ಭಾರತದಿಂದ ಅಫ್ಘಾನಿಸ್ತಾನಕ್ಕೆ 20 ಸಾವಿರ ಟನ್ ಗೋಧಿ
ಹೊಸದಿಲ್ಲಿ: ಅಪ್ಘಾನಿಸ್ತಾನದ ನೆಲವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬಾರದು ಎಂದು ಭಾರತ ಹಾಗೂ ಇತರ ಐದು ಕೇಂದ್ರೀಯ ಏಷ್ಯಾ ದೇಶಗಳು ಮಂಗಳವಾರ ಆಗ್ರಹಿಸಿವೆ. ಏತನ್ಮಧ್ಯೆ ಅಪ್ಘಾನಿಸ್ತಾನಕ್ಕೆ 20 ಸಾವಿರ ಮೆಟ್ರಿಕ್ ಟನ್ ಗೋಧಿಯನ್ನು ಇರಾನ್ನ ಚಾಬಹಾರ್ ಬಂದರು ಮೂಲಕ ರವಾನೆ ಮಾಡುವುದಾಗಿ ಭಾರತ ಘೋಷಿಸಿದೆ.
ಅಪ್ಘಾನಿಸ್ತಾನ್ಕೆ ಸಂಬಂಧಿಸಿದಂತೆ ಭಾರತ- ಕೇಂದ್ರೀಯ ಏಷ್ಯಾ ಜಂಟಿ ಕಾರ್ಯಪಡೆಯ ಮೊದಲ ಸಭೆಯಲ್ಲಿ ಭಾರತ ಈ ಘೋಷಣೆ ಮಾಡಿದೆ. ಭಯೋತ್ಪಾದನೆ, ತೀವ್ರಗಾಮಿತ್ವ ಮತ್ತು ಕಳ್ಳಸಾಗಾಣಿಕೆಯ ವಿರುದ್ಧ ಜಂಟಿ ಹೋರಾಟ ನಡೆಸುವ ಸಂಬಂಧ ನಿರ್ಣಯವನ್ನೂ ಆಂಗೀಕರಿಸಲಾಗಿದೆ.
ಅಪ್ಘನ್ನರ ಹಕ್ಕಗಳನ್ನು ಗೌರವಿಸುವ ಮತ್ತು ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಹಕ್ಕು ನೀಡುವ ನಿಜವಾಗಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರತಿನಿಧಿತ್ವದ ರಾಜಕೀಯ ಸಂರಚನೆಯನ್ನು ಜಂಟಿ ಹೇಳಿಕೆಯಲ್ಲಿ ಪ್ರತಿಪಾದಿಸಲಾಗಿದೆ.
ತಾಲಿಬಾನ್ 2021ರ ಆಗಸ್ಟ್ನಲ್ಲಿ ಕಾಬೂಲ್ ನಗರವನ್ನು ವಶಪಡಿಸಿಕೊಂಡ ಬಳಿಕ ಅಫ್ಘಾನ್ ಜನತೆಗೆ ಭಾರತ 50 ಸಾವಿರ ಟನ್ ಗೋಧಿಯ ಆಶ್ವಾಸನೆ ನೀಡಿತ್ತು.