ಮಂಗಳೂರು: ಮಹಿಳೆಯನ್ನು ಬೆದರಿಸಿ ಹಣ ವಸೂಲಿ ಪ್ರಕರಣ; ಆರೋಪಿ ಸೆರೆ

ಮಂಗಳೂರು, ಮಾ.11: ಪೊಲೀಸ್ ಎಂದು ಹೇಳಿಕೊಂಡು ಮಹಿಳೆಯನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪಿ ಈಶ್ವರನಗರ ಸರಕಾರಿ ಗುಡ್ಡೆಯ ಶಿವರಾಜ್ ದೇವಾಡಿಗ (28) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಈತ ಪೊಲೀಸರ ಸಮವಸ್ತ್ರ ಹೋಲುವ ಬಟ್ಟೆ ಧರಿಸಿ ಸವಿತಾ ಎಂಬವರ ಬಳಿ ತೆರಳಿ ‘ನಿಮ್ಮ ಮಸಾಜ್ ಪಾರ್ಲರ್ ಬಗ್ಗೆ ಹಾಗೂ ಹೆಚ್ಚು ಬಂಗಾರ ಮತ್ತು ಹಣ ಇಟ್ಟುಕೊಂಡಿರುವ ಬಗ್ಗೆ ದೂರು ಬಂದಿದೆ. ಅದನ್ನು ಮುಚ್ಚಿ ಹಾಕಲು ಹಣ ನೀಡಬೇಕು. ಇಲ್ಲದಿದ್ದರೆ ದಾಳಿ ನಡೆಸುತ್ತೇವೆ’ ಎಂದು ಬೆದರಿಸಿ 38,000 ರೂ.ಗಳನ್ನು ಪಡೆದು ವಂಚಿಸಿದ್ದ. ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಮಹಿಳೆಯು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿ ಶಿವರಾಜ್ ಸುಮಾರು ಎಂಟು ತಿಂಗಳುಗಳ ಹಿಂದೆ ಗೃಹರಕ್ಷನಾಗಿದ್ದು ಪಾಂಡೇಶ್ವರ ಅಗ್ನಿಶಾಮಕ ದಳದೊಂದಿಗೆ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೇವೆಯಿಂದ ಅಮಾನತು: ಆರೋಪಿ ಶಿವರಾಜ್ ಗೃಹರಕ್ಷಕದಳದ ಕರ್ತವ್ಯಕ್ಕೆ ನಿಯಮಿತವಾಗಿ ಹಾಜರಾಗುತ್ತಿರ ಲಿಲ್ಲ. ಹಾಗಾಗಿ ಕೆಲವು ತಿಂಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಪೊಲೀಸರಿಂದ ಅಧಿಕೃತ ಮಾಹಿತಿ ಪಡೆದು ಗೃಹರಕ್ಷಕ ಇಲಾಖೆಯ ನಿಯಮಾವಳಿಯಂತೆ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಗೃಹರಕ್ಷಕ ದಳದ ದ.ಕ ಜಿಲ್ಲಾ ಕಮಾಂಡೆಂಟ್ ಡಾ.ಮುರಲಿ ಮೋಹನ್ ಚೂಂತಾರು ತಿಳಿಸಿದ್ದಾರೆ.
ಆರೋಪಿ 5 ವರ್ಷದಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಕೂಡ ಹೋಂಗಾರ್ಡ್ ಆಗಿ ಸೇವೆ ಸಲ್ಲಿಸಿದ್ದು, ಆದರೆ 8 ತಿಂಗಳ ಹಿಂದೆ ಹೋಂ ಗಾರ್ಡ್ ಕೆಲಸ ಬಿಟ್ಟು ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದೆ.
38 ಸಾವಿರ ರೂ. ನೀಡಿದ ಬಗ್ಗೆ ಮಹಿಳೆಯು ತನ್ನ ಸಂಬಂಧಿ ವೈದ್ಯರೊಬ್ಬರ ಬಳಿ ಹೇಳಿದ್ದರು. ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ವೈದ್ಯರು ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದರು. ಅದರಂತೆ ದೂರು ನೀಡಿದಾಗ ಸತ್ಯ ಬಯಲಾಯ್ತು ಎಂದು ಪೊಲೀಸರು ತಿಳಿಸಿದ್ದಾರೆ.