡುಪಿ: ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ಜಿಲ್ಲೆಯ ಸಾಧನೆ

ಉಡುಪಿ: ಯಾವುದೇ ಗ್ರಾಮ ಅಥವಾ ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸಲು ಕೇವಲ ಮನೆಗಳಷ್ಟೇ ಶೌಚಾಲಯ ಹೊಂದಿದ್ದರೆ ಸಾಲದು. ಬದಲಿಗೆ ಆ ಗ್ರಾಮ ಅಥವಾ ಜಿಲ್ಲೆಯಲ್ಲಿ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಸುವ್ಯವಸ್ಥಿತ ಸಮುದಾಯ ಶೌಚಾಲಯ ವ್ಯವಸ್ಥೆ ಇರಬೇಕಾಗುತ್ತದೆ. ಆಗ ಮಾತ್ರ ಸಮುದಾಯದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು ಕಾಪಾಡಬಹುದಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ರೂಢಿಯಲ್ಲಿರುವ ಬಯಲು ಬಹಿರ್ದೆಸೆ ಪದ್ದತಿಯನ್ನು ಸಂಪೂರ್ಣವಾಗಿ ತೊಲಗಿಸಿ, ಗ್ರಾಮಗಳನ್ನು ಸ್ವಚ್ಚ ಹಾಗೂ ಸುಂದರವನ್ನಾಗಿಸುವ ಮೂಲಕ ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡುವ ಸ್ವಚ್ಚ ಭಾರತ್ ಮಿಷನ್ ಯೋಜನೆಯ ಉದ್ದೇಶ ಕೂಡಾ ಇದೆ ಆಗಿದೆ.
ಶೌಚಾಲಯವಿಲ್ಲದೆ ಬಯಲು ಶೌಚಾಲಯಕ್ಕೆ ಹೋಗುವುದರಿಂದ ಯಾವ ದುಷ್ಪರಿಣಾಮಗಳು ಉಂಟಾಗುತ್ತವೆ ಎನ್ನುವ ಬಗ್ಗೆ ಅರಿವಿದ್ದರೂ ಸಹ ಕೆಲವೊಂದು ಗ್ರಾಮೀಣ ಭಾಗದಲ್ಲಿ ಇನ್ನೂ ಕೂಡ ಬಯಲೇ ಶೌಚಾಲಯ ವಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡು ಬಯಲು ಬಹಿರ್ದೆಸೆಗೆ ವಿದಾಯ ಹೇಳುವ ಮೂಲಕ ಸ್ವಚ್ಛ, ಸುಂದರ ಗ್ರಾಮಗಳನ್ನು ರೂಪಿಸುವಲ್ಲಿ ಪ್ರತಿಯೊಬ್ಬರೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದುವರೆದು ಈ ಯೋಜನೆಯ ಲಾಭ ಪಡೆದು, ರಾಜ್ಯಾದ್ಯಂತ ಅವಶ್ಯಕತೆ ಇರುವ ಕಡೆ ಅಂದರೆ ಹೆಚ್ಚಾಗಿ ಜನ ಸೇರುವ ಕಡೆ, ಮಾರುಕಟ್ಟೆ, ಬಸ್ನಿಲ್ದಾಣ ಹಾಗೂ ದೇವಸ್ಥಾನದಂತಹ ಸ್ಥಳಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.
ಉಡುಪಿ ಜಿಲ್ಲೆಯನ್ನು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಆಗಿರುವುದಾಗಿ ಘೋಷಣೆ ಮಾಡಲಾಗಿದೆ. ಬಹುತೇಕ ಗ್ರಾಮೀಣ ಕುಟುಂಬ ಗಳಿಗೆ ವೈಯಕ್ತಿಕ ಗೃಹ ಶೌಚಾಲಯ ಸೌಲಭ್ಯವನ್ನು ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ನಿರ್ಮಿಸಿಕೊಡಲಾಗಿದೆ. ಗೃಹ ಶೌಚಾಲಯ ನಿರ್ಮಾಣಕ್ಕೆ ಸ್ಥಳದ ಅಭಾವವಿರುವ ಕುಟುಂಬಗಳಿಗೆ ಹಾಗೂ ಹೆಚ್ಚು ಜನಸಂದಣೆ ಸೇರುವ ಸ್ಥಳಗಳು, ಸಂತೆ, ಜಾತ್ರೆ ನಡೆಯುವ ಸ್ಥಳಗಳು, ಮಾರುಕಟ್ಟೆ, ಬಸ್ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ನಿಯಮಿತವಾಗಿ ಸೇರುವ ಜನಸಂದಣಿ, ವಲಸೆ ಹಾಗೂ ಇತರೆ ಕಾರಣಗಳಿಂದ ಉಂಟಾಗುವ ಜನಸಂದಣಿ ಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿ ಶೌಚಾಲಯದ ಅಗತ್ಯತೆ ಇದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಇಂತಹ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಉಡುಪಿ ಜಿಲ್ಲಾ ಪಂಚಾಯತ್, ಉಡುಪಿ ಸ್ವಚ್ಚ ಭಾರತ್ ಮಿಷನ್ (ಗ್ರಾ) ನಡಿ ಉಡುಪಿ ಜಿಲ್ಲೆಯಲ್ಲಿ ಇದುವರೆಗೂ 123 ಲಕ್ಷ ರೂ. ಅನುದಾನದಲ್ಲಿ ಒಟ್ಟು 41 ಸಮುದಾಯ ಶೌಚಾಲಯಗಳನ್ನು ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿದ್ದು, 38 ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡು ಬಳಕೆಗೆ ಸಿದ್ದವಾಗಿವೆ. ಉಳಿದ 3 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ.
ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸ್ವಚ್ಚ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಪ್ರತೀ ಶೌಚಾಲಯಕ್ಕೆ ಮೂರು ಲಕ್ಷರೂ. ಅನುದಾನ ನೀಡಲಾಗುತ್ತದೆ. ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಸೂಕ್ತ ಜಾಗ ಲಭ್ಯವಿರಬೇಕು ಹಾಗೂ ಜಾಗ ಪಂಚಾಯತ್ನ ಹೆಸರಲ್ಲಿರಬೇಕು. ಒಂದು ವೇಳೆ ಖಾಸಗಿ ಒಡೆತನದ ಜಾಗವಾಗಿದ್ದರೆ, ಖಾಸಗಿ ಒಡೆತನದವರ ಒಪ್ಪಿಗೆ ಪತ್ರ ಬೇಕಾಗುತ್ತದೆ. ಶೌಚಾಲಯದ ಸ್ವಚ್ಚತೆಯ ಜವಾಬ್ದಾರಿಯನ್ನು ನಿರ್ಮಿಸಿಕೊಂಡವರೇ ಮಾಡಿಕೊಳ್ಳುವ ದೃಡೀಕರಣ ಪತ್ರವನ್ನು ಜಿಲ್ಲಾ ಪಂಚಾಯತ್ನಿಂದ ಪಡೆಯಲಾಗಿದೆ.
ಜಿಲ್ಲೆಯಲ್ಲಿ ಈ ಯೋಜನೆಯಡಿ ಈಗಾಗಲೇ ಪ್ರಸ್ತಾವನೆಗಳು ಸಲ್ಲಿಕೆಯಾಗಿರುವ ಉಡುಪಿ ತಾಲೂಕು-3, ಬೈಂದೂರು-8, ಕಾಪು-5, ಕುಂದಾಪುರ-10, ಬ್ರಹ್ಮಾವರ-3, ಕಾರ್ಕಳ-8, ಹೆಬ್ರಿ-4 ಸಮುದಾಯ ಶೌಚಾಲಯ ನಿರ್ಮಾಣ ಕೈಗೊಳ್ಳಲಾಗಿದೆ. ಇಲ್ಲಿನ ಪ್ರಮುಖ ಜನಸಂದಣಿ ಸೇರುವ ಸ್ಥಳಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅವುಗಳ ಸಮರ್ಪಕ ಬಳಕೆ ಮತ್ತು ಸೂಕ್ತ ನಿರ್ವಹಣೆಯೂ ಆಗುತ್ತಿದೆ. ಪ್ರತಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ 2.10 ಲಕ್ಷ ಹಾಗೂ ಉಳಿದ ಮೊತ್ತ 90,000ರೂ.ಗಳನ್ನು ಸಂಬಂಧಪಟ್ಟ ಪಂಚಾಯತ್ಗಳ 15ನೇ ಹಣಕಾಸು ಯೋಜನೆಯಡಿ ಭರಿಸಲಾಗುತ್ತಿದೆ.
ಗೃಹ ಶೌಚಾಲಯ ನಿರ್ಮಾಣ ಮತ್ತು ಬಳಕೆಯ ಜೊತೆಗೆ ಸಮುದಾಯ ಶೌಚಾಲಯಗಳ ನಿರ್ಮಾಣ ಮತ್ತು ಬಳಕೆಯಿಂದ ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವೆಡೆಗಳಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈ ಶೌಚಾಲಯ ನಿರ್ಮಾಣಕ್ಕೆ ಇಷ್ಟೇ ಸಂಖ್ಯೆಯ ಗುರಿಗಳು ಇಲ್ಲವಾಗಿದ್ದು, ಎಷ್ಟೇ ಪ್ರಸ್ತಾವನೆಗಳು ಸಲ್ಲಿಕೆಯಾದರೂ, ಪರಿಶೀಲಿಸಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಹೆಚ್ಚು ಜನಸಂದಣಿ ಸೇರುವ ಜಾಗಗಳಲ್ಲಿ ಶೌಚಾಲಯದ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುವ ಜೊತೆಗೆ ಪರಿಸರದ ಸ್ವಚ್ಚತೆಯೂ ಸಾಧ್ಯವಾಗಲಿದೆ.
-ಪ್ರಸನ್ನ ಹೆಚ್., ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಉಡುಪಿ.