ಉದ್ಯೋಗಕ್ಕೆ ಪ್ರತಿಯಾಗಿ ಜಮೀನು ಪಡೆದುಕೊಂಡ’ ಪ್ರಕರಣ: ಸಿಬಿಐಯಿಂದ ರಾಬ್ರಿ ದೇವಿ ವಿಚಾರಣೆ

ಪಾಟ್ನಾ, ಮಾ. 6: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಸಿಬಿಐ ತಂಡವೊಂದು ಸೋಮವಾರ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಯನ್ನು ಪಾಟ್ನಾದಲ್ಲಿರುವ ಅವರ ನಿವಾಸದಲ್ಲಿ ವಿಚಾರಣೆ ನಡೆಸಿತು.
‘‘ರಾಬ್ರಿ ದೇವಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಹಾಗೂ ಇದು ದಾಳಿಯೂ ಅಲ್ಲ, ಶೋಧವೂ ಅಲ್ಲ’’ ಎಂದು ಸಿಬಿಐ ಮೂಲಗಳು ಹೇಳಿವೆ. ಇದಕ್ಕಾಗಿ ಸಮಯವನ್ನು ನಿಗದಿಪಡಿಸಲಾಗಿತ್ತು ಎಂಬುದಾಗಿಯೂ ಅದು ಹೇಳಿದೆ.
ರಾಬ್ರಿ ದೇವಿ, ಅವರ ಗಂಡ ಹಾಗೂ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಮತ್ತು ಇತರ 13 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿದ ಐದು ತಿಂಗಳ ಬಳಿಕ ಈ ಬೆಳವಣಿಗೆ ಸಂಬಂಧಿಸಿದೆ.
ರೈಲ್ವೇಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಲಾಲು ಪ್ರಸಾದ್ ಯಾದವ್ ಅಭ್ಯರ್ಥಿಗಳಿಂದ ಜಮೀನು ಪಡೆದುಕೊಂಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಸರಕಾರದಲ್ಲಿ ಯಾದವ್ ರೈಲ್ವೇ ಸಚಿವರಾಗಿರುವಾಗ ಈ ಹಗರಣ ನಡೆದಿದೆ ಎನ್ನಲಾಗಿದೆ.
ಸಿಬಿಐಯು 2021 ಸೆಪ್ಟಂಬರ್ನಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿತ್ತು ಹಾಗೂ ಕಳೆದ ವರ್ಷದ ಮೇ 18ರಂದು ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿತ್ತು.
ಪ್ರಕರಣ ಸಂಬಂಧ ಯಾದವ್ ಕುಟುಂಬ ಸದಸ್ಯರು ಮತ್ತು ಇತರ ಆರೋಪಿಗಳು ದಿಲ್ಲಿಯ ನ್ಯಾಯಾಲಯಕ್ಕೆ ಹಾಜರಾಗುವ ಒಂದು ವಾರದ ಮೊದಲು ರಾಬ್ರಿ ದೇವಿಯ ವಿಚಾರಣೆ ನಡೆದಿದೆ.
ರಾಬ್ರಿ ದೇವಿ ಪುತ್ರಿ ಮೀಸಾ ಭಾರತಿ ಮತ್ತು ರೈಲ್ವೇಯ ಓರ್ವ ಮಾಜಿ ಜನರಲ್ ಮ್ಯಾನೇಜರ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಏನನ್ನು ಬಿತ್ತಿದ್ದಾರೋ ಅದನ್ನು ಕೊಯ್ಯುತ್ತಿದ್ದಾರೆ: ಬಿಜೆಪಿ
ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ವಿರುದ್ಧದ ಪ್ರಕರಣಗಳಲ್ಲಿ, ಸಿಬಿಐಯು ಒಂದು ‘‘ಸ್ವತಂತ್ರ ತನಿಖಾ ಸಂಸ್ಥೆಯಾಗಿ’’ ತನ್ನ ಕೆಲಸವನ್ನು ಮಾಡುತ್ತಿದೆ. ‘‘ಅವರು ತಾನು ಬಿತ್ತಿರುವುದನ್ನು ಈಗ ಕೊಯ್ಯುತ್ತಿದ್ದಾರೆ’’ ಎಂದು ಬಿಹಾರದ ಮಾಜಿ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ನಬಿನ್ ಸೋಮವಾರ ಹೇಳಿದ್ದಾರೆ.
ನಾನು ಮೊದಲೇ ಹೇಳಿದ್ದೆ: ತೇಜಸ್ವಿ ಯಾದವ್
ಬಿಹಾರದಲ್ಲಿ ಮಹಾಘಟಬಂಧನ ಸರಕಾರ ರಚನೆಯಾದಾಗಲೇ ಇಂಥ ದಾಳಿಗಳನ್ನು ನಾನು ನಿರೀಕ್ಷಿಸಿದ್ದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಸಿಬಿಐಯು ತನ್ನ ತಾಯಿ ರಾಬ್ರಿ ದೇವಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಭ್ರಷ್ಟಾಚಾರ ಆರೋಪಗಳನ್ನು ಹೊಂದಿರುವ ಪ್ರತಿಪಕ್ಷ ನಾಯಕನೊಬ್ಬ ಬಿಜೆಪಿ ಸೇರಿದರೆ ಅವರ ವಿರುದ್ಧದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ’’ ಎಂದು ಅವರು ಆರೋಪಿಸಿದರು.
ಬಿಜೆಪಿಯಿಂದ ಪ್ರತಿಪಕ್ಷಗಳ ದಮನ: ಕಾಂಗ್ರೆಸ್
ಸಿಬಿಐಯು ರಾಬ್ರಿ ದೇವಿಯನ್ನು ವಿಚಾರಣೆಗೆ ಒಳಪಡಿಸಿರುವುದನ್ನು ಕಾಂಗ್ರೆಸ್ ಸೋಮವಾರ ಖಂಡಿಸಿದೆ ಹಾಗೂ ಬಿಜೆಪಿಯು ಪ್ರತಿಪಕ್ಷಗಳ ಧ್ವನಿಯನ್ನು ‘‘ಹತ್ತಿಕ್ಕಲು’’ ಬಯಸಿದೆ ಎಂದು ಅದು ಆರೋಪಿಸಿದೆ.
ಬಿಜೆಪಿಗೆ ಶರಣಾಗಲು ಬಯಸದ ಪ್ರತಿಪಕ್ಷಗಳ ನಾಯಕರಿಗೆ ಅನುಷ್ಠಾನ ನಿರ್ದೇಶನಾಲಯ (ಈಡಿ) ಮತ್ತು ಸಿಬಿಐ ಮೂಲಕ ‘‘ಕಿರುಕುಳ’’ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದರು.
‘‘ಇಂದು ರಾಬ್ರಿ ದೇವಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರು ಬಿಜೆಪಿಗೆ ಶರಣಾಗಿಲ್ಲ. ಹಾಗಾಗಿ, ಅವರಿಗೆ ವರ್ಷಗಳಿಂದ ಕಿರುಕುಳ ನೀಡಲಾಗುತ್ತಿದೆ’’ ಎಂಬುದಾಗಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಇದು ತಪ್ಪು, ಅವಮಾನಕರ: ಕೇಜ್ರಿವಾಲ್
ರಾಬ್ರಿ ದೇವಿಯನ್ನು ಸಿಬಿಐ ತನಿಖೆಗೆ ಒಳಪಡಿಸಿರುವುದು ‘‘ಅವಮಾನಕರ’’ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಬಣ್ಣಿಸಿದ್ದಾರೆ.
‘‘ಇದೊಂದು ಅಭ್ಯಾಸವೇ ಆಗಿ ಹೋಗಿದೆ. ಪ್ರತಿಪಕ್ಷಗಳ ಸರಕಾರಗಳಿಗೆ ಕೆಲಸ ಮಾಡಲು ಅವರು ಬಿಡುವುದಿಲ್ಲ. ಪ್ರತಿಪಕ್ಷಗಳ ಸರಕಾರಗಳಿಗೆ ಕಿರುಕುಳ ನೀಡಲು ಅವರು (ಬಿಜೆಪಿ) ಈಡಿ, ಸಿಬಿಯ ಮತ್ತು ರಾಜ್ಯಪಾಲರುಗಳನ್ನು ಉಪಯೋಗಿಸಿಕೊಳ್ಳುತ್ತಾರೆ’’ ಎಂದು ದಿಲ್ಲಿಯಲ್ಲಿ ಆಶ್ರಮ್ ಫ್ಲೈಓವರ್ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕರೂ ಆಗಿರುವ ಕೇಜ್ರಿವಾಲ್ ಹೇಳಿದರು.







