ಬಿಜೆಪಿ ಮುಖಂಡರನ್ನು ಎಐಡಿಎಂಕೆ ಬೇಟೆಯಾಡುತ್ತಿದೆ: ಮಿತ್ರಪಕ್ಷದ ವಿರುದ್ಧ ಅಣ್ಣಾಮಲೈ ಆಕ್ರೋಶ
ನಾನು ಶಾಪಿಂಗ್ ಮಾಡಲು ನಿರ್ಧರಿಸಿದರೆ ಪಟ್ಟಿ ದೊಡ್ಡದಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ ಬಿಜೆಪಿ ಮುಖ್ಯಸ್ಥ

ಚೆನ್ನೈ: 'ಮಿತ್ರ ಪಕ್ಷ ಎಐಎಡಿಎಂಕೆ ರಾಜ್ಯದಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಬೇಟೆಯಾಡುತ್ತಿದೆ' ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಆರೋಪಿಸಿದ್ದಾರೆ. ತಮಿಳುನಾಡು ಬಿಜೆಪಿ ಐಟಿ ವಿಭಾಗದ ಮಾಜಿ ರಾಜ್ಯ ಕಾರ್ಯದರ್ಶಿ ದಿಲೀಪ್ ಕಣ್ಣನ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ಎಐಎಡಿಎಂಕೆಗೆ ಸೇರಿದ ಬೆನ್ನಲ್ಲೇ ಅಣ್ಣಾಮಲೈ ತಮ್ಮ ಮಿತ್ರಪಕ್ಷದ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ.
ಎಐಎಡಿಎಂಕೆಗೆ ಎಚ್ಚರಿಕೆ ನೀಡಿದ ಅಣ್ಣಾಮಲೈ, “ನಾನು ಶಾಪಿಂಗ್ ಮಾಡಲು (ಬೇಟೆಯಾಡಲು) ನಿರ್ಧರಿಸಿದರೆ, ನನ್ನ ಶಾಪಿಂಗ್ ಪಟ್ಟಿ ದೊಡ್ಡದಾಗಿರುತ್ತದೆ. ಆದರೆ ಸಮಯ ಮತ್ತು ಸ್ಥಳವನ್ನು ನಾನು ನಿರ್ಧರಿಸುತ್ತೇನೆ” ಎಂದು ಹೇಳಿದ್ದಾರೆ.
ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ ಕೆ ಪಳನಿಸ್ವಾಮಿ ವಿರುದ್ಧ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದು, “ತಮಿಳುನಾಡಿನ ಮಾಜಿ ಸಿಎಂ ಒಬ್ಬರು ಬಿಜೆಪಿಯಿಂದ ಎರಡನೇ ಹಂತ, ಮೂರನೇ ಹಂತ, ನಾಲ್ಕನೇ ಹಂತ ಮತ್ತು ಐದನೇ ಹಂತದ ಕಾರ್ಯಕರ್ತರನ್ನು ತೆಗೆದುಕೊಳ್ಳಲು ಬಯಸಿದ್ದಾರೆ, ಇದು ತಮಿಳುನಾಡಿನಲ್ಲಿ ಬಿಜೆಪಿ ಬೆಳೆದಿದೆ ಎಂಬುದನ್ನು ತೋರಿಸುತ್ತದೆ. ನಾವು ಇತರ ದ್ರಾವಿಡ ಪಕ್ಷಗಳ ನಾಯಕರನ್ನು ಬೇಟೆಯಾಡಿ ಬಿಜೆಪಿಯನ್ನು ಬೆಳೆಯಲು ಸಹಾಯ ಮಾಡಬೇಕಾದ ಸಮಯವಿತ್ತು. ಈಗ ಕೆಲವು ದ್ರಾವಿಡ ಪಕ್ಷಗಳು ಬೆಳೆಯಬೇಕಾದರೆ ಅವರು ಬಿಜೆಪಿಯಿಂದ ನಾಯಕರನ್ನು ಬೇಟೆಯಾಡಬೇಕಾಗಿದೆ” ಎಂದು ಹೇಳಿದ್ದಾರೆ.
“ಕುರುಕ್ಷೇತ್ರ ಯುದ್ಧದ ಮೊದಲು, ಜನರಿಗೆ ಪಕ್ಷಗಳನ್ನು ಬದಲಾಯಿಸಲು ಅವಕಾಶ ನೀಡಲಾಗಿತ್ತು. ಇನ್ನು ಕೆಲವೇ ತಿಂಗಳುಗಳಲ್ಲಿ ಪ್ರಾರಂಭವಾಗುವ ಯುದ್ಧಕ್ಕೆ ಎಲ್ಲರೂ ತಮ್ಮ ತಮ್ಮ ಪಕ್ಷಗಳೊಂದಿಗೆ ಹೋಗಲಿ” ಎಂದು ಅಣ್ಣಾಮಲೈ ಹೇಳಿದ್ದಾರೆ.
“ನಾನು ಚಪಾತಿ ಅಥವಾ ದೋಸೆ ಮಾಡಲು ಬಂದಿಲ್ಲ. ನಾನು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಂದಿದ್ದೇನೆ. ನಾನು ಬಿಜೆಪಿಯ ಮ್ಯಾನೇಜರ್ ಅಲ್ಲ. ನಾನೊಬ್ಬ ಬಿಜೆಪಿ ನಾಯಕ. ನೀನು ಏನು ಮಾಡಿದರೂ ಅದನ್ನು ನಾನೂ ಮಾಡುತ್ತೇನೆ. ನಾನು ಶಾಪಿಂಗ್ ಮಾಡಲು ನಿರ್ಧರಿಸಿದರೆ, ನನ್ನ ಶಾಪಿಂಗ್ ಪಟ್ಟಿ ದೊಡ್ಡದಾಗಿರುತ್ತದೆ. ಆದರೆ ಸಮಯ ಮತ್ತು ಸ್ಥಳವನ್ನು ನಾನು ನಿರ್ಧರಿಸುತ್ತೇನೆ” ಎಂದು ಕೆ ಅಣ್ಣಾಮಲೈ ಮಂಗಳವಾರ ಹೇಳಿದರು.
ಇದನ್ನು ಓದಿ: ಮಾಜಿ ಗೆಳೆಯನಿಂದ ಹಲ್ಲೆ, ಬೆದರಿಕೆ: ಮಲಯಾಳಂ ನಟಿ ಅನಿಕಾ ಆರೋಪ







