ಲೋಕಾಯುಕ್ತದಿಂದ ಶಾಸಕರ ಪುತ್ರನ ಬಂಧನ ಪ್ರಕರಣ | ನಿಷ್ಪಕ್ಷ ತನಿಖೆಯಾಗಲಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು, ಮಾ.3: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ನನ್ನು ಲೋಕಾಯುಕ್ತ ಬಂಧಿಸಿರುವ ಪ್ರಕರಣದಲ್ಲಿ ನಿಷ್ಪಕ್ಷ ತನಿಖೆಯಾಗಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎನ್ನುವುದು ನಮ್ಮ ನಿಲುವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಲೋಕಾಯುಕ್ತ ಸರ್ವ ಸ್ವತಂತ್ರವಾಗಿರುವ ಸಂಸ್ಥೆ. ಮಾಹಿತಿ ಹಾಗೂ ಹಣ ದೊರೆತಿರುವುದರ ಮೇಲೆ ಲೋಕಾಯುಕ್ತ ಮುಕ್ತ, ನಿಷ್ಪಕ್ಷ ತನಿಖೆ ಮಾಡಲಿದೆ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸುತ್ತಾರೆ. ಏನನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದರು.
ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇ ಭ್ರಷ್ಟಾಚಾರವನ್ನು ಮುಕ್ತವಾಗಿ ನಿಗ್ರಹಿಸುವುದಕ್ಕೆ. ಲೋಕಾಯುಕ್ತ ಇಲ್ಲದೆ ಇಂತಹ ಹಲವಾರು ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ನಡೆದು ಮುಚ್ಚಿಹೋಗಿವೆ ಎಂದರು.
ಕಾಂಗ್ರೆಸ್ ಮಂತ್ರಿಗಳು ಹಾಗೂ ಶಾಸಕರ ಮೇಲೆ 59 ಆರೋಪವಿತ್ತು. ಅವರ ಮಂತ್ರಿಗಳ ಮೇಲೆ ಇತ್ತು. ಎಸಿಬಿ ಇದ್ದದಕ್ಕೆ ಅವರು ಪ್ರಕರಣ ಮುಚ್ಚಿಹಾಕಿದರು. ಅವರು ಮುಚ್ಚಿ ಹಾಕಿದ್ದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟು ತನಿಖೆ ಮಾಡಿಸಲಾಗುವುದು ಎಂದರು.
ಅಬಕಾರಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಅಬಕಾರಿ ಹಾಗೂ ಕಾರ್ಮಿಕ ಇಲಾಖೆ ಹಗರಣ ಕೂಡ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.