ಕೂಳೂರು ನದಿ ಸೇತುವೆ ಕಾಮಗಾರಿ ಸ್ಥಗಿತ ವಿರೋಧಿಸಿ ಸಿಪಿಎಂ ಪ್ರತಿಭಟನೆ

ಮಂಗಳೂರು: ಕೂಳೂರು ನದಿ ಸೇತುವೆ ಕಾಮಗಾರಿ ಸ್ಥಗಿತ ವಿರೋಧಿಸಿ ಶುಕ್ರವಾರ ಸಿಪಿಎಂ ಪಂಜಿಮೊಗರು ವಲಯ ಸಮಿತಿಯು ಕೂಳೂರು ಸೇತುವೆ ಬಳಿ ಪ್ರತಿಭಟನೆ ನಡೆಸಿತು.
ಕೂಳೂರು ನದಿ ಸೇತುವೆ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷ ಕಳೆದಿದ್ದು, ಹಳೆ ಸೇತುವೆ ಅಸಮರ್ಥ ಎಂದು ಹೆದ್ದಾರಿ ಪ್ರಾಧಿಕಾರದ ತಜ್ಞರು ವರದಿ ನೀಡಿ ನಾಲ್ಕು ವರ್ಷ ದಾಟಿದೆ. ಮಳೆಗಾಲ ಸಮೀಪಿಸುತ್ತಿದ್ದರೂ ನದಿ ಸೇತುವೆ ಕಾಮಗಾರಿಗೆ ಹಾಕಿರುವ ಮಣ್ಣಿನಿಂದ ಕೂಳೂರು ನದಿ ತಟದ ಪ್ರದೇಶಕ್ಕೆ ಮಳೆ ನೀರು ನಗ್ಗುವ ಅಪಾಯವಿದೆ. ಹಳೆ ಸೇತುವೆ ಕುಸಿಯುವ ಭೀತಿಯೂ ಇದೆ. ಹಾಗಾಗಿ ಕಾಮಗಾರಿಯನ್ನು ಶೀಘ್ರವಾಗಿ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಕೂಳೂರು ಸೇತುವೆ ಕಾಮಗಾರಿ ಮೂರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಇದು ಮತ್ತೊಂದು ಪಂಪ್ವೆಲ್ ಆಗದಿರಲಿ ಎಂದು ವ್ಯಂಗ್ಯವಾಡಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಕೂಳೂರು ಸೇತುವೆ ಕಾಮಗಾರಿ ಬಗ್ಗೆ ಶಾಸಕ ಭರತ್ ಶೆಟ್ಟಿಗಾಗಲಿ, ಸಂಸದರಿಗಾಗಲಿ ಆಸಕ್ತಿ ಇಲ್ಲದಂತಾಗಿದೆ. ಕಮಿಷನ್ ವಿಚಾರವಾಗಿ ಈ ಕಾಮಗಾರಿ ನಿಂತಿರಬಹುದೇ ಎಂದು ಸಾರ್ವಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗಿದೆ. ಗುರುಪುರ ಸೇತುವೆ ಬಗ್ಗೆ ಮಾತನಾಡುವ ಶಾಸಕರಿಗೆ ಅಪಾಯದ ಅಂಚಿನಲ್ಲಿರುವ ಕೂಳೂರು ಸೇತುವೆ ಬಗ್ಗೆ ಆಸಕ್ತಿ ಇಲ್ಲದಿರುವುದು ವಿಪರ್ಯಾಸ ಎಂದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸಿಪಿಎಂ ಪಂಜಿಮೊಗರು ಘಟಕದ ಮುಖಂಡರಾದ ಅನಿಲ್, ಪ್ರಮೀಳಾ, ಸೌಮ್ಯಾ, ಬಾವು, ಶರೀಫ್, ಬಶೀರ್, ಸಂತೋಷ್, ಕಸ್ತೂರಿ, ಫಾತಿಮಾ ಖಲೀಲ್, ಡಿವೈಎಫ್ಐ ಮುಖಂಡ ಶ್ರೀನಾಥ್ ಕುಲಾಲ್, ಮಕ್ಸೂದ್ ಕಾನ, ದಲಿತ ಸಂಘಟನೆಯ ಕೃಷ್ಣ ತಣ್ಣೀರುಬಾವಿ, ಸಾಮಾಜಿಕ ಮುಂದಾಳುಗಳಾದ ಕನಕದಾಸ್, ಹನೀಫ್ ಕೂಳೂರು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.