ಕಲ್ಲಡ್ಕ: ಕಾರಿನ ಸೀಟಿನಲ್ಲಿ ಮಲಗಿದ್ದ ಯುವಕ ಅನುಮಾನಾಸ್ಪದ ಸಾವು

ಬಂಟ್ವಾಳ: ಕಾರಿನೊಳಗೆ ಯುವಕನೋರ್ವ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಗೋಳ್ತಮಜಲು ಗ್ರಾಮದ ಹೊಸೈಮಾರ್ ನಿವಾಸಿ ಜಗದೀಶ್ ಎಂದು ಗುರುತಿಸಲಾಗಿದೆ.
ಜಗದೀಶ್ ವೃತ್ತಿಯಲ್ಲಿ ಚಾಲಕನಾಗಿದ್ದು, ಕಳೆದ ಕೆಲವು ವರ್ಷಗಳ ಹಿಂದೆ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ಬೆಳಿಗ್ಗೆ ಬಾವನ ಜೊತೆ ತರವಾಡು ಮನೆಯಲ್ಲಿ ದೈವದ ಕಾರ್ಯಕ್ಕೆ ಮಕ್ಕಳ ಜೊತೆ ಹೋಗಿದ್ದರು. ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ತಲುಪಿದ್ದಾಗ ಮಧ್ಯಾಹ್ನ ಸುಮಾರು 1.30 ಗಂಟೆಗೆ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಹೇಳಿದ್ದು, ನಾನು ಮತ್ತೆ ಮನೆಗೆ ಬರುತ್ತೇನೆ ನೀವು ಮಕ್ಕಳ ಜೊತೆ ಮನೆಗೆ ಹೋಗಿ ಎಂದು ಕಳುಹಿಸಿ ಕಾರಿನ ಸೀಟಿನಲ್ಲಿಯೇ ಮಲಗಿದ್ದರು ಎನ್ನಲಾಗಿದೆ.
ಆದರೆ ಸಂಜೆ 7 ಗಂಟೆಯಾದರೂ ಈತ ಮನೆಗೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಕಾರಿನ ಗ್ಲಾಸ್ ಹಾಕಿ ಮಲಗಿದ್ದರಿಂದ ಕಾರಿನ ಡೋರ್ ಓಪನ್ ಮಾಡಿದಾಗ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.
ಕಾರಿನ ಕಿಟಕಿ, ಬಾಗಿಲನ್ನು ಮುಚ್ಚಿ ಮಲಗಿದ್ದರಿಂದ ಗಾಳಿ ಇಲ್ಲದೆ ಸಾವನ್ನಪ್ಪಿದ್ದಾರಾ? ಅಥವಾ ಇನ್ನಾವುದೇ ಕಾಯಿಲೆಯಿಂದ ಮೃತಪಟ್ಟಿದ್ದಾರಾ? ಎಂಬುದು ವೈದ್ಯಕೀಯ ರಿಪೋರ್ಟ್ ಹಾಗೂ ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ.