ಬಸ್ರೂರು: 400 ವರ್ಷಗಳ ಹಳೆಯ ಲಿಂಗ ಮುದ್ರೆ ಕಲ್ಲು ಪತ್ತೆ

ಕುಂದಾಪುರ, ಮಾ.12: ಬಸ್ರೂರು ಗ್ರಾಮ ಪಂಚಾಯತ್ ಹಿಂಭಾಗದ ಅಶೋಕ ಪಾರ್ಕ್ನಲ್ಲಿ 400 ವರ್ಷಗಳ ಹಳೆಯ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿದೆ.
ಪಾರ್ಕ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಗ್ರಾಪಂ ಸದಸ್ಯರಾದ ಮಹೇಶ್ ಮೆಂಡನ್ ನೇತೃತ್ವದಲ್ಲಿ ಪಾರ್ಕ್ನ ಜಾಗ ಸಮತಟ್ಟು ಮಾಡುವ ಸಂದರ್ಭ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ. ಬಳಿಕ ಈ ಬಗ್ಗೆ ಭಾರತೀಯ ಇತಿಹಾಸ ಸಂಕಲನ ಸಮಿತಿ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಗಮನಕ್ಕೆ ತರಲಾಯಿತು.
ಕಲ್ಲಿನಲ್ಲಿ ಸೂರ್ಯ, ಚಂದ್ರ, ಶಿವಲಿಂಗ, ನಂದಿ ವಿಗ್ರಹ ಇರುವುದು ಕಂಡು ಬಂದಿದೆ. ಶೈವರು ಶಿವನನ್ನು, ವೈಷ್ಣವರು ವಿಷ್ಣುವಿನನ್ನು, ಜೈನರು ತೀರ್ಥಂಕರರನ್ನು ಆರಾಧಿಸುವುದು ಸಾಮಾನ್ಯವಾಗಿತ್ತು. ಶೈವರ ಗಡಿಗಳನ್ನು ಲಿಂಗ ಮುದ್ರೆ ಕಲ್ಲನ್ನು, ವೈಷ್ಣವರು ವಾಮನ ಮುದ್ರೆ ಕಲ್ಲನ್ನು, ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕುತ್ತಿದ್ದರು. ಆ ಮೂಲಕ ಅವರ ಗಡಿಗಳನ್ನು ಗುರುತು ಮಾಡುವುದು ಸಹಜವಾಗಿತ್ತು. ಅಂತೆಯೇ ಬಸ್ರೂರು ಲಿಂಗ ಮುದ್ರೆ ಕಲ್ಲುಗಳನ್ನು ಗಡಿಗೆ ಸಂಬಂಧಿಸಿದ ಗಡಿಯ ಕಲ್ಲುಗಳನ್ನು ಹಾಕಲಾಗಿತ್ತು ಎಂದು ಇತಿಹಾಸ ಸಂಶೋಧಕ ಫ್ರೊ.ಟಿ.ಮುರುಗೇಶ್ ತಿಳಿಸಿದ್ದಾರೆ.
ಈ ಲಿಂಗ ಮುದ್ರೆ ಕಲ್ಲು ಪತ್ತೆ ಹಚ್ಚುವಲ್ಲಿ ಪಾರ್ಕ್ ಸಮಿತಿಯ ಕಾರ್ಯದರ್ಶಿ ನಿತೇಶ್ ಶೆಟ್ಟಿ ಬಸ್ರೂರು, ಮಧುಸೂಧನ್ ಭಟ್ ಸಹಕರಿಸಿದ್ದಾರೆ.