ಬಿ.ಸಿ.ರೋಡ್| ಪಿಕಪ್ - ಓಮ್ನಿ ಡಿಕ್ಕಿ: ಚಾಲಕ ಗಂಭೀರ

ಬಂಟ್ವಾಳ, ಮಾ.13: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಎಂಬಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಪಿಕಪ್ ವಾಹನ ಒಮ್ನಿ ಕಾರಿಗೆ ಡಿಕ್ಕಿ ಹೊಡೆದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ತಲಪಾಡಿ ಬಸ್ ಡಿಪೋ ಬದಿಯ ರಸ್ತೆಯಲ್ಲಿ ಮರಗಳನ್ನು ತುಂಬಿ ಬರುತ್ತಿದ್ದ ಪಿಕಪ್ ವಾಹನ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಮಾಡಿ ಬಿಸಿರೋಡು ಕಡೆಗೆ ಕ್ರಾಸ್ ಮಾಡುವ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಬ್ರಹ್ಮರಕೋಟ್ಲು ಮೂಲದವರು ಎಂದು ಹೇಳಲಾಗುತ್ತಿದೆಯಾದರೂ ಆತನ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಎರಡು ಕಾಲಿಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮನೆಯ ಮಾಲಕನ ಜೊತೆ ಒಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಮನೆಯ ಸಾಕು ಬೆಕ್ಕು ಅಪಘಾತದ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ವಿರುದ್ಧ ದಿಕ್ಕಿನಲ್ಲಿ ಬಂದ ಪಿಕಪ್ ವಾಹನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡು ಕಡೆಯಿಂದ ಮಂಗಳೂರು ಕಡೆಗೆ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಒಮ್ನಿ ಕಾರು ಪುಡಿಪುಡಿಯಾಗಿದೆ. ಕಾರಿನೊಳಗೆ ಕೆಲಹೊತ್ತು ಚಾಲಕ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಕಾರದಿಂದ ಕಾರಿನಿಂದ ಹೊರಕ್ಕೆ ತೆಗೆಯಲಾಗಿದೆ. ಮರಗಳನ್ನು ತುಂಬಿಸಿಕೊಂಡಿದ್ದ ಪಿಕಪ್ ವಾಹನ ರಾಷ್ಟ್ರೀಯ ಹೆದ್ದಾರಿಗೆ ಬಂದು ಅ ಬಳಿಕ ತಲಪಾಡಿಯಲ್ಲಿರುವ ವೈಜ್ಞಾನಿಕ ಕ್ರಾಸಿಂಗ್ ನಲ್ಲಿ ಕ್ರಾಸ್ ಮಾಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಕಂಬ , ತಲಪಾಡಿ, ತುಂಬೆ ಸಹಿತ ಅನೇಕ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬೈಕ್ ಸಹಿತ ಘನ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಅಪಾಯಕಾರಿ ರೀತಿಯ ಚಾಲನೆ ಮಾಡುತ್ತಿದ್ದು, ಪೋಲೀಸರು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.